Tuesday, July 28, 2009

ಸಾಂಗತ್ಯದ ಇನ್ನೊಂದು ಹೆಜ್ಜೆ

ಆ. 8 ಮತ್ತು 9 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಸಾಂಗತ್ಯ ಆಯೋಜಿಸಿರುವ ಎರಡನೇ ಚಿತ್ರೋತ್ಸವಕ್ಕೆ ಹೆಸರು ನೋಂದಣಿ ಆರಂಭವಾಗಿದೆ.

ಈ ಬಾರಿ ಹೆಸರು ನೋಂದಣಿ ಕಡ್ಡಾಯವಾಗಿದ್ದು, ಸಾಂಗತ್ಯ ಹಲವೆಡೆ ಮಾಹಿತಿ ಮತ್ತು ನೋಂದಣಿಗೆ ತನ್ನ ಪ್ರತಿನಿಧಿಗಳನ್ನು ನಿಯೋಜಿಸಿದೆ. ಜತೆಗೆ ಸಾಕ್ಷ್ಯಚಿತ್ರಗಳನ್ನೂ ಆಹ್ವಾನಿಸಿದೆ. ಆ. 5 ರೊಳಗೆ 20 ನಿಮಿಷಗಳೊಳಗಿನ ಸಾಕ್ಷ್ಯಚಿತ್ರಗಳ ಪ್ರತಿಗಳನ್ನು ಕಳುಹಿಸಬಹುದು. ಆಯ್ಕೆಯಾದ ಎರಡು ಸಾಕ್ಷ್ಯಚಿತ್ರಗಳಿಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.

ಈ ಬಾರಿ ಚಲನಚಿತ್ರೋತ್ಸವದಲ್ಲಿ ಸಾಕಷ್ಟು ಹೊಸತನವನ್ನು ಹೊಂದಿದ್ದು, ಚರ್ಚೆ, ಸಂವಾದಕ್ಕೆ ಅನುಕೂಲವಾಗುವಂತೆ ಯೋಜಿಸಲಾಗಿದೆ. ವಿದೇಶಿ ಭಾಷೆಗಳ ಚಿತ್ರಗಳೊಂದಿಗೆ, ದೇಶಿ ಅದರಲ್ಲೂ ದಕ್ಷಿಣ ಭಾರತೀಯ ಚಲನಚಿತ್ರಗಳನ್ನೂ ಪ್ರದರ್ಶಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

ಹೊಸಬರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲೂ ಆಲೋಚಿಸಿದ್ದು, ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಹೆಸರು ನೋಂದಾಯಿಸಿದವರು ತಕ್ಷಣವೇ ತಮ್ಮ ಹೆಸರನ್ನು ದಾಖಲಿಸಬಹುದು.

ಬಹಳ ವಿಶಿಷ್ಟವಾಗಿ ಈ ಉತ್ಸವವನ್ನು ಸಂಘಟಿಸಿದ್ದು, ಸಿನಿಮಾ ಗ್ರಹಿಕೆ, ಸಿನಿಮಾ ನಿರ್ಮಾಣ ಇತ್ಯಾದಿ ಬಗ್ಗೆಯೂ ಮಾಹಿತಿ ನೀಡಲಾಗುವುದು. ಇದು ಸಿನಿಮಾ ಗ್ರಹಿಕೆಯ ವಿಧಾನವನ್ನು ಅರಿಯಲೆಂದೇ ರೂಪಿಸಿದ್ದು, ಆಸಕ್ತರು ಭಾಗವಹಿಸಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ 93433 81802, 98444 91532 ಗೆ ಸಂಪರ್ಕಿಸಬಹುದು.

ಪ್ರವೇಶ ಶುಲ್ಕ 300 ರೂ.. ಬೆಂಗಳೂರಿನಲ್ಲಿ ಮಹೇಶ್ ಹೆಗಡೆ-99864 11247, ಪ್ರವೀಣ್ ಬಣಗಿ- 98444 91532, ಮೈಸೂರಿನಲ್ಲಿ ನಾವಡ- 93433 81802, ಬಾಗಲಕೋಟೆ- ರವಿರಾಜ್ ಗಲಗಲಿ-93433 81818, ಉಡುಪಿ, ದಕ್ಷಿಣ ಕನ್ನಡದಲ್ಲಿ ಸಿಬಂತಿ ಪದ್ಮನಾಭ-94495 25854, ತೀರ್ಥಹಳ್ಳಿಯಲ್ಲಿ ಮಧುಕರ್ ಮಯ್ಯ-94481 54298, ಚಿಕ್ಕಮಗಳೂರು, ಕೊಪ್ಪದಲ್ಲಿ ದೀಪಾ ಹಿರೇಗುತ್ತಿ-94804 76176…ಇವರಲ್ಲಿ ಹೆಸರು ನೋಂದಾಯಿಸಬಹುದು.

ಸಾಕ್ಷ್ಯಚಿತ್ರಗಳಿಗೆ ಆಹ್ವಾನ
ಚಿತ್ರೋತ್ಸವದಲ್ಲಿ ಹವ್ಯಾಸಿಗಳು ನಿರ್ಮಿಸಿದ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುವುದು. ಸಾಕ್ಷ್ಯಚಿತ್ರಗಳು ೨೦ ನಿಮಿಷಗಳೊಳಗಿರಬೇಕು. ಬಂದ ಸಾಕ್ಷ್ಯಚಿತ್ರಗಳನ್ನು ಪ್ರದರ್ಶನಕ್ಕೆ ತಜ್ಞರ ಸಮಿತಿ ಆಯ್ಕೆ ಮಾಡಲಿದೆ. ಆಸಕ್ತರು ತಾವು ನಿರ್ಮಿಸಿದ ಸಾಕ್ಷ್ಯಚಿತ್ರಗಳ ಪ್ರತಿಗಳನ್ನು ಸಾಂಗತ್ಯ, c/o ಸುಧಾ, 905/175 ಎ, 7 ನೇ ಕ್ರಾಸ್, ನಾಲ್ಕನೇ ಮುಖ್ಯರಸ್ತೆ, ಸಾರ್ವಜನಿಕ ಹಾಸ್ಟೆಲ್ ರಸ್ತೆ, ವಿದ್ಯಾರಣ್ಯಪುರಂ, ಮೈಸೂರು 570 008 ಇಲ್ಲಿಗೆ ಕಳುಹಿಸಬಹುದು.

Monday, July 13, 2009

ಮೌನದ ಭಾಷೆ-ನಿಶಾಂತ್



ಆ ಪುಟ್ಟ ಹಳ್ಳಿಯಲ್ಲಿ ಮೌನವೇ ಸರ್ವತ್ರ ಸಾಧನ, ಮೌನವೇ ಭಾಷೆ, ಮೌನದ್ದೇ ಸಂವಹನ. ಗ್ರಾಮದ ಜಮೀನ್ದಾರ ಸಹೋದರರು ನಡೆಸುವ ದೌರ್ಜನ್ಯ, ಅತ್ಯಾಚಾರಕ್ಕೆ ಮೌನವೇ ಉತ್ತರ. ಖ್ಯಾತ ನಿರ್ದೇಶಕ ಶ್ಯಾಂ ಬೆನಗಲ್ ೧೯೭೬ರಲ್ಲಿ ನಿರ್ದೇಶಿಸಿದ ನಿಶಾಂತ್ ಚಿತ್ರದ ಒನ್ ಲೈನ್ ಕತೆಯಿದು.
ನಿಶಾಂತ್ ಅರ್ಥಾತ್ ರಾತ್ರಿಯ ಕೊನೆ, ಚಿತ್ರದಲ್ಲೆಲ್ಲ ಕತ್ತಲೆ ಬೆಳಕಿನ ಆಟವನ್ನಾಡಿದ್ದಾರೆ ಶ್ಯಾಂ. ೧೯೪೫ರಲ್ಲಿ ಆಂಧ್ರ ಪ್ರದೇಶದ ಗ್ರಾಮವೊಂದರಲ್ಲಿ ನಡೆಯುವ ಜಮೀನ್ದಾರರ ದೌರ್ಜನ್ಯ ಇಲ್ಲಿ ಕತೆಯಾಗಿದೆ. ಆ ಹಳ್ಳಿಯಲ್ಲಿ ಜಮೀನ್ದಾರರು ಹೇಳಿದ್ದೆ ಮಾತು, ಆಡಿದ್ದೇ ಆಟ. ಹಿರಿಯಣ್ಣ ಹಾಗೂ ಇಬ್ಬರು ಸಹೋದರರ ಜಮೀನ್ದಾರರ ಕುಟುಂಬ ಅಕ್ಷರಶ: ಹಳ್ಳಿಯನ್ನು ನರಕವಾಗಿಸುತ್ತಾರೆ. ಸಂತೆಯಲ್ಲಿ ಕೋಳಿ ಮಾರುವವಳ ಬುಟ್ಟಿಗೆ ಜಮೀನ್ದಾರರ ಸಹೋದರರು ಕೈ ಹಾಕಿದರೆ ಬುಟ್ಟಿಯಲ್ಲಿನ ಕೋಳಿಗಳು ಅವರ ಹೊಟ್ಟೆ ಹಸಿವು ತಣಿಸಿದರೆ, ಕೋಳಿ ಮಾರುವಾಕೆ ದೇಹದ ಹಸಿವು ಪೂರೈಸಬೇಕು. ಹಿರಿಯಣ್ಣ (ಅಮರೀಶ್ ಪುರಿ), ಕಿರಿಯವ (ಡಾ.ಮೋಹನ್ ಅಗಾಸೆ), ಚಿಕ್ಕ ಸಹೋದರ (ಅನಂತ್ ನಾಗ್) ಸುತ್ತ ಚಿತ್ರದ ಕತೆ ಸುತ್ತುತ್ತದೆ.
ಗ್ರಾಮಕ್ಕೆ ಬರುವ ಶಾಲಾ ಮಾಸ್ತರ್(ಗಿರೀಶ್ ಕಾರ್ನಾಡ್) ಹೆಂಡತಿ ಸುಶೀಲಾ (ಶಬಾನಾ ಆಜ್ಮಿ) ಜಮೀನ್ದಾರ ಸಹೋದರರ ಕಣ್ಣಿಗೆ ಬೀಳುತ್ತಾಳೆ. ಅದೊಂದು ದಿನ ಆಕೆಯನ್ನು ಅನಾಮತ್ತಾಗಿ ಎತ್ತಿಕೊಂಡು ಹೋಗುವ ಜಮೀನ್ದಾರರು ಆಕೆಯನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಆಸೆ ಪೂರೈಸಿಕೊಳ್ಳುತ್ತಾರೆ. ಅದು ಜಮೀನ್ದಾರರ ವಿಷಯವಾಗಿರುವುದರಿಂದ ಯಾರೂ ಬಾಯಿ ಬಿಡುವುದಿಲ್ಲ. ಪೊಲೀಸರು, ಕಲೆಕ್ಟರ್ ಕಚೇರಿ ಹೀಗೆ ಕಂಡ ಕಂಡಲೆಲ್ಲ ಅಲೆದಾಡಿ ಪತ್ನಿಯನ್ನು ವಾಪಸ್ ಪಡೆಯಲು ನಡೆಸಿದ ಪ್ರಯತ್ನಗಳು ವಿಫಲವಾಗುತ್ತವೆ. ಇತ್ತ ಜಮೀನ್ದಾರರ ಮನೆಯ ವಾತಾವರಣಕ್ಕೆ ಹೊಂದಿಕೊಂಡ ಸುಶೀಲಾ ಪ್ರತಿರೋಧದ ಶಕ್ತಿ ಕಳೆದುಕೊಳ್ಳುತ್ತಾಳೆ. ಜಮೀನ್ದಾರನ ಕಿರಿಯ ಸಹೋದರ (ನಾಸಿರುದ್ದೀನ್ ಶಾ)ಆಕೆಯಲ್ಲಿ ಅನುರಕ್ತನಾಗುತ್ತಾನೆ.
ಒಮ್ಮೆ ದೇವಾಲಯದ ಎದುರು ಮಾಸ್ತರ್ ಹಾಗೂ ಆತನ ಪತ್ನಿ ಮುಖಾಮುಖಿಯಾಗುತ್ತಾರೆ. ನನ್ನನ್ನು ಅಪಹರಿಸಿಕೊಂಡು ಹೋದರೂ ನೀವು ಬಿಡಿಸಲು ಏಕೆ ಯತ್ನಿಸಿಲ್ಲ ಎಂದು ಪ್ರಶ್ನಿಸುವ ಸುಶೀಲಾ ಜಮೀನ್ದಾರನ ಮನೆಗೆ ವಾಪಸ್ಸಾಗುತ್ತಾಳೆ. ದೇವಾಲಯದ ಪೂಜಾರಿಯಿಂದ ನೈತಿಕ ಸ್ಥೈರ್ಯ ಪಡೆಯುವ ಶಾಲಾ ಮಾಸ್ತರ್ ಉತ್ಸವದ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸಿ ದಂಗೆ ಏಳುತ್ತಾನೆ. ಗ್ರಾಮಸ್ಥರ ಆಕ್ರೋಶಕ್ಕೆ ಜಮೀನ್ದಾರ ಹಾಗೂ ಆತನ ಇಬ್ಬರು ಸಹೋದರರು ಹಾಗೂ ಕೊನೆಯ ಸಹೋದರನ ಪತ್ನಿ ರುಕ್ಮಿಣಿ ಕೊಲೆಯಾಗುತ್ತಾರೆ. ಕೊನೆಯ ಸಹೋದರ (ನಾಸಿರುದ್ದೀನ್ ಶಾ)ನೊಂದಿಗೆ ಸುಶೀಲಾ ಪರಾರಿಯಾಗುತ್ತಾಳೆ. ಜಮೀನ್ದಾರರೊಂದಿಗೆ ಹೋರಾಟದಲ್ಲಿ ಕೈಗೆ ಗುಂಡು ಬಡಿದು ಗಾಯಗೊಂಡ ಮಾಸ್ತರ್ ಪತ್ನಿಯನ್ನು ಹುಡುಕುತ್ತ ಅಸಹಾಯಕನಾಗಿ ನಿಲ್ಲುತ್ತಾನೆ.
ಕತ್ತಲಿಗೆ ಕೊನೆಯಿದೆ, ಬೆಳಗು ಬಂದೇ ಬರುತ್ತದೆ ಎಂಬುದನ್ನು ಹಲವು ದೃಶ್ಯಗಳ ಮೂಲಕ ಶ್ಯಾಂ ಚಿತ್ರದಲ್ಲಿ ನಿರೂಪಿಸುತ್ತಾರೆ. ಚಿತ್ರದ ಮೊದಲ ದೃಶ್ಯವೇ ಮುಂಜಾವಿನಲ್ಲಿ ಮಂತ್ರ ಹೇಳುತ್ತ ದೇವಾಲಯದ ಬಾಗಿಲು ತೆಗೆಯುವ ಪೂಜಾರಿಯದ್ದು. ಅಸಹಾಯಕತೆ, ದೌರ್ಜನ್ಯಕ್ಕೆ ಬಲಿಯಾದ ಸುಶೀಲಾ ತನ್ನ ಮೇಲೆ ಮಮಕಾರ, ಪ್ರೀತಿ ತೋರಿಸಿದವನ ಹೆಂಡತಿ ರುಕ್ಮಿಣಿಯ ಗೆಳತಿಯೂ ಆಗುತ್ತಾಳೆ. ಸ್ವಾತಂತ್ರ್ಯಪೂರ್ವ ಜಮೀನ್ದಾರಿ ಪದ್ಧತಿಯ ದೌರ್ಜನ್ಯಗಳ ಬಗ್ಗೆ ಹಲವು ಚಿತ್ರಗಳು ತೆರೆ ಕಂಡಿದ್ದರೂ ನಿಶಾಂತ್ ಮಾತ್ರ ಈ ಪ್ರಯತ್ನಗಳಲ್ಲಿ ವಿಭಿನ್ನವಾಗುತ್ತದೆ. ಜಮೀನ್ದಾರರ ಆಟಾಟೋಪ, ದೃಶ್ಯಗಳ ಮಧ್ಯದ ಮೌನ, ಪರಿಣಾಮಕಾರಿ ಸಂಭಾಷಣೆ ಹಾಗೂ ಸರಳ ಸಂಗೀತ ಚಿತ್ರದ ಹೈಲೈಟ್. ದೌರ್ಜನ್ಯವನ್ನು ಹಿಂಸೆಯ ರೂಪದಲ್ಲಿ ಬಿಂಬಿಸದೇ ಮಾತು ಹಾಗೂ ಮೌನದ ಮೂಲಕ ರೂಪಿಸಿ ವಿಶಿಷ್ಟ ಅನುಭವ ನೀಡುತ್ತಾರೆ ಬೆನಗಲ್. ಅಂದ ಹಾಗೆ ಈ ಚಿತ್ರದಲ್ಲಿ ಪ್ರತಿಭಾವಂತರ ಪಡೆಯೇ ಇದೆ.
ಮರಾಠಿ ರಂಗಭೂಮಿಯ ಹೆಸರಾಂತ ನಟ, ನಿರ್ದೇಶಕ ಡಾ.ಮೋಹನ್ ಆಗಾಸೆ, ಕನ್ನಡದ ಖ್ಯಾತ ನಟ ಅನಂತ ನಾಗ್, ನಾಸಿರುದ್ದೀನ್ ಶಾ, ಶಬಾನಾ ಆಜ್ಮಿ, ಕುಲಭೂಷಣ್ ಕರಬಂದಾ, ಅಂಕುರ್ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಟ ಸಾಧು ಮೆಹರ್ ಚಿತ್ರದಲ್ಲಿದ್ದಾರೆ. ಸ್ಮಿತಾ ಪಾಟೀಲರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿಯೂ ಈ ಚಿತ್ರಕ್ಕಿದೆ. ಸಂಭಾಷಣೆ ಬರೆದ ಸತ್ಯದೇವ್ ದುಬೆ ಕೂಡ ಪೂಜಾರಿ ಪಾತ್ರದಲ್ಲಿದ್ದಾರೆ. ಖ್ಯಾತ ಲೇಖಕ ವಿಜಯ್ ತೆಂಡೂಲ್ಕರ್ ಕತೆ ಆಧಾರಿತ ಚಿತ್ರವನ್ನು ಆಂಧ್ರ ಪ್ರದೇಶದ ಪೂಚಂಪಲ್ಲಿಯಲ್ಲಿ ಚಿತ್ರಿಸಲಾಗಿದೆ.
ಪ್ರಶಸ್ತಿಗಳು : ಉತ್ತಮ ಹಿಂದಿ ಚಿತ್ರ, ಉತ್ತಮ ನಿರ್ದೇಶಕ, ೧೯೭೭, ಕ್ಯಾನೆಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಚಿಕ್ಯಾಗೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿತಗೊಂಡಿದೆ.
ಸಂಗೀತ : ವನರಾಜ್ ಭಾಟಿಯಾ ನಿರ್ಮಾಪಕರು : ಮೋಹನ್ ಬಿಜಲಾನಿ, ಫ್ರೀನಾ ವರೇರಾ, ಛಾಯಾಗ್ರಹಣ : ಗೋವಿಂದ ನಿಹಲಾನಿ.

Thursday, July 2, 2009

`ಜೀನತ್ ಮಾದಕತೆ, ಸಂಜೀವ್ ಭೋಳೆತನ' ಮನೋರಂಜನ್



ಯಹಾ ಶೇರ್ ಔರ್ ಬಕ್ರಿ ಏಕ್ ಹೀ ಘಾಸ್ ಖಾತಿ ಹೈ (ಇಲ್ಲಿ ಸಿಂಹ ಹಾಗೂ ಆಡು ಒಂದೇ ಹುಲ್ಲು ತಿನ್ನುತ್ತವೆ) ಹೀಗೆ ಬಾರ್ ಮಾಲೀಕ ಧೂಪ್ ಛಾವ್(ಶಮ್ಮಿ ಕಪೂರ್) ನಾಯಕ ಶೇರಾ (ಸಂಜೀವ್ ಕುಮಾರ್)ಗೆ ಹೇಳುತ್ತಾನೆ. ಮನೋರಂಜನ್ ಚಿತ್ರದ ಸಂಪೂರ್ಣ ವ್ಯಾಖ್ಯೆ ಈ ಸಂಭಾಷಣೆಯಲ್ಲಿದೆ. ೧೯೭೬ರಲ್ಲಿ ಖ್ಯಾತ ನಟ ಶಮ್ಮಿ ಕಪೂರ್ ನಿರ್ದೇಶಿಸಿದ ಚಿತ್ರವಿದು. ಇಂಗ್ಲೀಷ್ ಚಿತ್ರ ಇರ್ಮಾ ಲಾ ಡ್ಯಾನ್ಸ್‌ನಿಂದ ಸ್ಪೂರ್ತಿ ಪಡೆದ ಚಿತ್ರವಿದು. ಅಂದ ಹಾಗೆ ಇರ್ಮಾ ಲಾ ಡ್ಯಾನ್ಸ್ ಚಿತ್ರ ಕೂಡ ನೃತ್ಯ ರೂಪಕವೊಂದರಿಂದ ಪ್ರೇರಣೆ ಪಡೆದಿದ್ದು. ಲವರ್ ಬಾಯ್ ಇಮೇಜ್ ಮೂಲಕ ಖ್ಯಾತಿ ಪಡೆದ ಶಮ್ಮಿ ಕಪೂರ್ ನಾಯಕ ನಟನ ವೇಷದಿಂದ ಹಿಂದೆ ಸರಿದ ನಂತರ ಇಂತಹ ಪಕ್ಕಾ ಹಾಸ್ಯಭರಿತ ಚಿತ್ರ ನಿರ್ದೇಶನಕ್ಕೆ ಮನಸ್ಸು ಮಾಡಿದರು. ಯಥಾ ಪ್ರಕಾರ ಹಿಂದಿಯ ಸಾಮಾನ್ಯ ಚಿತ್ರಗಳಂತೆ ಈ ಚಿತ್ರ ನಿರೂಪಿಸಲಾಗಿದ್ದರೂ, ವೇಶ್ಯಾವಾಟಿಕೆ ಮನರಂಜನೆ ನೀಡುವ ಕ್ಷೇತ್ರ ಹೊರತು ಮಾಂಸದ ಮಾರಾಟವಲ್ಲ ಎಂದು ನಿರೂಪಿಸಿದ ಹಿಂದಿಯ ಏಕೈಕ ಚಿತ್ರ ಎನ್ನುವ ಹೆಗ್ಗಳಿಕೆಯೂ ಉಂಟು.
ಚಿತ್ರದ ನಾಯಕ ಶೇರಾ ಆಗಷ್ಟೇ ಪೇದೆಯಾಗಿ ಮುಂಬೈನ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿ ಮನೋರಂಜನ್ ಬೀದಿಗೆ ಕಾಲಿಡುತ್ತಾನೆ. ಅಲ್ಲಿನ ವೇಶ್ಯಾವಾಟಿಕೆ ನೋಡಿ ಲಾಡ್ಜ್‌ವೊಂದರಲ್ಲಿ ರೇಡ್ ಮಾಡಲು ಮಾಹಿತಿ ನೀಡುತ್ತಾನೆ. ದಾಳಿ ನಡೆಸಿದಾಗ ಆತನ ಹಿರಿಯ ಅಕಾರಿಯೇ ವೇಶ್ಯೆಯರೊಂದಿಗಿರುವುದನ್ನು ಕಂಡು ದಂಗಾಗುತ್ತಾನೆ. ಶೇರಾ ನೌಕರಿ ಕಳೆದುಕೊಂಡು ನಿರ್ವಸಿತನಾದಾಗ ನಾಯಕಿ ನಿಶಾ (ಜೀನತ್ ಅಮಾನ್) ಆತನಿಗೆ ಸಹಾಯ ಹಸ್ತ ಚಾಚುತ್ತಾಳೆ. ಆಕೆಯೊಂದಿಗೆ ಜೀವನ ನಡೆಸುವ ನಾಯಕನಿಗೆ ವೇಶ್ಯಾವೃತ್ತಿ ಕಂಡರೆ ಎಂಥದೋ ತಪನೆ, ಸಂಕಟ. ನಿಶಾ ವೇಶ್ಯಾವಾಟಿಕೆ ನಿಲ್ಲಿಸಬೇಕು ಎಂದು ಆಶಿಸಿ ಬಾರ್ ಮಾಲೀಕ (ಶಮ್ಮಿ ಕಪೂರ್)ನೊಂದಿಗೆ ಯೋಜನೆಯೊಂದನ್ನು ರೂಪಿಸುತ್ತಾನೆ. ನವಾಬ್‌ನ ವೇಷ ಧರಿಸಿ ಪ್ರತಿ ವಾರ ನಿಶಾಳೊಂದಿಗೆ ರಾತ್ರಿ ಕಳೆದು (ಅಂದರೆ ಬರಿ ಇಸ್ಪೇಟ್ ಆಡುತ್ತ) ಆಕೆ ಕೈಗೆ ೫೦೦ ರೂ. ನೀಡುತ್ತಾನೆ. ಈ ಹಣ ಬಾರ್ ಮಾಲೀಕ ನೀಡಿದ ಸಾಲ, ಇಶಾ ತಾನು ಪಡೆದ ಹಣವನ್ನು ಶೇರಾನಿಗೆ ನೀಡುತ್ತಾಳೆ, ಆತ ಹಣವನ್ನು ಮತ್ತೆ ಬಾರ್ ಮಾಲೀಕನಿಗೆ ವಾಪಸ್ ಮಾಡುತ್ತಾನೆ, ಇದು ಪದ್ಧತಿ.
ಆದರೆ ಬಾರ್ ಮಾಲೀಕ ಶೇರಾನಿಗೆ ಸಾಲ ಪಡೆಯುವ ಬದಲು ನಾಯಿಗೆ ಕಳ್ಳರು ನುಗ್ಗಿದಾಗ ಎದುರಿಸುವ ತರಬೇತಿ ನೀಡುವ ಉದ್ಯೋಗಕ್ಕೆ ಸೇರಿಕೊಳ್ಳಲು ಸೂಚಿಸುತ್ತಾನೆ. ರಾತ್ರಿಯಿಡೀ ನಾಯಿಯಿಂದ ಕಚ್ಚಿಸಿಕೊಳ್ಳುವ ನಾಯಕ ಬೆಳಗ್ಗೆ ಮನೆಗೆ ವಾಪಸ್ಸಾಗುತ್ತಾನೆ. ಈತನ ಮೈ, ಕೈ ಮೇಲಿರುವ ಗಾಯ ನೋಡಿದ ನಿಶಾ ಈತ ಇನ್ನೊಬ್ಬ ವೇಶ್ಯೆ ಲೊಲಿಟಾ ಸಂಗ ಮಾಡಿರಬಹುದು ಎಂದು ಶಂಕಿಸುತ್ತಾಳೆ. ಕೊನೆಗೆ ನವಾಬನ ವೇಷಕ್ಕೆ ಕೊನೆಗಾಣಿಸಲು ಆತ ಆತ್ಮಹತ್ಯೆ ಮಾಡಿಕೊಂಡ ಎಂಬ ಹುಯಿಲೆಬ್ಬಿಸುತ್ತಾನೆ ನಾಯಕ. ಆದರೆ ಆತನನ್ನು ಕೊಂದದ್ದು ನೀನೆ ಎಂಬ ಆರೋಪ ಪೊಲೀಸರದ್ದು. ಸಮಸ್ಯೆ ಕೊನೆಗಾಣಿಸಲು ನವಾಬನ ವೇಷ ಧರಿಸಿ ನಾಯಕ ವಾಪಸ್ಸಾಗುತ್ತಾನೆ, ಶೇರಾನ ಪ್ರಾಮಾಣಿಕತೆ ಮೆಚ್ಚಿ ಕಮೀಷನರ್ ಆತನಿಗೆ ಮತ್ತೆ ಇಲಾಖೆಯಲ್ಲಿ ಉದ್ಯೋಗ ನೀಡುವುದರೊಂದಿಗೆ ಚಿತ್ರ ಕೊನೆಗಾಣುತ್ತದೆ.
ಇದು ವೇಶ್ಯಾವಾಟಿಕೆ ಸಂಬಂಸಿದ ಚಿತ್ರವಾದರೂ ಮೈಮಾರುವ ಲೋಕದ ಸಂಕಷ್ಟಗಳನ್ನು ಬದಿಗಿರಿಸಿ ಕೇವಲ ಮನರಂಜನೆಯನ್ನಷ್ಟೇ ಮುಖ್ಯವಾಗಿಸಿದ್ದು ವಿಶೇಷ. ಸಂಭಾಷಣೆ ಹಾಗೂ ಆರ್.ಡಿ.ಬರ್ಮನ್‌ರ ಸಂಗೀತದಿಂದಾಗಿ ಚಿತ್ರ ಮನ ಸೆಳೆಯುತ್ತದೆ, ಜತೆಗೆ ಜೀನತ್ ಭಾರಿ ಪ್ರಮಾಣದಲ್ಲಿ ಬಟ್ಟೆ ಬಿಚ್ಚಿರುವುದೂ ಹೈಲೈಟ್. ಅಂದ ಹಾಗೆ ಈ ಚಿತ್ರದ ಹಾಡಿಗಾಗಿ ಲತಾ ಮಂಗೇಶ್ಕರ್ ಫಿಲ್ಮ್ ಫೇರ್ ಪ್ರಶಸ್ತಿಗಾಗಿ ನಾಮಾಂಕಿತರಾಗಿದ್ದು ವಿಶೇಷ. ಕೇವಲ ಮನರಂಜನೆಗಾಗಿ ಚಿತ್ರ ನೋಡುವವರು ಮನೋರಂಜನ್ ನೋಡಬಹುದು.