Friday, September 18, 2009

ಮರಾಠಿ ಕಿರುತೆರೆಯಲ್ಲಿ ಶಿವಾಜಿ ಅಲೆ !


ಮರಾಠಿ ಕಿರುತೆರೆಯಲ್ಲೀಗ ಹೊಸ ಅಲೆ, ಸ್ಟಾರ್ ಪ್ರವಾಹ್ ಚಾನೆಲ್‌ನಲ್ಲಿ ಮೂಡಿ ಬರುತ್ತಿರುವ ರಾಜಾ ಶಿವ ಛತ್ರಪತಿ ಧಾರಾವಾಹಿ ದೊಡ್ಡ ಬಜೆಟ್‌ನ ಸಿನಿಮಾದಷ್ಟೇ ಸುದ್ದಿ ಮಾಡುತ್ತಿದೆ. ಇದಕ್ಕೆಲ್ಲ ಕಾರಣವಾಗಿರುವುದು ವಿಭಿನ್ನ ಮಾದರಿಯ ಕತೆ, ಸರಳ, ನೇರ ಸಂಭಾಷಣೆ, ಅದ್ಭುತ ಕಲಾ ನಿರ್ದೇಶನ ಹಾಗೂ ಭಾಳ ಚಂದ ಅಭಿನಯ.
ಮುಂಬೈನ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿರುವ ಡಾ.ಅಮೋಲ್ ಕೊಲ್ಹೆ ಧಾರಾವಾಹಿಯಲ್ಲಿ ಶಿವಾಜಿ ಮಹಾರಾಜರ ಪಾತ್ರದಲ್ಲಿದ್ದಾರೆ. ಇಡೀ ಧಾರಾವಾಹಿಯನ್ನು ಆವಾಹಿಸಿರುವುದು ಡಾ.ಅಮೋಲ್ ಹಾಗೂ ಔರಂಗಜೇಬ್ ಪಾತ್ರ ಮಾಡಿರುವ ಶಾಂತಿ ಧಾರಾವಾಹಿಯಿಂದ ಪ್ರಖ್ಯಾತಿ ಪಡೆದ ನಿತಿನ್ ಕಾರ್ಯೇಕರ್. ಇಲ್ಲಿ ಶಿವಾಜಿ ಮಹಾರಾಜರನ್ನು ಬಹುಪರಾಕ್ ಮೂಲಕ ಹೊಗಳುವ, ಓತಪ್ರೋತವಾಗಿ ತೋರಿಸುವ ದೃಶ್ಯಗಳಿಲ್ಲ. ಬದಲು ನೇರ, ಸರಳ ನಿರೂಪಣೆ ಮೂಲಕ ಶಿವಾಜಿ ಮಹಾರಾಜರ ಜೀವನ ಬಿಂಬಿಸಿದ್ದು ಹೈಲೈಟ್. ಶಿವಾಜಿ ವಿರೋಗಳೇ ಶಿವಾಜಿಯನ್ನು ಹೊಗಳುವ, ಆಕ್ರೋಶ ವ್ಯಕ್ತಪಡಿಸುವ ದೃಶ್ಯಗಳ ಮೂಲಕ ಜೀವಕಳೆ ತುಂಬಲಾಗಿದೆ.
ದೇವದಾಸ್, ಲಗಾನ್ ಚಿತ್ರಗಳ ನಿರ್ಮಾಪಕ ನಿತಿನ್ ಚಂದ್ರಕಾಂತ್ ದೇಸಾಯಿ ಧಾರಾವಾಹಿಯ ನಿರ್ಮಾಪಕರು. ಹೇಮಂತ್ ದೇವಧರ್ ನಿರ್ದೇಶಕರು. ಶಿವಾಜಿ ಮಹಾರಾಜರ ಕೋಟೆಗಳು, ಮಹಾರಾಷ್ಟ್ರದ ದೇಸಿಯತೆ, ಸಂಸ್ಕೃತಿ ಸಾರುವ ಸಂಗೀತದೊಂದಿಗೆ ಮರಾಠಿ ತಿಳಿಯದವರೂ ಕೂಡ ಕುತೂಹಲದಿಂದ ಟಿವಿ ಕಡೆಗೆ ನೋಟ ಹರಿಸುವಂತೆ ಮಾಡಿದೆ ಶಿವಛತ್ರಪತಿ.
ಖ್ಯಾತ ನಟಿ ಮೃಣಾಲ್ ಕುಲಕರ್ಣಿ ಜೀಜಾಬಾಯಿ ಪಾತ್ರದಲ್ಲಿದ್ದರೆ, ಸಾಹಸ ನಿರ್ದೇಶನದ ಹೊಣೆ ಹೊತ್ತಿರುವುದು ಜೋಧಾ ಅಕ್ಬರ್ ಚಿತ್ರದ ಸಾಹಸ ನಿರ್ದೇಶಕ ರವಿ ದಿವಾನ್. ಕಳೆದ ನವೆಂಬರ್‌ನಿಂದ ಪ್ರಾರಂಭಗೊಂಡಿರುವ ಈ ಸೀರಿಯಲ್ ಸದ್ಯ ನಂ.೧ ಪಟ್ಟ ಬಿಟ್ಟುಕೊಡುತ್ತಿಲ್ಲ. ಮಹಾನ್ ಯೋಧ, ಪ್ರಜಾ ಪ್ರೇಮಿ ಹಾಗೂ ಧರ್ಮ ರಕ್ಷಕ ರಾಜನನ್ನು ಉತ್ಪ್ರೇಕ್ಷೆಯಿಲ್ಲದೆ ತೋರಿಸಿರುವುದು ಹೆಗ್ಗಳಿಕೆ. ಧಾರಾವಾಹಿಯ ಟೈಟಲ್ ಗೀತೆಗೂ ಕೂಡ ಅಂತರ್ಜಾಲದಲ್ಲಿ ಅಪಾರ ಬೇಡಿಕೆ. ಇಂತಹದೊಂದು ಬೃಹತ್ ಧಾರಾವಾಹಿಯ ಮೂಲಕ ಮರಾಠಿ ಕಿರುತೆರೆಯಲ್ಲಿ ಸುದ್ದಿಗೆ ಕಾರಣವಾಗಿರುವ ಸ್ಟಾರ್ ಪ್ರವಾಹ್ ಚಾನೆಲ್‌ನ ಉದ್ಘಾಟನೆ ಸಂದರ್ಭದಲ್ಲಿ ಸಿಇಓ ಉದಯ್ ಶಂಕರ್ ಹೇಳಿದ ಮಾತು ಹೀಗಿತ್ತು : ರಾಜಾ ಶಿವಛತ್ರಪತಿ ಧಾರಾವಾಹಿ ಮೂಲಕ ಮರಾಠಿ ಕಿರುತೆರೆಯಲ್ಲಿ ಹೊಸ ಬೆಳಕು ಕಾಣಲಿದೆ. ಕಿರುತೆರೆಯನ್ನು ಹಿರಿತೆರೆಯನ್ನಾಗಿಸುವ ಸಾಧ್ಯತೆ ಈ ಸೀರಿಯಲ್‌ಗಿದೆ. ಈ ಮಾತು ಈಗ ನಿಜವಾಗಿದೆ !.