Thursday, December 31, 2009

ಶ್ರೀ ಕೃಷ್ಣದೇವರಾಯ ಬಿಡುಗಡೆಗೆ ಸಿದ್ಧ



ಸ್ನೇಹಿತ, ಟಿವಿ೯ ನಿರೂಪಕ ಶಿವಪ್ರಸಾದ್ ಹೊಸ ಪುಸ್ತಕವೊಂದನ್ನು ಬರೆದಿದ್ದಾನೆ. ಪ್ರತಿ ವರ್ಷ ಹೊಸ ಸಾಹಸವೊಂದನ್ನು ಮಾಡು ಎಂಬ ಮಾತು ಆತನ ಡೈರಿಯಲ್ಲಿ ದಾಖಲಾಗಿರುತ್ತದೆ. ಈ ಸಂಪ್ರದಾಯದ ಪ್ರಕಾರ ಈ ವರ್ಷವೂ ಮತ್ತೊಂದು ಸಾಹಸದ ಚಾರಣ ಮುಗಿದಿದೆ. ಹೆಗಲಿಗೆ ಕ್ಯಾಮೆರಾ, ಕೈಯಲ್ಲೊಂದು ಪುಸ್ತಕ, ಲ್ಯಾಪ್‌ಟಾಪ್ ಇದ್ದರೆ ಶಿವಾ ಹೊಸ ಸಾಹಸಕ್ಕೆ ಹೊರಟಿದ್ದಾನೆ ಎಂದರ್ಥ. ಹಿಮದಿಂದಾವೃತವಾದ ಅಮರ್‌ನಾಥ್, ಸೈನಿಕರ ಛಳಿಯನ್ನೂ ಬಿಡಿಸುವ ಕಾರ್ಗಿಲ್, ವೇಶ್ಯೆಯರ ದುರ್ಭರ ಬದುಕಿನ ಕಾಮಾಟಿಪುರ, ಮಹಾಭಾರತ ಯುದ್ಧ ನಡೆದ ಕುರುಕ್ಷೇತ್ರ, ಮುಂಬೈನಲ್ಲಿ ಉಗ್ರರ ಗುಂಡಿಗೆ ಎದೆಯೊಡ್ಡಿ ವರದಿಗಳನ್ನು ಹೆಕ್ಕಿ ತಂದವನೀತ.
ಸುಭಾಷ್ ಸಾವಿನ ಸುತ್ತ, ಚಂದ್ರಯಾನ, ಜಲಿಯನ್‌ವಾಲಾಬಾಗ್ ಎಂಬ ಮೂರು ಪುಸ್ತಕಗಳನ್ನು ಈಗಾಗಲೇ ಬರೆದಿದ್ದಾನೆ. ಕರ್ನಾಟಕದ ಖ್ಯಾತ ಅರಸ ಶ್ರೀ ಕೃಷ್ಣದೇವರಾಯನ ಬಗ್ಗೆ ಹೊಸ ಪುಸ್ತಕವನ್ನು ಬಿಡುಗಡೆಗೆ ಅಣಿಗೊಳಿಸಿದ್ದಾನೆ ಶಿವ. ತಾಳಿಕೋಟೆ, ಹಂಪಿ ಸೇರಿದಂತೆ ಕೃಷ್ಣದೇವರಾಯನ ಇತಿಹಾಸವಿರುವ ಎಲ್ಲ ಸ್ಥಳಗಳಲ್ಲೂ ಓಡಾಡಿದ್ದಾನೆ. ನಾನಾ ಗ್ರಂಥಗಳು, ಪ್ರವಾಸಿಗರ ಡೈರಿಗಳನ್ನೂ ಅಭ್ಯಸಿಸಿ ಈ ಹೊಸ ಪುಸ್ತಕ ಅಣಿಗೊಳಿಸಿದ್ದಾನೆ. ಕೃಷ್ಣದೇವರಾಯನ ಬಗ್ಗೆ ಗೊತ್ತಿರದ ಕೆಲ ಸಂಗತಿಗಳನ್ನೂ ಇಲ್ಲಿ ಉಲ್ಲೇಖಿಸಿರುವುದು ವಿಶೇಷ. ಅಂದ ಹಾಗೆ ಜ.೪ ರಂದು ಬೆಂಗಳೂರಿನಲ್ಲಿ ಶಿವಪ್ರಸಾದನ ಹೊಸ ಪುಸ್ತಕ ಬಿಡುಗಡೆಗೊಳ್ಳಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಎಂ.ಪಿ.ಪ್ರಕಾಶ್ ಭಾಗವಹಿಸಲಿದ್ದಾರೆ. ಈ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ತಮಗೆ ಹಾರ್ದಿಕ ಸ್ವಾಗತ, ಸಮಾರಂಭದ ಆಹ್ವಾನ ಪತ್ರಿಕೆ ಇಲ್ಲಿದೆ ಬನ್ನಿ, ಭಾಗವಹಿಸಿ, ಪುಸ್ತಕ ಸಂಸ್ಕೃತಿ ಬೆಳೆಸಿ.

ಡಾ.ವಿಷ್ಣು ಪ್ರೀತಿ... ಶೇಂಗಾ ಉಂಡೆ !


ಬಾದಾಮಿಯಲ್ಲಿ ನಡೆದ ಹಿಮಪಾತ ಚಿತ್ರದ ಚಿತ್ರೀಕರಣದಲ್ಲಿ ಅಭಿಮಾನಿಯೊಂದಿಗೆ ವಿಷ್ಣು.



ಆರೋಗ್ಯದ ಬಗ್ಗೆ ಅತೀವ ಕಾಳಜಿ ಹೊಂದಿದ್ದ ನಟ ಡಾ.ವಿಷ್ಣುವರ್ಧನ್ ಬಾದಾಮಿಯಲ್ಲಿ ಆಯಿಲ್ ಪುಲ್ಲಿಂಗ್ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದಿದ್ದರು !.
ಅದು ೧೯೯೭, ಹಿಮಪಾತ ಚಿತ್ರದ ಚಿತ್ರೀಕರಣಕ್ಕಾಗಿ ಸುಹಾಸಿನಿಯವರೊಂದಿಗೆ ವಿಷ್ಣು ಬಾದಾಮಿಯಲ್ಲಿದ್ದರು. ಉದ್ಯಮಿ ಮಹಾಂತೇಶ ಮಮದಾಪುರ ಅವರ ಆಯಿಲ್ ಮಿಲ್‌ನಲ್ಲಿ ಎರಡು ದಿನ ಶೂಟಿಂಗ್ ನಡೆದಿತ್ತು.
ವಿರಾಮದ ವೇಳೆ ವಿಷ್ಣು ಹಾಗೂ ಮಹಾಂತೇಶ ಉಭಯ ಕುಶಲೋಪರಿ ವಿಚಾರಕ್ಕೆ ಕುಳಿತರು. ಬಾಯಿಯ ಸ್ವಚ್ಛತೆಗೆ ಎಣ್ಣೆ ಬಳಸುವ ಆಯಿಲ್ ಪುಲ್ಲಿಂಗ್ ಚಿಕಿತ್ಸೆ ಆಗಷ್ಟೇ ಖ್ಯಾತಿ ಪಡೆದಿತ್ತು. ಆಯಿಲ್ ಪುಲ್ಲಿಂಗ್‌ನಿಂದ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ವಿವರಿಸಿದ ವಿಷ್ಣು ಈ ಹೊಸ ಚಿಕಿತ್ಸೆ ಬಂದ ಬಗೆ, ಅದರ ವಿಧಾನ ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ವಿವರವಾಗಿ ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಶುದ್ಧ ಎಣ್ಣೆ ದೊರಕುವುದಿಲ್ಲ, ನಿಮ್ಮ ಮಿಲ್‌ನ ಸೂರ್ಯಕಾಂತಿ ಎಣ್ಣೆ ಕೊಡಿ ಎಂದರು. ತಾವು ತೆರಳುವಾಗ ಸೂರ್ಯಕಾಂತಿ ಎಣ್ಣೆಯ ಡಬ್ಬಿ ಒಯ್ದರು ಎಂದು ಮಹಾಂತೇಶ ನೆನಪಿಸಿಕೊಳ್ಳುತ್ತಾರೆ.
ಉತ್ತರ ಕರ್ನಾಟಕದ ಖಾದ್ಯಗಳೆಂದರೆ ವಿಷ್ಣು ಕಣ್ಣರಳಿಸುತ್ತಿದ್ದರು. ಮಹಾಂತೇಶರ ಮನೆಯಲ್ಲಿ ಉಪಹಾರಕ್ಕೆ ಬಂದಾಗ ವಿಷ್ಣು ಗಮನ ಹರಿದಿದ್ದು ಶೇಂಗಾ ಉಂಡಿಯೆಡೆಗೆ. ಆಹಾ ಇದು ಚೆನ್ನಾಗಿದೆ ಎಂದ ಸಾಹಸಸಿಂಹ ಉಂಡಿಯನ್ನೇ ಉಪಹಾರವಾಗಿಸಿಕೊಂಡರು. ನಂತರ ಸುಹಾಸಿನಿ, ವಿಷ್ಣು ವಾಪಸ್ಸಾಗುವಾಗ ಶೇಂಗಾ ಉಂಡಿ ಹಾಗೂ ಉತ್ತರ ಕರ್ನಾಟಕದ ನೆನಪು ಜತೆಗಿತ್ತು.
ಹಿಮಪಾತ ಚಿತ್ರೀಕರಣ ಬಾದಾಮಿಯ ಮೇಣಬಸದಿ, ಪಟ್ಟದಕಲ್ಲ, ಐಹೊಳೆ, ವಿಜಾಪುರದ ಗೋಳಗುಮ್ಮಟ, ಬಾರಾಕಮಾನ್‌ಗಳಲ್ಲಿ ನಡೆದಿತ್ತು. ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನೂ ಸೂಕ್ಷ್ಮವಾಗಿ ಅವಲೋಕಿಸಿದ ವಿಷ್ಣು ವಿವರವಾಗಿ ಮಾಹಿತಿ ಪಡೆದಿದ್ದರು. ವಿಜಾಪುರದಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಹೊರತುಪಡಿಸಿದರೆ ಅವಳಿ ಜಿಲ್ಲೆಗೆ ಮತ್ತೊಮ್ಮೆ ಭೇಟಿ ನೀಡಲು ಸಾಹಸಸಿಂಹನಿಗೆ ಸಾಧ್ಯವಾಗಲಿಲ್ಲ.

ಆಪ್ತ ಮಿತ್ರನ ನೆರವು...




ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ

ಸಿಂಹನ ಕಲಾ ಪ್ರೀತಿ



ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ

Monday, December 28, 2009

ಮೂವರು ಮೂರ್ಖರು, ಒಂದು ಸಿನಿಮಾ !





ನಿಮ್ಮ ಮನಸ್ಸಿಗೆ ತೋಚಿದ್ದು ಮಾಡಿ-ಇಂತಹದೊಂದು ಸಂದೇಶ ಹೊತ್ತು ತೆರೆಗೆ ಬಂದಿದೆ ಆಮೀರ್ ಖಾನ್‌ರ ೩ ಈಡಿಯಟ್ಸ್. ಯುವಜನರ ಕನಸು, ವಾಸ್ತವ, ಶಿಕ್ಷಣ ವ್ಯವಸ್ಥೆ, ಪಾಲಕರ ಒತ್ತಡ...ಹೀಗೆ ನೂರಾರು ವಿಷಯಗಳನ್ನು ಒಂದೇ ಚಿತ್ರದ ಮೂಲಕ ಕಲರ್‌ಫುಲ್ ಆಗಿ ಪ್ರಸ್ತುತಪಡಿಸಿದ್ದಾರೆ ನಿರ್ದೇಶಕ ರಾಜ್‌ಕುಮಾರ್ ಹಿರಾನಿ.
ಅಂದ ಹಾಗೆ ಈ ಚಿತ್ರದ ಮೂಲ ಪ್ರೇರಣೆ ಖ್ಯಾತ ಲೇಖಕ ಚೇತನ್ ಭಗತ್‌ರ ಬೆಸ್ಟ್ ಸೆಲ್ಲರ್ ಕಾದಂಬರಿ `ಫೈ ಪಾಯಿಂಟ್ ಸಮ್ ವನ್'. ಕಾದಂಬರಿ ಚಿತ್ರವಾಗುವಾಗ ಬಹಳಷ್ಟು ಬದಲಾವಣೆಗಳಾಗಿವೆ. ಆದರೆ ಚೇತನ್‌ರ ಬರಹದಲ್ಲಿ ಕಾಣುವ ಸ್ವಾರಸ್ಯ, ಕ್ಲೀಷೆ ಹಾಗೂ ವಿನೋದ ಚಿತ್ರದುದ್ದಕ್ಕೂ ಇದೆ.
ಮೂವರು ಸ್ನೇಹಿತರು ನೂರಾರು ಆಕಾಂಕ್ಷೆ ಹೊತ್ತು ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದಾಗ ನಡೆಯುವ ಘಟನಾವಳಿಗಳು ಚಿತ್ರದ ಹೂರಣ. ಸ್ನೇಹಿತರನ್ನು ಪ್ರೇರೆಪಿಸುವ, ಹೊಸತನಕ್ಕೆ ತುಡಿಯುವ `ಆಲ ಇಸ್ ವೆಲ್' ಎನ್ನುತ್ತ ನಗೆ ಉಕ್ಕಿಸುವ ಯುವಕನಾಗಿ ಆಮೀರ್ ಮಿಂಚಿದ್ದಾರೆ. ಪ್ರತಿ ದೃಶ್ಯದಲ್ಲೂ ವಿಭಿನ್ನ ಹಾವಭಾವದ ಮೂಲಕ ಯುವಕರಷ್ಟೇ ಅಲ್ಲ ಚಿಣ್ಣರ ಮನಸ್ಸನ್ನೂ ಆಮೀರ್ ಕೊಳ್ಳೆ ಹೊಡೆಯುತ್ತಾರೆ. ಇದೊಂಥರ ತಾರೆ ಜಮೀನ್ ಪರ್‌ನ ಎರಡನೇ ಭಾಗದಂತಿದೆ. ಅಲ್ಲಿ ಮಕ್ಕಳ ಕನಸುಗಳಿಗೆ ಕಾಮನಬಿಲ್ಲು ಕಟ್ಟಿ ತೋರಿಸಿದ ಅಮೀರ್ ಇಲ್ಲಿ ಯುವಕರ ಮನಸ್ಸನ್ನು ಗಾಳಿಪಟವಾಗಿಸುತ್ತಾರೆ.
ಮುನ್ನಾಭಾಯಿ ಖ್ಯಾತಿಯ ರಾಜ್‌ಕುಮಾರ್ ಇಲ್ಲೂ ಸಂದೇಶಗಳನ್ನು ಪ್ರೇಕ್ಷಕನಿಗೆ ಸಾಗಿಸುತ್ತಲೇ ಸುಂದರ ಕತೆ ಹೆಣೆದಿದ್ದಾರೆ. ರ್‍ಯಾಂಕ್ ನೀಡಿ ಯುವಕರನ್ನು ಕೇವಲ ಉದ್ಯೋಗಿಗಳನ್ನಾಗಿಸುವ ಸಮಾಜ, ಮಕ್ಕಳು ಎಂಜಿನಿಯರ್, ಡಾಕ್ಟರ್ ಮಾತ್ರ ಆಗಬೇಕೆಂಬ ಪಾಲಕರ ಆಸೆ, ಆದರೆ ಈಡೇರದ ಆಸೆಗಳ ಮಧ್ಯೆ ಯುವಕರ ಕಣ್ಣೀರು. ಕಾಲೇಜಿನ ಪ್ರಾಚಾರ್ಯ ವೀರೂ ಸಹಸ್ರಬುದ್ಧೆಯಾಗಿರುವ ಬೊಮ್ಮನ್ ಇರಾನಿ ಮತ್ತೊಂದು ಪ್ರಶಸ್ತಿ ಗೆಲ್ಲುವ ಎಲ್ಲ ಸಾಧ್ಯತೆಗಳೂ ಇವೆ. ಹಾಡುಗಳೂ ಸಹ ಮತ್ತೆ, ಮತ್ತೆ ಗುನುಗುನಿಸುತ್ತವೆ.
ಮೂಲ ಕಾದಂಬರಿಯಲ್ಲಿ ಪ್ರಿನ್ಸಿಪಲ್ ಕಾರು ಬಿಟ್ಟು ಇಳಿಯುವುದಿಲ್ಲ, ಇಲ್ಲಿ ಸೈಕಲ್ ಹೊಡೆಯುತ್ತಾರೆ. ಅಲ್ಲಿ ಹೊಸದಿಲ್ಲಿಯ ಐಐಎಂ ಕಾಲೇಜಿದೆ ಇಲ್ಲಿ ಬರೀ ಎಂಜಿನಿಯರಿಂಗ್ ಕಾಲೇಜಿದೆ. ಇನ್ನಷ್ಟು ಬದಲಾವಣೆಗಳೂ ಇವೆ. ವಿಧು ವಿನೋದ್ ಚೋಪ್ರಾ ತಮ್ಮ ಸ್ವಂತ ಬ್ಯಾನರ್‌ನಡಿ ಈ ಚಿತ್ರ ನಿರ್ಮಿಸಿದ್ದಾರೆ. ವರ್ಷಕ್ಕೊಂದೇ ಚಿತ್ರದಲ್ಲಿ ಅಭಿನಯಿಸುವ ಆಮೀರ್ ಹಾಗೂ ವರ್ಷಕ್ಕೊಂದೇ ಚಿತ್ರ ನಿರ್ದೇಶಿಸುವ ರಾಜ್‌ಕುಮಾರ್ ಈ ವರ್ಷದ ಅಷ್ಟೂ ಪ್ರಶಸ್ತಿಗಳಲ್ಲೂ ತಮ್ಮ ಹೆಸರು ನೋಂದಾಯಿಸಲಿದ್ದಾರೆ. ಶರ್ಮನ್ ಜೋಶಿ, ಮಾಧವನ್, ಕರೀನಾ ಕಪೂರ್ ಮುಖ್ಯಪಾತ್ರದಲ್ಲಿ ಮಿಂಚಿದ್ದಾರೆ. ಪಂಕಜ್ ಪರಾಶರ್ ಬಹಳ ದಿನಗಳ ನಂತರ ಮತ್ತೆ ನಟಿಸಿದ್ದಾರೆ.
ಈ ಚಿತ್ರವನ್ನೊಮ್ಮೆ ನೋಡಿದರೆ ಕಾಲೇಜು, ಅಲ್ಲಿನ ಸಖಿಯರು, ಟಪೋರಿ ಗೆಳೆಯರು, ಕ್ಯಾಂಟೀನ್...ಹೀಗೆ ಹರೆಯ ಜಮಾನಾ ಕಣ್ಣು ಮುಂದೆ ಬಿಚ್ಚಿಕೊಳ್ಳಲಿದೆ. ಚಿತ್ರದ ಕೊನೆಗೆ ಕಣ್ಣೂ ತೇವಗೊಳ್ಳುತ್ತದೆ. ಹಾಗಾದರೆ ಈ ಚಿತ್ರ ಮಿಸ್ ಮಾಡಿಕೊಳ್ಳಲೇಬೇಡಿ. ಜತೆಗೆ `ಫೈವ್ ಪಾಯಿಂಟ್ ಸಮ್ ಒನ್' ಕೂಡ ಓದಿ.



Saturday, October 10, 2009

ಬನ್ನಿ ಸಂತ್ರಸ್ತರಿಗೆ ನೆರವಾಗೋಣ





ಸಂತ್ರಸ್ತರಿಗೆ ನೆರವಾಗೋಣ...


ಬಾಗಲಕೋಟ, ವಿಜಾಪುರ ಜಿಲ್ಲೆಗಳಲ್ಲಿ ಭಾರಿ ಮಳೆಗೆ ಈವರೆಗೆ ೬೪ ಜನ ಮೃತಪಟ್ಟಿದ್ದಾರೆ, ೫೦ ಸಾವಿರಕ್ಕೂ ಹೆಚ್ಚು ಮನೆ ಕುಸಿದಿವೆ, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಈ ಬಗ್ಗೆ ನಾನು ಸಂತ್ರಸ್ತರ ಸಮಸ್ಯೆಗಳ ಬಗ್ಗೆ ವರದಿ ಮಾಡಿದ ವಿಶೇಷ ವರದಿಗಳನ್ನು ಇಲ್ಲಿ ಪ್ರಕಟಿಸಿದ್ದೇನೆ. ಸಿನಿಮಾಗೆ ಮೀಸಲಾದ ಬ್ಲಾಗ್‌ನಲ್ಲಿ ಅನಿವಾರ್ಯವಾಗಿ ಬೇರೆ ವಿಷಯಗಳ ಬಗ್ಗೆ ಲೇಖನ ಪ್ರಕಟಿಸಿದ್ದಕ್ಕೆ ಕ್ಷಮೆಯಿರಲಿ. ಬನ್ನಿ ಸಂತ್ರಸ್ತರಿಗೆ ನೆರವಾಗೋಣ, ಅವರಲ್ಲಿ ಬದುಕುವ ಆತ್ಮವಿಶ್ವಾಸ ತುಂಬೋಣ...

Friday, September 18, 2009

ಮರಾಠಿ ಕಿರುತೆರೆಯಲ್ಲಿ ಶಿವಾಜಿ ಅಲೆ !


ಮರಾಠಿ ಕಿರುತೆರೆಯಲ್ಲೀಗ ಹೊಸ ಅಲೆ, ಸ್ಟಾರ್ ಪ್ರವಾಹ್ ಚಾನೆಲ್‌ನಲ್ಲಿ ಮೂಡಿ ಬರುತ್ತಿರುವ ರಾಜಾ ಶಿವ ಛತ್ರಪತಿ ಧಾರಾವಾಹಿ ದೊಡ್ಡ ಬಜೆಟ್‌ನ ಸಿನಿಮಾದಷ್ಟೇ ಸುದ್ದಿ ಮಾಡುತ್ತಿದೆ. ಇದಕ್ಕೆಲ್ಲ ಕಾರಣವಾಗಿರುವುದು ವಿಭಿನ್ನ ಮಾದರಿಯ ಕತೆ, ಸರಳ, ನೇರ ಸಂಭಾಷಣೆ, ಅದ್ಭುತ ಕಲಾ ನಿರ್ದೇಶನ ಹಾಗೂ ಭಾಳ ಚಂದ ಅಭಿನಯ.
ಮುಂಬೈನ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿರುವ ಡಾ.ಅಮೋಲ್ ಕೊಲ್ಹೆ ಧಾರಾವಾಹಿಯಲ್ಲಿ ಶಿವಾಜಿ ಮಹಾರಾಜರ ಪಾತ್ರದಲ್ಲಿದ್ದಾರೆ. ಇಡೀ ಧಾರಾವಾಹಿಯನ್ನು ಆವಾಹಿಸಿರುವುದು ಡಾ.ಅಮೋಲ್ ಹಾಗೂ ಔರಂಗಜೇಬ್ ಪಾತ್ರ ಮಾಡಿರುವ ಶಾಂತಿ ಧಾರಾವಾಹಿಯಿಂದ ಪ್ರಖ್ಯಾತಿ ಪಡೆದ ನಿತಿನ್ ಕಾರ್ಯೇಕರ್. ಇಲ್ಲಿ ಶಿವಾಜಿ ಮಹಾರಾಜರನ್ನು ಬಹುಪರಾಕ್ ಮೂಲಕ ಹೊಗಳುವ, ಓತಪ್ರೋತವಾಗಿ ತೋರಿಸುವ ದೃಶ್ಯಗಳಿಲ್ಲ. ಬದಲು ನೇರ, ಸರಳ ನಿರೂಪಣೆ ಮೂಲಕ ಶಿವಾಜಿ ಮಹಾರಾಜರ ಜೀವನ ಬಿಂಬಿಸಿದ್ದು ಹೈಲೈಟ್. ಶಿವಾಜಿ ವಿರೋಗಳೇ ಶಿವಾಜಿಯನ್ನು ಹೊಗಳುವ, ಆಕ್ರೋಶ ವ್ಯಕ್ತಪಡಿಸುವ ದೃಶ್ಯಗಳ ಮೂಲಕ ಜೀವಕಳೆ ತುಂಬಲಾಗಿದೆ.
ದೇವದಾಸ್, ಲಗಾನ್ ಚಿತ್ರಗಳ ನಿರ್ಮಾಪಕ ನಿತಿನ್ ಚಂದ್ರಕಾಂತ್ ದೇಸಾಯಿ ಧಾರಾವಾಹಿಯ ನಿರ್ಮಾಪಕರು. ಹೇಮಂತ್ ದೇವಧರ್ ನಿರ್ದೇಶಕರು. ಶಿವಾಜಿ ಮಹಾರಾಜರ ಕೋಟೆಗಳು, ಮಹಾರಾಷ್ಟ್ರದ ದೇಸಿಯತೆ, ಸಂಸ್ಕೃತಿ ಸಾರುವ ಸಂಗೀತದೊಂದಿಗೆ ಮರಾಠಿ ತಿಳಿಯದವರೂ ಕೂಡ ಕುತೂಹಲದಿಂದ ಟಿವಿ ಕಡೆಗೆ ನೋಟ ಹರಿಸುವಂತೆ ಮಾಡಿದೆ ಶಿವಛತ್ರಪತಿ.
ಖ್ಯಾತ ನಟಿ ಮೃಣಾಲ್ ಕುಲಕರ್ಣಿ ಜೀಜಾಬಾಯಿ ಪಾತ್ರದಲ್ಲಿದ್ದರೆ, ಸಾಹಸ ನಿರ್ದೇಶನದ ಹೊಣೆ ಹೊತ್ತಿರುವುದು ಜೋಧಾ ಅಕ್ಬರ್ ಚಿತ್ರದ ಸಾಹಸ ನಿರ್ದೇಶಕ ರವಿ ದಿವಾನ್. ಕಳೆದ ನವೆಂಬರ್‌ನಿಂದ ಪ್ರಾರಂಭಗೊಂಡಿರುವ ಈ ಸೀರಿಯಲ್ ಸದ್ಯ ನಂ.೧ ಪಟ್ಟ ಬಿಟ್ಟುಕೊಡುತ್ತಿಲ್ಲ. ಮಹಾನ್ ಯೋಧ, ಪ್ರಜಾ ಪ್ರೇಮಿ ಹಾಗೂ ಧರ್ಮ ರಕ್ಷಕ ರಾಜನನ್ನು ಉತ್ಪ್ರೇಕ್ಷೆಯಿಲ್ಲದೆ ತೋರಿಸಿರುವುದು ಹೆಗ್ಗಳಿಕೆ. ಧಾರಾವಾಹಿಯ ಟೈಟಲ್ ಗೀತೆಗೂ ಕೂಡ ಅಂತರ್ಜಾಲದಲ್ಲಿ ಅಪಾರ ಬೇಡಿಕೆ. ಇಂತಹದೊಂದು ಬೃಹತ್ ಧಾರಾವಾಹಿಯ ಮೂಲಕ ಮರಾಠಿ ಕಿರುತೆರೆಯಲ್ಲಿ ಸುದ್ದಿಗೆ ಕಾರಣವಾಗಿರುವ ಸ್ಟಾರ್ ಪ್ರವಾಹ್ ಚಾನೆಲ್‌ನ ಉದ್ಘಾಟನೆ ಸಂದರ್ಭದಲ್ಲಿ ಸಿಇಓ ಉದಯ್ ಶಂಕರ್ ಹೇಳಿದ ಮಾತು ಹೀಗಿತ್ತು : ರಾಜಾ ಶಿವಛತ್ರಪತಿ ಧಾರಾವಾಹಿ ಮೂಲಕ ಮರಾಠಿ ಕಿರುತೆರೆಯಲ್ಲಿ ಹೊಸ ಬೆಳಕು ಕಾಣಲಿದೆ. ಕಿರುತೆರೆಯನ್ನು ಹಿರಿತೆರೆಯನ್ನಾಗಿಸುವ ಸಾಧ್ಯತೆ ಈ ಸೀರಿಯಲ್‌ಗಿದೆ. ಈ ಮಾತು ಈಗ ನಿಜವಾಗಿದೆ !.

Sunday, September 13, 2009

ವಿನಯ್‌ರಿಂದ ಸಾಧಕರ `ಪಾಠ`!



ಖ್ಯಾತ ನಿರ್ದೇಶಕರು ಮಹಾನ್ ವ್ಯಕ್ತಿಗಳ ಆತ್ಮ ಚರಿತ್ರೆಯ ಸಿನಿಮಾ ಹಾಗೂ ಧಾರಾವಾಹಿಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳು ಟಿವಿ ಚಾನೆಲ್‌ಗಳಲ್ಲಿ ಆಗಾಗ ಇಣುಕುತ್ತವೆ. ಮಲಯಾಳಂ, ತಮಿಳು ಕಿರುತೆರೆಯಲ್ಲಿ ಇಂತಹ ಕಾರ್ಯಕ್ರಮ ಹೇರಳವಾಗಿವೆ. ವ್ಯಕ್ತಿ ಹಾಗೂ ಜೀವನ ಶೈಲಿ, ಇತಿಹಾಸದ ಬಗ್ಗೆ ಮಾಹಿತಿ ನೀಡುವ ಫಾಕ್ಸ್ ಹಿಸ್ಟರಿ ಚಾನೆಲ್ ಇಂತಹ ಮತ್ತೊಂದು ಕಾರ್ಯಕ್ರಮ ಪ್ರದರ್ಶನಕ್ಕೆ ಸಜ್ಜಾಗಿದೆ. ಖ್ಯಾತ ನಟ, ನಿರೂಪಕ ವಿನಯ್ ಪಾಠಕ್ ಈ ಚಾನೆಲ್‌ಗಾಗಿ ಇತಿಹಾಸದ ಸಾಧಕರ ಮೆಗಾ ಧಾರಾವಾಹಿಗಳ ತುಣುಕು ಹಾಗೂ ಮಾಹಿತಿಯುಳ್ಳ ಕಾರ್ಯಕ್ರಮಕ್ಕೆ ನಿರೂಪಕರಾಗಿದ್ದಾರೆ. ಪ್ರತಿ ಭಾನುವಾರ ರಾತ್ರಿ ೯ಕ್ಕೆ ಹಾಗೂ ವಾರವಿಡೀ ಈ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.
ಅಂದ ಹಾಗೆ ಈ ಮೊದಲು ಅನುರಾಗ್ ಕಶ್ಯಪ್ ಜಾಗತಿಕ ಸಿನಿಮಾ ರಂಗದ ಅತ್ಯುತ್ತಮ ನಟರು ಹಾಗೂ ನಿರ್ದೇಶಕರ ಬಗ್ಗೆ ಶೋಕೇಸ್ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಹೊಸ ಕಾರ್ಯಕ್ರಮ ಶೋಕೇಸ್‌ನ ಮುಂದುವರಿದ ಭಾಗ.

Thursday, September 10, 2009

ಸಿನಿಮಾ ಅಂದರೆ...




ಸಿನೆಮಾ ಎಂದರೆ ಏನು ? ಅದು ಬದುಕು, ವಾಸ್ತವ, ಭ್ರಮೆ, ಕನಸುಗಳು…ಹೀಗೆ ನೂರಾರು ಪ್ರಶ್ನೆಗಳು ಮುತ್ತುತ್ತವೆ. ಸಿನೆಮಾ ಎಂದ ಕೂಡಲೇ ಬಾಲ್ಯದ ನೆನಪುಗಳು ಕಣ್ಣೆದುರು ಬಿಚ್ಚಿಕೊಳ್ಳುತ್ತವೆ. ಊರಿಗೆ ಬಂದ ಹೊಸ ಸಿನಿಮಾದ ಪೋಸ್ಟರ್ ನೋಡಿ ಚಿತ್ರವೊಂದನ್ನು ಅನುಭವಿಸುವ ಕಾಲವದು. ವಿಷ್ಣುವರ್ಧನ್, ಡಾ.ರಾಜ್‌ಕುಮಾರ್, ಟೈಗರ್ ಪ್ರಭಾಕರ್, ಶಿವರಾಜ್‌ಕುಮಾರ್‌ರಂತಹ ಚಿತ್ರಗಳು ಆಗ ನಮಗೆ ಒಡನಾಡಿ.

ಭಾನುವಾರದ ದಿನ ತಂದೆ ಕೊಟ್ಟ 10 ರೂ. ನಲ್ಲಿ ಚಿತ್ರ ನೋಡಿ, ಮಿರ್ಚಿ ಭಜಿ ತಿಂದು ಗೆಳೆಯರೊಂದಿಗೆ ಚರ್ಚೆ ನಡೆಸುವುದು ಆಗಿನ ಸಿನಿಮಾ ಆಕರ್ಷಣೆ. ಹೊಡೆದಾಟ, ಬಡಿದಾಟದ ಚಿತ್ರಗಳತ್ತಲೇ ನಮ್ಮ ಗಮನ. ಶಂಕರ್‌ನಾಗ್‌ರ ಆಕ್ಷನ್ ಚಿತ್ರಗಳು, ವಿನೋದ್ ರಾಜ್‌ರ ಡ್ಯಾನ್ಸ್, ವಜ್ರಮುನಿ ಗಂಭೀರ ಅಭಿನಯ, ದ್ವಾರಕೀಶ್‌ರ ಹಾಸ್ಯ…ಇವಿಷ್ಟು ಸಿನೆಮಾ ಎಂಬುದು ನಮ್ಮ ಭಾವನೆ. ಸಿನೆಮಾ ನೋಡಿ ಬಂದ ನಂತರ ಥೇಟರ್‌ಗಳ ಅಕ್ಕ, ಪಕ್ಕ ದೊರೆಯುತ್ತಿದ್ದ ವೇಸ್ಟ್ ರೀಲುಗಳನ್ನು ಮನೆಗೆ ತಂದು, ಮನೆ ಹೊರಗಿನ ಆವರಣದಲ್ಲಿ ಕನ್ನಡಿ ಇಟ್ಟು ಅದರ ಬೆಳಕು ಒಳಗೆ ಬಿಟ್ಟು, ಹಳೆಯ ಶುಭ್ರ ಲುಂಗಿಯೊಂದನ್ನು ಬಾಗಿಲಿಗೆ ಆನಿಸಿ, ದುರ್ಬೀನಿಗೆ ಬೆಳಕು ಹಾಯಿಸಿ ರೀಲು ಹಿಡಿದರೆ ಮನೆಯಲ್ಲೂ ಸಿನಿಮಾ. ಆದರೆ ಆ ಚಿತ್ರಗಳನ್ನು ಚಲಿಸುವಂತೆ ಮಾಡುವ ಸಾಧ್ಯತೆ ಇರಲಿಲ್ಲವಾದ್ದರಿಂದ ನಮ್ಮದು ಸ್ಥಿರ ಚಿತ್ರಗಳ ಹೋಮ್ ಥಿಯೇಟರ್.

ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಇಂಗ್ಲೀಷ್ ಚಿತ್ರಗಳ ಬಗ್ಗೆ ಆಸಕ್ತಿ ಹೆಚ್ಚಾಯಿತು (ವಯಸ್ಕರ ಚಿತ್ರಗಳೂ ಸೇರಿದಂತೆ). ಇಂಡೋ ಓರಿಯೆಂಟಲ್ ಸಂಸ್ಥೆ ನಿರ್ಮಿಸುತ್ತಿದ್ದ ಜಪಾನಿ, ಚೀನಿ ಹಾಗೂ ಇಂಗ್ಲೀಷ್ ಭಾಷೆಗಳ ಚಿತ್ರಗಳು ನಮ್ಮ ಹಾಟ್ ಫೇವರಿಟ್. ಜಾಕಿ ಚಾನ್, ಜೆಟ್ ಲೀಯಂತಹ ನಾಯಕರ ಕುಂಗ್ ಫೂ, ಕರಾಟೆ ಚಿತ್ರಗಳು ಮನಸ್ಸಿಗೆ ಖುಷಿ ಹಾಗೂ ಕಾಲೇಜಿನಲ್ಲಿ ಹೊಡೆದಾಟಕ್ಕೆ ಸ್ಪೂರ್ತಿ. ಹಿಂದಿ ಸಿನೆಮಾಗಳೆಂದರೆ ಹೊಡೆದಾಟ, ನಟಿಯ ಮೈ ಪ್ರದರ್ಶನ, ಮಧ್ಯೆ ಕಾಮದ ದೃಶ್ಯವಿರಬೇಕು ಎಂಬ ನಿಯಮ. ಅಪ್ರಾಪ್ತರಾದರೂ ವಯಸ್ಕರ ಚಿತ್ರಗಳನ್ನು ನೋಡುವ ಖುಷಿಯೇ ಬೇರೆ. ಚಿತ್ರ ಪ್ರಾರಂಭಗೊಂಡ ನಂತರ ಥೇಟರ್‌ನಲ್ಲಿ ಪಾದಾರ್ಪಣೆ ಮಾಡಿ, ಇಂಟರ್‌ವೆಲ್‌ನಲ್ಲಿ ಶೌಚಾಲಯದಲ್ಲಿ ಅಡಗಿ, ಕೊನೆಯ ದೃಶ್ಯ ಮುಗಿಯುವ ಮೊದಲೇ ಕಾಲು ಕಿತ್ತುವುದು ಆಗಿನ ಹವ್ಯಾಸ.

ಆದರೆ ಸಿನೆಮಾ ಎಂದರೆ ಇಷ್ಟೇ ಅಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದು ದೂರದರ್ಶನ ಹಾಗೂ ಡಿಡಿ ಮೂವಿ ಚಾನೆಲ್‌ಗಳು. ದೂರದರ್ಶನದಲ್ಲಿ ವಾರಕ್ಕೊಂದು ಬಾರಿ ಪ್ರಸಾರವಾಗುತ್ತಿದ್ದ ಪ್ರಶಸ್ತಿ ವಿಜೇತ ಚಿತ್ರಗಳೂ, ಡಿಡಿ ಮೂವಿಯಲ್ಲಿ ಪ್ರಸಾರವಾಗುತ್ತಿದ್ದ ಬೇರೆ ದೇಶಗಳ ಚಿತ್ರಗಳೂ ಕಲಾತ್ಮಕ ಚಿತ್ರಗಳ ಬಗ್ಗೆ ಆಸಕ್ತಿ ಬೆಳೆಸಿದವು. ೩೦ರ ಆಸುಪಾಸು ವಯಸ್ಸು ಹೊರಳಾಡುತ್ತಿದ್ದಂತೆ ಅಕಿರಾ ಕುರಾಸೊವಾ, ಮೊಹಮ್ಮದ್, ಶ್ಯಾಂ ಬೆನಗಲ್, ವಿಶಾಲ್ ಭಾರಧ್ವಾಜ್‌ರಂತಹವರು ಮೋಡಿ ಮಾಡಿದರು. ಸಿನೆಮಾ ಸಂದೇಶ ನೀಡಲು ಸಾಧ್ಯವಿಲ್ಲ ಎನ್ನುವುದು ಒಂದಿಷ್ಟು ನಿರ್ದೇಶಕರ ಮಾತು, ಆದರೆ ಚಿತ್ರವನ್ನಷ್ಟೇ ನಿರ್ಮಿಸಿ ಸಂದೇಶವನ್ನು ಜಾಣ ಪ್ರೇಕ್ಷಕರಿಗೆ ಬಿಡುವುದು ಚತುರ ನಿರ್ದೇಶಕರ ಕ್ರಿಯಾಶೀಲತೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ಕಮೀನೆ ಚಿತ್ರದ ಫಟಾಕ್ ಹಾಡು ಇಂತಹ ಸಂದೇಶಕ್ಕೊಂದು ಉದಾಹರಣೆ. ಸಭ್ಯತೆಯ ಪರಿಯಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸುವ ಫಟಾಕ್ ಚಿಕ್ಕಮಕ್ಕಳಲ್ಲೂ ಸುರಕ್ಷಿತ ಲೈಂಗಿಕತೆ ಬಗ್ಗೆ ಜ್ಞಾನ ಮೂಡಿಸಲು ಸಹಕಾರಿ. ಇನ್ನು ಅಕಿರಾ ರಂತಹವರು ಏನೂ ಹೇಳದೇ ಎಲ್ಲವನ್ನೂ ಹೇಳುವ ಸಾಮರ್ಥ್ಯವುಳ್ಳವರು. ಶ್ಯಾಂ ಬೆನಗಲ್ ಜೀವನದ ನಾನಾ ಸಮಸ್ಯೆಗಳನ್ನು ಹಾಸ್ಯದ ಮೂಲಕ ಹೇಳಿದರು. ಪುಟ್ಟಣ್ಣರಂತಹ ಹಿರಿಯರು ದುರಂತವನ್ನೂ ಸುಮಧುರವಾಗಿ ಚಿತ್ರಿಸಿದರು.

ಸಿನೆಮಾ ಎಂದರೆ ಬದುಕು ಹಾಗೂ ಬದುಕಿನ ಸುತ್ತ ಮುತ್ತ ಓಲಾಡುವ ಭಾವನೆಗಳನ್ನು ಪ್ರತಿಬಿಂಬಿಸುವುದು ಎನ್ನುವುದು ನನ್ನ ಭಾವನೆ. ಪೌರಾಣಿಕ, ಸಾಮಾಜಿಕ, ಯುದ್ಧದ ಭೀಕರತೆ, ಪ್ರೇಮ, ಕಾಮ, ಬಡತನ, ಹಸಿವು ಹೀಗೆ ಜೀವನವನ್ನೇ ವಿಭಿನ್ನ ದೃಷ್ಟಿಕೋನಗಳಲ್ಲಿ ತೋರಿಸುವುದು ಸಿನಿಮಾ. ನಾವು ಮಾಡುವ ಅಥವಾ ಮಾಡಲಾಗದ ಸಾಧ್ಯತೆಗಳನ್ನೇ ತೆರೆದಿಡುವುದು ಸಿನೆಮಾ. ಹಾಗಾಗಿ ಸಿನೆಮಾ ಎಂದರೆ ಬದುಕು, ಬದುಕು ಎಂದರೆ ಸಿನಿಮಾ.

Tuesday, August 11, 2009

ಸಾಂಗತ್ಯ ಚಿತ್ರೋತ್ಸವದ ನೆನಪಿನ ರೀಲುಗಳು


ಚರ್ಚೆಯಲ್ಲಿ ಗುರುಪ್ರಸಾದ್, ಗುರುಸ್ವಾಮಿ
]
ಚಿತ್ರೋತ್ಸವದಲ್ಲಿ ಸಿನಿಮಾ ಪ್ರಿಯರು

ಕವಿಶೈಲದಲ್ಲಿ ಚರ್ಚೆ

ಪರಮೇಶ್ವರ್ ಗುರುಸ್ವಾಮಿ ಅವರಿಂದ ಮಾಹಿತಿ...

ಸಾಂಗತ್ಯ ಚಿತ್ರೋತ್ಸವದ ಸವಿ ನೆನಪು...




ಸ್ಥಳ : ರಾಷ್ಟ್ರಕವಿ ಕುವೆಂಪು ಅಧ್ಯಯನ ಕೇಂದ್ರದ ಮಿನಿ ಚಿತ್ರಮಂದಿರ, ಕುಪ್ಪಳ್ಳಿ.
ವೇಳೆ : ಬೆಳಗಿನ ೯ ಗಂಟೆ.
ವಿಭಿನ್ನ ನೆಲೆಯ ಚಿತ್ರಗಳ ವೀಕ್ಷಣೆಗೆ ಮಂಗಳೂರು, ಬೆಂಗಳೂರು, ಮೈಸೂರುಗಳಿಂದ ಬಂದ ಚಿತ್ರಪ್ರೇಮಿಗಳದ್ದೆಲ್ಲ ಸಂಭ್ರಮ, ಸಡಗರ. ಇದಕ್ಕೆಲ್ಲ ಕಾರಣವಾಗಿದ್ದು ಸಾಂಗತ್ಯ ತಂಡದ ಎರಡನೇ ಚಿತ್ರೋತ್ಸವ. ಜನೆವರಿಯಲ್ಲಿ ನಡೆದ ಮೊದಲ ಚಿತ್ರೋತ್ಸವದಲ್ಲಿ ರಮ್ಯ ಚಿತ್ರಗಳನ್ನು ನೋಡಿದ್ದ ಚಿತ್ರಾಸಕ್ತರಿಗೆ ಈ ಬಾರಿ ನಾಲ್ಕು ಹಂತಗಳಲ್ಲಿ ಚಿತ್ರ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ತವಕ.
ಷೇಕ್ಸ್‌ಪಿಯರನ್ ಮ್ಯಾಕ್‌ಬೆತ್ ನಾಟಕ ಅಧರಿಸಿದ ಪೊಲೊನ್‌ಸ್ಕಿ ನಿರ್ದೇಶನದ ಮ್ಯಾಕ್‌ಬೆತ್ ಹಾಗೂ ಅಕಿರಾ ಕುರೊಸೊವಾ ನಿರ್ದೇಶಿಸಿದ ಥ್ರಾನ್ ಆಫ್ ಬ್ಲಡ್. ಎರಡೂ ಚಿತ್ರಗಳು ವಿಭಿನ್ನ ನೆಲೆಯವು ಒಂದು ಪಾಶ್ಯಾತ್ಯದ ಕತಾ ಹಂದರ ಹೊಂದಿದ್ದರೆ ಇನ್ನೊಂದು ಏಶಿಯಾ ಪರಂಪರೆಯಲ್ಲಿ ಮ್ಯಾಕ್‌ಬೆತ್‌ನ ಕಥೆಯುಳ್ಳದ್ದು. ಮ್ಯಾಕ್ ಬೆತ್‌ನ ಪಾಪ ಪ್ರಜ್ಞೆ, ಅಕಾರ ಲಾಲಸೆಯನ್ನು ದೃಶ್ಯ ಮಾಧ್ಯಮದಲ್ಲಿ ತೆರೆದಿಟ್ಟ ಚಿತ್ರಗಳನ್ನು ನೋಡಿದ ಶಿಬಿರಾರ್ಥಿಗಳಿಗೆ ಹೊಸ ಅನುಭವ. ನಂತರ ಈ ಚಿತ್ರಗಳ ಬಗ್ಗೆ ನಡೆದ ಎರಡು ಗಂಟೆಯ ಚರ್ಚೆಯಲ್ಲಿ ಎರಡೂ ಚಿತ್ರಗಳ ನಾನಾ ಆಯಾಮಗಳ ಬಗ್ಗೆ ವಿಶ್ವ ದರ್ಶನವಾಯಿತು.
ಭಾರತೀ ಶಂಕರ್ ನಿರ್ದೇಶನದ ಕಾರಂತಜ್ಜನಿಗೊಂದು ಪತ್ರ ನೋಡಿದವರ ಮನ ಸೆಳೆಯಿತು, ಚಿತ್ರದ ಕೊನೆಯ ದೃಶ್ಯ ಎಲ್ಲರಲ್ಲೂ ಚಿಂತನೆಗೆ ಕಾರಣವಾಯಿತು. ಕಡಲ್ಕೊರೆತದಂತಹ ಸಮಸ್ಯೆಯೊಂದಿಗೆ ಸಮಾಜದ ನಾನಾ ಸ್ತರಗಳ ಸಮಸ್ಯೆಗಳನ್ನು ಎದುರಿಟ್ಟ ಚಿತ್ರಕ್ಕೆ ಭರ್ತಿ ಚಪ್ಪಾಳೆ, ಮೆಚ್ಚುಗೆ. ಹಿಟ್ಲರ್ ತನ್ನ ಕಾಲದಲ್ಲಿ ನಡೆಸಿದ ಪಾಶವೀ ಕೃತ್ಯದ ಬಗ್ಗೆ ಬಾಲಕನೊಬ್ಬನ ದೃಷ್ಟಿಯನ್ನು ಬಿಂಬಿಸಿದ್ದು ದ ಬಾಯ್ ವಿತ್ ಸ್ಟ್ರಿಪಡ್ ಪೈಜಾಮಾ. ಚಿತ್ರದಲ್ಲಿ ಮನ ಕಲಕುವ ದೃಶ್ಯಗಳು ಚರ್ಚೆಯಲ್ಲಿ ಮೆಚ್ಚುಗೆಗೆ ಪಾತ್ರವಾದವು. ಕಾರ್ತಿಕ್ ಪರಾಡ್ಕರ್‌ರ ನಾಗ ಮಂಡಲ ಸಾಕ್ಷ್ಯಚಿತ್ರ, ಘೋಸ್ಟ್ ಇನ್ ದಿ ಡಾರ್ಕ್‌ನೆಸ್ ಚಿತ್ರಗಳನ್ನು ವೀಕ್ಷಿಸಿದ ಶಿಬಿರಾರ್ಥಿಗಳು ಭೇಷ್ ಎಂದರು.
ಈ ಬಾರಿ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಅಭಿಪ್ರಾಯ ಹಂಚಿಕೊಂಡು ಮಾರ್ಗದರ್ಶನ ನೀಡಿದ್ದು ಖ್ಯಾತ ನಿರ್ದೇಶಕ ಗುರುಪ್ರಸಾದ್. ನಿರ್ದೇಶಕನಿಗೆ ಚಿತ್ರ ನಿರ್ಮಾಣದ ಬಗ್ಗೆ ಆಸಕ್ತಿ, ವ್ಯಾಮೋಹವಿರಬೇಕು ಆಗ ಮಾತ್ರ ಒಳ್ಳೆಯ ಚಿತ್ರ ನಿರ್ಮಿಸಲು ಸಾಧ್ಯ ಎಂದ ಅವರು ಚಿತ್ರ ನಿರ್ಮಾಣದ ಬಗ್ಗೆ ಹಲವು ಕುತೂಹಲದ ಸಂಗತಿಗಳನ್ನು ತೆರೆದಿಟ್ಟರು. ಸಾಂಗತ್ಯದ ಚಿತ್ರೋತ್ಸವವನ್ನು ಬೆಂಗಳೂರಿನಲ್ಲಿ ಆಯೋಜಿಸಿದರೆ ಸಹಕಾರ ನೀಡಲು ಸಾಧ್ಯ ಎಂದರು.
ಎರಡು ದಿನಗಳ ಚಿತ್ರೋತ್ಸವದಲ್ಲಿ ಉತ್ತಮ ಚಿತ್ರಗಳೊಂದಿಗೆ ಮಲೆನಾಡಿನ ಅದ್ಭುತ ಉಪಹಾರ, ಊಟವಿತ್ತು. ಮತ್ತೊಂದು ಚಿತ್ರೋತ್ಸವಕ್ಕೆ ಬಂದೇ ಬರುತ್ತೇವೆ ಎನ್ನುತ್ತ ಎಲ್ಲರೂ ಚಿತ್ರಗಳ ಸವಿ ನೆನಪಿನ ರೀಲುಗಳನ್ನು ಮನದಲ್ಲಿ ಜೋಪಾನವಾಗಿಟ್ಟು ತೆರಳಿದರು. ಚಿತ್ರೋತ್ಸವ ಆಯೋಜನೆಗೆ ಕಾರಣರಾದ ಅರವಿಂದ ನಾವಡ ಸರ್, ಸುಂದ್ರ ಕುಮಾರ್, ಪರಮೇಶ್ವರ ಗುರುಸ್ವಾಮಿ, ದೀಪಾ ಹಿರೇಗುತ್ತಿ, ಕಡಿದಾಳ್ ಪ್ರಕಾಶ್‌ರಿಗೆ ವಂದನೆ, ಅಭಿನಂದನೆ.

Monday, August 3, 2009

ಜಾಣ ಪ್ರಶ್ನೆಗಳು ಆಲಸಿ ಮಂಜನದ್ದೋ ? ನಿರ್ದೇಶಕರದ್ದೋ ?

ಒಬ್ಬ ಉತ್ತಮ ಚಿತ್ರ ನಿರ್ದೇಶಕ ಹಲವು ಪ್ರಶ್ನೆಗಳನ್ನಿಟ್ಟುಕೊಂಡು ನಿರ್ದೇಶನಕ್ಕೆ ಮುಂದಾಗುತ್ತಾನೆ. ಈ ಪ್ರಶ್ನೆಗಳು ಚಿತ್ರ ನೋಡಿದ ನಂತರ ಪ್ರೇಕ್ಷಕನನ್ನೂ ಕಾಡಬೇಕು. ಹೀಗೆ ಹಲವು ಪ್ರಶ್ನೆಗಳನ್ನಿಟ್ಟುಕೊಂಡು, ಪ್ರೇಕ್ಷಕರ ಮನದಲ್ಲೂ ಹಲವು ಪ್ರಶ್ನೆಗಳನ್ನು ಮೂಡಿಸಿರುವುದು ಗುರುಪ್ರಸಾದ್‌ರ ಎದ್ದೇಳು ಮಂಜುನಾಥ. ಭಾರಿ ಆಲಸಿಯೊಬ್ಬ ಜೀವಿಸುವ ರೀತಿ, ಸಮಾಜದ ವಿಡಂಬನೆಯನ್ನೇ ಮಾಡುತ್ತ ಮತ್ತೆ ನಿದ್ದೆಗೆ ಜಾರುವ ಕಳ್ಳ ಮಂಜ ಸಮಾಜ, ಸಿನಿಮಾ, ರಾಜಕೀಯ, ಪೊಲೀಸ್ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ನಮ್ಮೆದುರು ಹರಡುತ್ತಾನೆ. ಈ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕುತ್ತ ಹೊರಟರೆ ಮಂಜನ ಬಗ್ಗೆ ಕನಿಕರ ಮೂಡುವುದಿಲ್ಲ, ಬದಲಿಗೆ ಅಭಿಮಾನ ವ್ಯಕ್ತವಾಗುತ್ತದೆ. ಪೂರ್ಣ ಲೇಖನ ಓದಿ...

http://saangatya.wordpress.com

Tuesday, July 28, 2009

ಸಾಂಗತ್ಯದ ಇನ್ನೊಂದು ಹೆಜ್ಜೆ

ಆ. 8 ಮತ್ತು 9 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಸಾಂಗತ್ಯ ಆಯೋಜಿಸಿರುವ ಎರಡನೇ ಚಿತ್ರೋತ್ಸವಕ್ಕೆ ಹೆಸರು ನೋಂದಣಿ ಆರಂಭವಾಗಿದೆ.

ಈ ಬಾರಿ ಹೆಸರು ನೋಂದಣಿ ಕಡ್ಡಾಯವಾಗಿದ್ದು, ಸಾಂಗತ್ಯ ಹಲವೆಡೆ ಮಾಹಿತಿ ಮತ್ತು ನೋಂದಣಿಗೆ ತನ್ನ ಪ್ರತಿನಿಧಿಗಳನ್ನು ನಿಯೋಜಿಸಿದೆ. ಜತೆಗೆ ಸಾಕ್ಷ್ಯಚಿತ್ರಗಳನ್ನೂ ಆಹ್ವಾನಿಸಿದೆ. ಆ. 5 ರೊಳಗೆ 20 ನಿಮಿಷಗಳೊಳಗಿನ ಸಾಕ್ಷ್ಯಚಿತ್ರಗಳ ಪ್ರತಿಗಳನ್ನು ಕಳುಹಿಸಬಹುದು. ಆಯ್ಕೆಯಾದ ಎರಡು ಸಾಕ್ಷ್ಯಚಿತ್ರಗಳಿಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.

ಈ ಬಾರಿ ಚಲನಚಿತ್ರೋತ್ಸವದಲ್ಲಿ ಸಾಕಷ್ಟು ಹೊಸತನವನ್ನು ಹೊಂದಿದ್ದು, ಚರ್ಚೆ, ಸಂವಾದಕ್ಕೆ ಅನುಕೂಲವಾಗುವಂತೆ ಯೋಜಿಸಲಾಗಿದೆ. ವಿದೇಶಿ ಭಾಷೆಗಳ ಚಿತ್ರಗಳೊಂದಿಗೆ, ದೇಶಿ ಅದರಲ್ಲೂ ದಕ್ಷಿಣ ಭಾರತೀಯ ಚಲನಚಿತ್ರಗಳನ್ನೂ ಪ್ರದರ್ಶಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

ಹೊಸಬರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲೂ ಆಲೋಚಿಸಿದ್ದು, ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಹೆಸರು ನೋಂದಾಯಿಸಿದವರು ತಕ್ಷಣವೇ ತಮ್ಮ ಹೆಸರನ್ನು ದಾಖಲಿಸಬಹುದು.

ಬಹಳ ವಿಶಿಷ್ಟವಾಗಿ ಈ ಉತ್ಸವವನ್ನು ಸಂಘಟಿಸಿದ್ದು, ಸಿನಿಮಾ ಗ್ರಹಿಕೆ, ಸಿನಿಮಾ ನಿರ್ಮಾಣ ಇತ್ಯಾದಿ ಬಗ್ಗೆಯೂ ಮಾಹಿತಿ ನೀಡಲಾಗುವುದು. ಇದು ಸಿನಿಮಾ ಗ್ರಹಿಕೆಯ ವಿಧಾನವನ್ನು ಅರಿಯಲೆಂದೇ ರೂಪಿಸಿದ್ದು, ಆಸಕ್ತರು ಭಾಗವಹಿಸಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ 93433 81802, 98444 91532 ಗೆ ಸಂಪರ್ಕಿಸಬಹುದು.

ಪ್ರವೇಶ ಶುಲ್ಕ 300 ರೂ.. ಬೆಂಗಳೂರಿನಲ್ಲಿ ಮಹೇಶ್ ಹೆಗಡೆ-99864 11247, ಪ್ರವೀಣ್ ಬಣಗಿ- 98444 91532, ಮೈಸೂರಿನಲ್ಲಿ ನಾವಡ- 93433 81802, ಬಾಗಲಕೋಟೆ- ರವಿರಾಜ್ ಗಲಗಲಿ-93433 81818, ಉಡುಪಿ, ದಕ್ಷಿಣ ಕನ್ನಡದಲ್ಲಿ ಸಿಬಂತಿ ಪದ್ಮನಾಭ-94495 25854, ತೀರ್ಥಹಳ್ಳಿಯಲ್ಲಿ ಮಧುಕರ್ ಮಯ್ಯ-94481 54298, ಚಿಕ್ಕಮಗಳೂರು, ಕೊಪ್ಪದಲ್ಲಿ ದೀಪಾ ಹಿರೇಗುತ್ತಿ-94804 76176…ಇವರಲ್ಲಿ ಹೆಸರು ನೋಂದಾಯಿಸಬಹುದು.

ಸಾಕ್ಷ್ಯಚಿತ್ರಗಳಿಗೆ ಆಹ್ವಾನ
ಚಿತ್ರೋತ್ಸವದಲ್ಲಿ ಹವ್ಯಾಸಿಗಳು ನಿರ್ಮಿಸಿದ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುವುದು. ಸಾಕ್ಷ್ಯಚಿತ್ರಗಳು ೨೦ ನಿಮಿಷಗಳೊಳಗಿರಬೇಕು. ಬಂದ ಸಾಕ್ಷ್ಯಚಿತ್ರಗಳನ್ನು ಪ್ರದರ್ಶನಕ್ಕೆ ತಜ್ಞರ ಸಮಿತಿ ಆಯ್ಕೆ ಮಾಡಲಿದೆ. ಆಸಕ್ತರು ತಾವು ನಿರ್ಮಿಸಿದ ಸಾಕ್ಷ್ಯಚಿತ್ರಗಳ ಪ್ರತಿಗಳನ್ನು ಸಾಂಗತ್ಯ, c/o ಸುಧಾ, 905/175 ಎ, 7 ನೇ ಕ್ರಾಸ್, ನಾಲ್ಕನೇ ಮುಖ್ಯರಸ್ತೆ, ಸಾರ್ವಜನಿಕ ಹಾಸ್ಟೆಲ್ ರಸ್ತೆ, ವಿದ್ಯಾರಣ್ಯಪುರಂ, ಮೈಸೂರು 570 008 ಇಲ್ಲಿಗೆ ಕಳುಹಿಸಬಹುದು.

Monday, July 13, 2009

ಮೌನದ ಭಾಷೆ-ನಿಶಾಂತ್



ಆ ಪುಟ್ಟ ಹಳ್ಳಿಯಲ್ಲಿ ಮೌನವೇ ಸರ್ವತ್ರ ಸಾಧನ, ಮೌನವೇ ಭಾಷೆ, ಮೌನದ್ದೇ ಸಂವಹನ. ಗ್ರಾಮದ ಜಮೀನ್ದಾರ ಸಹೋದರರು ನಡೆಸುವ ದೌರ್ಜನ್ಯ, ಅತ್ಯಾಚಾರಕ್ಕೆ ಮೌನವೇ ಉತ್ತರ. ಖ್ಯಾತ ನಿರ್ದೇಶಕ ಶ್ಯಾಂ ಬೆನಗಲ್ ೧೯೭೬ರಲ್ಲಿ ನಿರ್ದೇಶಿಸಿದ ನಿಶಾಂತ್ ಚಿತ್ರದ ಒನ್ ಲೈನ್ ಕತೆಯಿದು.
ನಿಶಾಂತ್ ಅರ್ಥಾತ್ ರಾತ್ರಿಯ ಕೊನೆ, ಚಿತ್ರದಲ್ಲೆಲ್ಲ ಕತ್ತಲೆ ಬೆಳಕಿನ ಆಟವನ್ನಾಡಿದ್ದಾರೆ ಶ್ಯಾಂ. ೧೯೪೫ರಲ್ಲಿ ಆಂಧ್ರ ಪ್ರದೇಶದ ಗ್ರಾಮವೊಂದರಲ್ಲಿ ನಡೆಯುವ ಜಮೀನ್ದಾರರ ದೌರ್ಜನ್ಯ ಇಲ್ಲಿ ಕತೆಯಾಗಿದೆ. ಆ ಹಳ್ಳಿಯಲ್ಲಿ ಜಮೀನ್ದಾರರು ಹೇಳಿದ್ದೆ ಮಾತು, ಆಡಿದ್ದೇ ಆಟ. ಹಿರಿಯಣ್ಣ ಹಾಗೂ ಇಬ್ಬರು ಸಹೋದರರ ಜಮೀನ್ದಾರರ ಕುಟುಂಬ ಅಕ್ಷರಶ: ಹಳ್ಳಿಯನ್ನು ನರಕವಾಗಿಸುತ್ತಾರೆ. ಸಂತೆಯಲ್ಲಿ ಕೋಳಿ ಮಾರುವವಳ ಬುಟ್ಟಿಗೆ ಜಮೀನ್ದಾರರ ಸಹೋದರರು ಕೈ ಹಾಕಿದರೆ ಬುಟ್ಟಿಯಲ್ಲಿನ ಕೋಳಿಗಳು ಅವರ ಹೊಟ್ಟೆ ಹಸಿವು ತಣಿಸಿದರೆ, ಕೋಳಿ ಮಾರುವಾಕೆ ದೇಹದ ಹಸಿವು ಪೂರೈಸಬೇಕು. ಹಿರಿಯಣ್ಣ (ಅಮರೀಶ್ ಪುರಿ), ಕಿರಿಯವ (ಡಾ.ಮೋಹನ್ ಅಗಾಸೆ), ಚಿಕ್ಕ ಸಹೋದರ (ಅನಂತ್ ನಾಗ್) ಸುತ್ತ ಚಿತ್ರದ ಕತೆ ಸುತ್ತುತ್ತದೆ.
ಗ್ರಾಮಕ್ಕೆ ಬರುವ ಶಾಲಾ ಮಾಸ್ತರ್(ಗಿರೀಶ್ ಕಾರ್ನಾಡ್) ಹೆಂಡತಿ ಸುಶೀಲಾ (ಶಬಾನಾ ಆಜ್ಮಿ) ಜಮೀನ್ದಾರ ಸಹೋದರರ ಕಣ್ಣಿಗೆ ಬೀಳುತ್ತಾಳೆ. ಅದೊಂದು ದಿನ ಆಕೆಯನ್ನು ಅನಾಮತ್ತಾಗಿ ಎತ್ತಿಕೊಂಡು ಹೋಗುವ ಜಮೀನ್ದಾರರು ಆಕೆಯನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಆಸೆ ಪೂರೈಸಿಕೊಳ್ಳುತ್ತಾರೆ. ಅದು ಜಮೀನ್ದಾರರ ವಿಷಯವಾಗಿರುವುದರಿಂದ ಯಾರೂ ಬಾಯಿ ಬಿಡುವುದಿಲ್ಲ. ಪೊಲೀಸರು, ಕಲೆಕ್ಟರ್ ಕಚೇರಿ ಹೀಗೆ ಕಂಡ ಕಂಡಲೆಲ್ಲ ಅಲೆದಾಡಿ ಪತ್ನಿಯನ್ನು ವಾಪಸ್ ಪಡೆಯಲು ನಡೆಸಿದ ಪ್ರಯತ್ನಗಳು ವಿಫಲವಾಗುತ್ತವೆ. ಇತ್ತ ಜಮೀನ್ದಾರರ ಮನೆಯ ವಾತಾವರಣಕ್ಕೆ ಹೊಂದಿಕೊಂಡ ಸುಶೀಲಾ ಪ್ರತಿರೋಧದ ಶಕ್ತಿ ಕಳೆದುಕೊಳ್ಳುತ್ತಾಳೆ. ಜಮೀನ್ದಾರನ ಕಿರಿಯ ಸಹೋದರ (ನಾಸಿರುದ್ದೀನ್ ಶಾ)ಆಕೆಯಲ್ಲಿ ಅನುರಕ್ತನಾಗುತ್ತಾನೆ.
ಒಮ್ಮೆ ದೇವಾಲಯದ ಎದುರು ಮಾಸ್ತರ್ ಹಾಗೂ ಆತನ ಪತ್ನಿ ಮುಖಾಮುಖಿಯಾಗುತ್ತಾರೆ. ನನ್ನನ್ನು ಅಪಹರಿಸಿಕೊಂಡು ಹೋದರೂ ನೀವು ಬಿಡಿಸಲು ಏಕೆ ಯತ್ನಿಸಿಲ್ಲ ಎಂದು ಪ್ರಶ್ನಿಸುವ ಸುಶೀಲಾ ಜಮೀನ್ದಾರನ ಮನೆಗೆ ವಾಪಸ್ಸಾಗುತ್ತಾಳೆ. ದೇವಾಲಯದ ಪೂಜಾರಿಯಿಂದ ನೈತಿಕ ಸ್ಥೈರ್ಯ ಪಡೆಯುವ ಶಾಲಾ ಮಾಸ್ತರ್ ಉತ್ಸವದ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸಿ ದಂಗೆ ಏಳುತ್ತಾನೆ. ಗ್ರಾಮಸ್ಥರ ಆಕ್ರೋಶಕ್ಕೆ ಜಮೀನ್ದಾರ ಹಾಗೂ ಆತನ ಇಬ್ಬರು ಸಹೋದರರು ಹಾಗೂ ಕೊನೆಯ ಸಹೋದರನ ಪತ್ನಿ ರುಕ್ಮಿಣಿ ಕೊಲೆಯಾಗುತ್ತಾರೆ. ಕೊನೆಯ ಸಹೋದರ (ನಾಸಿರುದ್ದೀನ್ ಶಾ)ನೊಂದಿಗೆ ಸುಶೀಲಾ ಪರಾರಿಯಾಗುತ್ತಾಳೆ. ಜಮೀನ್ದಾರರೊಂದಿಗೆ ಹೋರಾಟದಲ್ಲಿ ಕೈಗೆ ಗುಂಡು ಬಡಿದು ಗಾಯಗೊಂಡ ಮಾಸ್ತರ್ ಪತ್ನಿಯನ್ನು ಹುಡುಕುತ್ತ ಅಸಹಾಯಕನಾಗಿ ನಿಲ್ಲುತ್ತಾನೆ.
ಕತ್ತಲಿಗೆ ಕೊನೆಯಿದೆ, ಬೆಳಗು ಬಂದೇ ಬರುತ್ತದೆ ಎಂಬುದನ್ನು ಹಲವು ದೃಶ್ಯಗಳ ಮೂಲಕ ಶ್ಯಾಂ ಚಿತ್ರದಲ್ಲಿ ನಿರೂಪಿಸುತ್ತಾರೆ. ಚಿತ್ರದ ಮೊದಲ ದೃಶ್ಯವೇ ಮುಂಜಾವಿನಲ್ಲಿ ಮಂತ್ರ ಹೇಳುತ್ತ ದೇವಾಲಯದ ಬಾಗಿಲು ತೆಗೆಯುವ ಪೂಜಾರಿಯದ್ದು. ಅಸಹಾಯಕತೆ, ದೌರ್ಜನ್ಯಕ್ಕೆ ಬಲಿಯಾದ ಸುಶೀಲಾ ತನ್ನ ಮೇಲೆ ಮಮಕಾರ, ಪ್ರೀತಿ ತೋರಿಸಿದವನ ಹೆಂಡತಿ ರುಕ್ಮಿಣಿಯ ಗೆಳತಿಯೂ ಆಗುತ್ತಾಳೆ. ಸ್ವಾತಂತ್ರ್ಯಪೂರ್ವ ಜಮೀನ್ದಾರಿ ಪದ್ಧತಿಯ ದೌರ್ಜನ್ಯಗಳ ಬಗ್ಗೆ ಹಲವು ಚಿತ್ರಗಳು ತೆರೆ ಕಂಡಿದ್ದರೂ ನಿಶಾಂತ್ ಮಾತ್ರ ಈ ಪ್ರಯತ್ನಗಳಲ್ಲಿ ವಿಭಿನ್ನವಾಗುತ್ತದೆ. ಜಮೀನ್ದಾರರ ಆಟಾಟೋಪ, ದೃಶ್ಯಗಳ ಮಧ್ಯದ ಮೌನ, ಪರಿಣಾಮಕಾರಿ ಸಂಭಾಷಣೆ ಹಾಗೂ ಸರಳ ಸಂಗೀತ ಚಿತ್ರದ ಹೈಲೈಟ್. ದೌರ್ಜನ್ಯವನ್ನು ಹಿಂಸೆಯ ರೂಪದಲ್ಲಿ ಬಿಂಬಿಸದೇ ಮಾತು ಹಾಗೂ ಮೌನದ ಮೂಲಕ ರೂಪಿಸಿ ವಿಶಿಷ್ಟ ಅನುಭವ ನೀಡುತ್ತಾರೆ ಬೆನಗಲ್. ಅಂದ ಹಾಗೆ ಈ ಚಿತ್ರದಲ್ಲಿ ಪ್ರತಿಭಾವಂತರ ಪಡೆಯೇ ಇದೆ.
ಮರಾಠಿ ರಂಗಭೂಮಿಯ ಹೆಸರಾಂತ ನಟ, ನಿರ್ದೇಶಕ ಡಾ.ಮೋಹನ್ ಆಗಾಸೆ, ಕನ್ನಡದ ಖ್ಯಾತ ನಟ ಅನಂತ ನಾಗ್, ನಾಸಿರುದ್ದೀನ್ ಶಾ, ಶಬಾನಾ ಆಜ್ಮಿ, ಕುಲಭೂಷಣ್ ಕರಬಂದಾ, ಅಂಕುರ್ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಟ ಸಾಧು ಮೆಹರ್ ಚಿತ್ರದಲ್ಲಿದ್ದಾರೆ. ಸ್ಮಿತಾ ಪಾಟೀಲರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿಯೂ ಈ ಚಿತ್ರಕ್ಕಿದೆ. ಸಂಭಾಷಣೆ ಬರೆದ ಸತ್ಯದೇವ್ ದುಬೆ ಕೂಡ ಪೂಜಾರಿ ಪಾತ್ರದಲ್ಲಿದ್ದಾರೆ. ಖ್ಯಾತ ಲೇಖಕ ವಿಜಯ್ ತೆಂಡೂಲ್ಕರ್ ಕತೆ ಆಧಾರಿತ ಚಿತ್ರವನ್ನು ಆಂಧ್ರ ಪ್ರದೇಶದ ಪೂಚಂಪಲ್ಲಿಯಲ್ಲಿ ಚಿತ್ರಿಸಲಾಗಿದೆ.
ಪ್ರಶಸ್ತಿಗಳು : ಉತ್ತಮ ಹಿಂದಿ ಚಿತ್ರ, ಉತ್ತಮ ನಿರ್ದೇಶಕ, ೧೯೭೭, ಕ್ಯಾನೆಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಚಿಕ್ಯಾಗೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿತಗೊಂಡಿದೆ.
ಸಂಗೀತ : ವನರಾಜ್ ಭಾಟಿಯಾ ನಿರ್ಮಾಪಕರು : ಮೋಹನ್ ಬಿಜಲಾನಿ, ಫ್ರೀನಾ ವರೇರಾ, ಛಾಯಾಗ್ರಹಣ : ಗೋವಿಂದ ನಿಹಲಾನಿ.

Thursday, July 2, 2009

`ಜೀನತ್ ಮಾದಕತೆ, ಸಂಜೀವ್ ಭೋಳೆತನ' ಮನೋರಂಜನ್



ಯಹಾ ಶೇರ್ ಔರ್ ಬಕ್ರಿ ಏಕ್ ಹೀ ಘಾಸ್ ಖಾತಿ ಹೈ (ಇಲ್ಲಿ ಸಿಂಹ ಹಾಗೂ ಆಡು ಒಂದೇ ಹುಲ್ಲು ತಿನ್ನುತ್ತವೆ) ಹೀಗೆ ಬಾರ್ ಮಾಲೀಕ ಧೂಪ್ ಛಾವ್(ಶಮ್ಮಿ ಕಪೂರ್) ನಾಯಕ ಶೇರಾ (ಸಂಜೀವ್ ಕುಮಾರ್)ಗೆ ಹೇಳುತ್ತಾನೆ. ಮನೋರಂಜನ್ ಚಿತ್ರದ ಸಂಪೂರ್ಣ ವ್ಯಾಖ್ಯೆ ಈ ಸಂಭಾಷಣೆಯಲ್ಲಿದೆ. ೧೯೭೬ರಲ್ಲಿ ಖ್ಯಾತ ನಟ ಶಮ್ಮಿ ಕಪೂರ್ ನಿರ್ದೇಶಿಸಿದ ಚಿತ್ರವಿದು. ಇಂಗ್ಲೀಷ್ ಚಿತ್ರ ಇರ್ಮಾ ಲಾ ಡ್ಯಾನ್ಸ್‌ನಿಂದ ಸ್ಪೂರ್ತಿ ಪಡೆದ ಚಿತ್ರವಿದು. ಅಂದ ಹಾಗೆ ಇರ್ಮಾ ಲಾ ಡ್ಯಾನ್ಸ್ ಚಿತ್ರ ಕೂಡ ನೃತ್ಯ ರೂಪಕವೊಂದರಿಂದ ಪ್ರೇರಣೆ ಪಡೆದಿದ್ದು. ಲವರ್ ಬಾಯ್ ಇಮೇಜ್ ಮೂಲಕ ಖ್ಯಾತಿ ಪಡೆದ ಶಮ್ಮಿ ಕಪೂರ್ ನಾಯಕ ನಟನ ವೇಷದಿಂದ ಹಿಂದೆ ಸರಿದ ನಂತರ ಇಂತಹ ಪಕ್ಕಾ ಹಾಸ್ಯಭರಿತ ಚಿತ್ರ ನಿರ್ದೇಶನಕ್ಕೆ ಮನಸ್ಸು ಮಾಡಿದರು. ಯಥಾ ಪ್ರಕಾರ ಹಿಂದಿಯ ಸಾಮಾನ್ಯ ಚಿತ್ರಗಳಂತೆ ಈ ಚಿತ್ರ ನಿರೂಪಿಸಲಾಗಿದ್ದರೂ, ವೇಶ್ಯಾವಾಟಿಕೆ ಮನರಂಜನೆ ನೀಡುವ ಕ್ಷೇತ್ರ ಹೊರತು ಮಾಂಸದ ಮಾರಾಟವಲ್ಲ ಎಂದು ನಿರೂಪಿಸಿದ ಹಿಂದಿಯ ಏಕೈಕ ಚಿತ್ರ ಎನ್ನುವ ಹೆಗ್ಗಳಿಕೆಯೂ ಉಂಟು.
ಚಿತ್ರದ ನಾಯಕ ಶೇರಾ ಆಗಷ್ಟೇ ಪೇದೆಯಾಗಿ ಮುಂಬೈನ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿ ಮನೋರಂಜನ್ ಬೀದಿಗೆ ಕಾಲಿಡುತ್ತಾನೆ. ಅಲ್ಲಿನ ವೇಶ್ಯಾವಾಟಿಕೆ ನೋಡಿ ಲಾಡ್ಜ್‌ವೊಂದರಲ್ಲಿ ರೇಡ್ ಮಾಡಲು ಮಾಹಿತಿ ನೀಡುತ್ತಾನೆ. ದಾಳಿ ನಡೆಸಿದಾಗ ಆತನ ಹಿರಿಯ ಅಕಾರಿಯೇ ವೇಶ್ಯೆಯರೊಂದಿಗಿರುವುದನ್ನು ಕಂಡು ದಂಗಾಗುತ್ತಾನೆ. ಶೇರಾ ನೌಕರಿ ಕಳೆದುಕೊಂಡು ನಿರ್ವಸಿತನಾದಾಗ ನಾಯಕಿ ನಿಶಾ (ಜೀನತ್ ಅಮಾನ್) ಆತನಿಗೆ ಸಹಾಯ ಹಸ್ತ ಚಾಚುತ್ತಾಳೆ. ಆಕೆಯೊಂದಿಗೆ ಜೀವನ ನಡೆಸುವ ನಾಯಕನಿಗೆ ವೇಶ್ಯಾವೃತ್ತಿ ಕಂಡರೆ ಎಂಥದೋ ತಪನೆ, ಸಂಕಟ. ನಿಶಾ ವೇಶ್ಯಾವಾಟಿಕೆ ನಿಲ್ಲಿಸಬೇಕು ಎಂದು ಆಶಿಸಿ ಬಾರ್ ಮಾಲೀಕ (ಶಮ್ಮಿ ಕಪೂರ್)ನೊಂದಿಗೆ ಯೋಜನೆಯೊಂದನ್ನು ರೂಪಿಸುತ್ತಾನೆ. ನವಾಬ್‌ನ ವೇಷ ಧರಿಸಿ ಪ್ರತಿ ವಾರ ನಿಶಾಳೊಂದಿಗೆ ರಾತ್ರಿ ಕಳೆದು (ಅಂದರೆ ಬರಿ ಇಸ್ಪೇಟ್ ಆಡುತ್ತ) ಆಕೆ ಕೈಗೆ ೫೦೦ ರೂ. ನೀಡುತ್ತಾನೆ. ಈ ಹಣ ಬಾರ್ ಮಾಲೀಕ ನೀಡಿದ ಸಾಲ, ಇಶಾ ತಾನು ಪಡೆದ ಹಣವನ್ನು ಶೇರಾನಿಗೆ ನೀಡುತ್ತಾಳೆ, ಆತ ಹಣವನ್ನು ಮತ್ತೆ ಬಾರ್ ಮಾಲೀಕನಿಗೆ ವಾಪಸ್ ಮಾಡುತ್ತಾನೆ, ಇದು ಪದ್ಧತಿ.
ಆದರೆ ಬಾರ್ ಮಾಲೀಕ ಶೇರಾನಿಗೆ ಸಾಲ ಪಡೆಯುವ ಬದಲು ನಾಯಿಗೆ ಕಳ್ಳರು ನುಗ್ಗಿದಾಗ ಎದುರಿಸುವ ತರಬೇತಿ ನೀಡುವ ಉದ್ಯೋಗಕ್ಕೆ ಸೇರಿಕೊಳ್ಳಲು ಸೂಚಿಸುತ್ತಾನೆ. ರಾತ್ರಿಯಿಡೀ ನಾಯಿಯಿಂದ ಕಚ್ಚಿಸಿಕೊಳ್ಳುವ ನಾಯಕ ಬೆಳಗ್ಗೆ ಮನೆಗೆ ವಾಪಸ್ಸಾಗುತ್ತಾನೆ. ಈತನ ಮೈ, ಕೈ ಮೇಲಿರುವ ಗಾಯ ನೋಡಿದ ನಿಶಾ ಈತ ಇನ್ನೊಬ್ಬ ವೇಶ್ಯೆ ಲೊಲಿಟಾ ಸಂಗ ಮಾಡಿರಬಹುದು ಎಂದು ಶಂಕಿಸುತ್ತಾಳೆ. ಕೊನೆಗೆ ನವಾಬನ ವೇಷಕ್ಕೆ ಕೊನೆಗಾಣಿಸಲು ಆತ ಆತ್ಮಹತ್ಯೆ ಮಾಡಿಕೊಂಡ ಎಂಬ ಹುಯಿಲೆಬ್ಬಿಸುತ್ತಾನೆ ನಾಯಕ. ಆದರೆ ಆತನನ್ನು ಕೊಂದದ್ದು ನೀನೆ ಎಂಬ ಆರೋಪ ಪೊಲೀಸರದ್ದು. ಸಮಸ್ಯೆ ಕೊನೆಗಾಣಿಸಲು ನವಾಬನ ವೇಷ ಧರಿಸಿ ನಾಯಕ ವಾಪಸ್ಸಾಗುತ್ತಾನೆ, ಶೇರಾನ ಪ್ರಾಮಾಣಿಕತೆ ಮೆಚ್ಚಿ ಕಮೀಷನರ್ ಆತನಿಗೆ ಮತ್ತೆ ಇಲಾಖೆಯಲ್ಲಿ ಉದ್ಯೋಗ ನೀಡುವುದರೊಂದಿಗೆ ಚಿತ್ರ ಕೊನೆಗಾಣುತ್ತದೆ.
ಇದು ವೇಶ್ಯಾವಾಟಿಕೆ ಸಂಬಂಸಿದ ಚಿತ್ರವಾದರೂ ಮೈಮಾರುವ ಲೋಕದ ಸಂಕಷ್ಟಗಳನ್ನು ಬದಿಗಿರಿಸಿ ಕೇವಲ ಮನರಂಜನೆಯನ್ನಷ್ಟೇ ಮುಖ್ಯವಾಗಿಸಿದ್ದು ವಿಶೇಷ. ಸಂಭಾಷಣೆ ಹಾಗೂ ಆರ್.ಡಿ.ಬರ್ಮನ್‌ರ ಸಂಗೀತದಿಂದಾಗಿ ಚಿತ್ರ ಮನ ಸೆಳೆಯುತ್ತದೆ, ಜತೆಗೆ ಜೀನತ್ ಭಾರಿ ಪ್ರಮಾಣದಲ್ಲಿ ಬಟ್ಟೆ ಬಿಚ್ಚಿರುವುದೂ ಹೈಲೈಟ್. ಅಂದ ಹಾಗೆ ಈ ಚಿತ್ರದ ಹಾಡಿಗಾಗಿ ಲತಾ ಮಂಗೇಶ್ಕರ್ ಫಿಲ್ಮ್ ಫೇರ್ ಪ್ರಶಸ್ತಿಗಾಗಿ ನಾಮಾಂಕಿತರಾಗಿದ್ದು ವಿಶೇಷ. ಕೇವಲ ಮನರಂಜನೆಗಾಗಿ ಚಿತ್ರ ನೋಡುವವರು ಮನೋರಂಜನ್ ನೋಡಬಹುದು.

Thursday, June 25, 2009

ಸೂರ್ಯ-ಚಂದ್ರರಿಲ್ಲದೆ ಹೇಗೆ ಅಂದಿದ್ದೆ ? ಈಗ ನೀನಿಲ್ಲದೆ.....





what about sunlight ? what about raining ? ಹೀಗೆ ತನ್ನ ಹಿಸ್ಟರಿ ಆಲ್ಬಮ್‌ನಲ್ಲಿ ಪ್ರಶ್ನಿಸಿದ್ದ ಮಹಾನ್ ಕಲಾವಿದ ಮೈಕೆಲ್ ಜಾಕ್ಸನ್. ಧರೆಗುರುಳುವ ಮರಗಳು, ಜೀವಚ್ಛವವಾದ ಆನೆ, ಮಾಡು ಕಳೆದುಕೊಂಡ ಮನೆಗಳು, ನಿಸ್ಸಹಾಯಕರಾಗಿ ನಿಂತ ಬುಡಕಟ್ಟು ಜನ. ಹಾಡಿನ ಕೊನೆಗೆ ಮತ್ತೆಲ್ಲವೂ ಮೈದಳೆಯುತ್ತವೆ, ಹಸಿರು ಹಾಡಾಗುತ್ತದೆ. ತಾನು ಮಾಡುವುದು ವಿಭಿನ್ನವಾಗಿರಬೇಕು, ಜನರ ಎದೆಗೆ ತಟ್ಟುವಂತಿರಬೇಕು ಎಂಬುದು ಜಾಕ್ಸನ್ ನಿಲುವು. ಸಲಿಂಗಕಾಮ, ದಿವಾಳಿತನ, ಕೌಟುಂಬಿಕ ಸಮಸ್ಯೆಗಳು ಮೈತುಂಬ ಆವರಿಸಿಕೊಂಡಿದ್ದರೂ ಅವುಗಳನ್ನೆಲ್ಲ ಝಾಡಿಸಿ ಒದ್ದು ತನ್ನೊಳಗಿನ ಮಾನವೀಯತೆಗೆ, ಪರಿಸರ ಪ್ರೇಮಕ್ಕೆ, ಜನಾಂಗೀಯ ದ್ವೇಷದ ವಿರುದ್ಧದ ಒತ್ತಾಸೆಗೆ ಧ್ವನಿಯಾಗಿದ್ದ ಜಾಕ್ಸನ್.
ಪ್ರೇಮ, ಕಾಮ, ಮನರಂಜನೆಗೆ ಮಾತ್ರ ಸೀಮಿತವಾಗಿದ್ದ ಪಾಪ್ ಸಂಗೀತ ಲೋಕವನ್ನು ಸಾಮಾಜಿಕ ಸಮಸ್ಯೆಗಳಿಗೂ ಅನ್ವಯಿಸಿ ಗೆದ್ದದ್ದು ಜಾಕ್ಸನ್ ಸಾಧನೆ. ಗಣಿ ಕಾರ್ಮಿಕನೊಬ್ಬನ ೧೨ ಮಕ್ಕಳ ಭರ್ತಿ ಕುಟುಂಬದ ಜಾಕ್ಸನ್ ಕರಿಯ ಅಮೆರಿಕನ್ನರನ್ನು ದ್ವೇಷಿಸುವ ಅಮೆರಿಕದ ಮನೋಭಾವನೆಗೆ ಸಡ್ಡು ಹೊಡೆಯಲು ಬಿಳಿಯನಾದ. ಫುಡ್ ಟ್ಯಾಪಿಂಗ್ ನೃತ್ಯಗಳ ಮೂಲಕ ಹೊಸ ಲೋಕ ಸೃಷ್ಟಿಸಿದ. ಭಾರತದಿಂದಲೂ ಪ್ರೇರಣೆ ಪಡೆದಿದ್ದ ಜಾಕ್ಸನ್‌ನ ಹಲವು ಆಲ್ಬಮ್‌ಗಳಲ್ಲಿ ಭರತನಾಟ್ಯವನ್ನೂ ಬಳಸಿಕೊಂಡಿದ್ದು ಆತನ ಜಾಗತಿಕ ಪ್ರೇಮಕ್ಕೆ ಸಾಕ್ಷಿ. ಆತ ಗಂಡಸೋ, ಹೆಂಗಸೋ ಅಥವಾ ಮಂಗಳಮುಖಿಯೋ ಎನ್ನುವ ಪ್ರಶ್ನೆಗಳು ಎದ್ದಾಗ ಸಂಗೀತ ಪ್ರೇಮಿಗಳು ಹೇಳುತ್ತಿದ್ದ ಮಾತು ಒಂದೇ, ಅದನ್ನೇನು ಮಾಡ್ತೀರಾ ಸುಮ್ನೆ ಹಾಡು ಕೇಳಿ.
ಮಕ್ಕಳೆಂದರೆ ಭರ್ತಿ ಪ್ರೀತಿಯ ಜಾಕ್ಸನ್ ತನ್ನ ಬಹುತೇಕ ಹಾಡುಗಳಲ್ಲಿ ಮಕ್ಕಳಿಗೆ ಅಗ್ರ ಶ್ರೇಯಾಂಕ ನೀಡಿದ್ದಾನೆ. ಆತನ ಜೀವನ ಸಾಧನೆ ಬಿಂಬಿಸುವ ಆಲ್ಬಮ್ ಎಂದೆ ಖ್ಯಾತವಾದ ಹಿಸ್ಟರಿ (ಹಿಸ್-ಸ್ಟೋರಿ)ಯಲ್ಲೂ ಚಿಣ್ಣರಿಗೆ ಮಣೆ. ತನ್ನ ಮನೆ ಆವರಣದಲ್ಲಿ ಕರೆಗಟ್ಟಲೆ ಮನರಂಜನಾ ಉದ್ಯಾನವನ ನಿರ್ಮಿಸಿದ್ದ ಆತನ ಮನಸ್ಸೂ ಮಕ್ಕಳದ್ದೇ. ೨೦ ವರ್ಷಗಳ ಹಿಂದೆ ನೃತ್ಯ ಕಲಿಯುವ, ಕಲಿತ ಹಾಗೂ ನುರಿತ ನೃತ್ಯ ಪಟುಗಳಿಗೂ ಜಾಕ್ಸನ್ ರೋಲ್ ಮಾಡೆಲ್. ಹಾವಿನಂತೆ ಸರಸವಾಡುವ ಆತನ ಕಾಲುಗಳ ನರ್ತನ, ಆಂಗಿಕ ಭಾಷೆ, ಸಂಗೀತ ಹಾಗೂ ಗೀತೆಯ ಪದ ಜೋಡಣೆ ಎಂಥವರನ್ನೂ ಮೋಡಿ ಮಾಡಿತ್ತು. ನಾನು ಸ್ನೇಹಿತರೊಂದಿಗೆ ನೃತ್ಯ ಪ್ರದರ್ಶನಗಳಲ್ಲಿ ಭಾಗವಹಿಸುವ ಮುನ್ನ ದೇವರು ಹಾಗೂ ಜ್ಯಾಕ್ಸನ್‌ನನ್ನು ನೆನಪಿಸಿಕೊಂಡೇ ನೃತ್ಯಕ್ಕಿಳಿಯುತ್ತಿದ್ದೆವು. ದೊಡ್ಡ ನಗರಗಳಲ್ಲಿ ದೊರಕುತ್ತಿದ್ದ ಆತನ ಕ್ಯಾಸೆಟ್‌ಗಳನ್ನು ತಂದು ಹಾಡು ಕೇಳಿ, ಆಗೊಮ್ಮೆ ಈಗೊಮ್ಮೆ ದೂರದರ್ಶನದಲ್ಲಿ ಬರುತ್ತಿದ್ದ ಆತನ ನೃತ್ಯ ಕಾರ್ಯಕ್ರಮದ ಝಲಕ್ ನೋಡಿ ನೃತ್ಯ ಕಲಿತ ನನ್ನಂಥ ಕೋಟ್ಯಂತರ ಜನ ಜಗದಲ್ಲಿದ್ದಾರೆ.
ಜಾಕ್ಸನ್‌ನ ಮಾಯೆ ಬಾಲಿವುಡ್‌ನ್ನೂ ಬಿಟ್ಟಿಲ್ಲ. ಖ್ಯಾತ ನೃತ್ಯ ಪಟು ಪ್ರಭುದೇವ ತಮ್ಮ ಕಾದಲನ್ ಚಿತ್ರಕ್ಕೆ ಜಾಕ್ಸನ್‌ರನ್ನು ಕರೆತರಬೇಕೆಂದು ಬಯಸಿದ್ದರು. ಆದರೆ ಮೈಕೆಲ್‌ನ ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಹಿಂದಿ ಚಿತ್ರರಂಗದಲ್ಲಿ ನೃತ್ಯದ ಮೂಲಕ ಹೊಸ ಭಾಷೆ ಬರೆದ ಜಾವೇದ್ ಜಾಫ್ರಿ, ರವಿ ಬೆಹ್ಲ್, ಮಿಥುನ್ ಚಕ್ರವರ್ತಿ ಕೂಡ ಜಾಕ್ಸನ್ ಪ್ರೇರಣೆ ಪಡೆದವರು. ನೋಡಿ ಅವನು ಜಾಕ್ಸನ್ ಹಾಗೆ ನರ್ತಿಸುತ್ತಾನೆ ಎಂದು ಹೊಗಳಿಸಿಕೊಳ್ಳುವುದೂ ಕೂಡ ಆ ಕಾಲದ ಮಟ್ಟಿಗಿನ ಹೆಮ್ಮೆಯ ಮಾತು.
೧೦ ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದ ಜಾಕ್ಸನ್ ನೃತ್ಯ ಕಾರ್ಯಕ್ರಮಕ್ಕೆ ಭರ್ತಿ ೭೫ ಸಾವಿರ ಜನ ಬಂದಿದ್ದರು. ೨೦ ಸಾವಿರ ರೂ.ಬೆಲೆಯ ಟಿಕೆಟ್ ಖರೀದಿಸಿ ಅವರೆಲ್ಲ ಜಾಕ್ಸನ್ ಮೋಡಿಗೆ ಬೆರಗಾದರು, ಹಾಡಾದರು. ಕಾರ್ಯಕ್ರಮಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಜಾಕ್ಸನ್ ಹಾಡಿ, ನರ್ತಿಸಬೇಕಿರಲಿಲ್ಲ. ಕೇವಲ ಆತನ ಮುಖ, ನಗು, ಮಾತು ಇಷ್ಟೇ ಸಾಕಿತ್ತು ಅಭಿಮಾನಿಗಳಿಗೆ. ಜಗತ್ತಿನ ನಾನಾ ಥರಹದ ವಾದ್ಯಗಳು, ಕಲಾವಿದರು, ಸಂಗೀತವನ್ನು ಮೇಳೈಸಿ ಹೊಸ ಗಾನ ಹೊಸೆಯುತ್ತಿದ್ದ ಈ ಮಾಂತ್ರಿಕ. ಜು.೧೩ ರಿಂದ ಲೈವ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದ ಜಾಕ್ಸನ್ ಇಂದು ಬೆಳಗ್ಗೆ ಮರೆಯಾದ. ಟಿವಿಯಲ್ಲಿ ಆತನ ನಿಧನದ ಸುದ್ದಿ ನೋಡಿದ ಅಮ್ಮ ಹೇಳಿದ್ದು ಆತ ಮಕ್ಕಳೊಂದಿಗೆ ಡ್ಯಾನ್ಸ್ ಮಾಡುವ ಹಾಡು ಚೆನ್ನಾಗಿದೆಯಲ್ಲ ?. ಇಂಗ್ಲೀಷ್ ಹಾಡುಗಳ ಬಗ್ಗೆ ಮಾಹಿತಿಯಿರದ, ಕೇವಲ ಸಂಗೀತದಿಂದ ಹಾಡು ಅರ್ಥೈಸುವ ಅಮ್ಮನಿಗೂ ಜಾಕ್ಸನ್ ಇಷ್ಟವಾಗಿದ್ದನೆಂದರೆ ಆತನ ಜನಪ್ರಿಯತೆಗೆ ಮತ್ತೇನು ಉದಾಹರಣೆ ಬೇಕು ?
ಜಾಕ್ಸನ್ ನಿಶ್ಚಲವಾಗಿದ್ದಾನೆ, ಆದರೆ ಆತನ ಸಂಗೀತದ ನಾದ ಹೊಸ ಪೀಳಿಗೆಯಲ್ಲಿದೆ. ಇದೂ ತಲೆತಲಾಂತರದವರೆಗೆ ಮುನ್ನಡೆಯಲಿದೆ. ಆ ಮಹಾನ್ ಸಂಗೀತಕಾರನ ಶೋಧನೆ, ಗಾನ, ನೃತ್ಯ ಪ್ರಾಚ್ಯಶಿಲ್ಪಗಳಂತೆ ಅಮರವಾಗಲಿದೆ. ಅಂದ ಹಾಗೆ ಜಾಕ್ಸನ್ ನೃತ್ಯ ನೋಡುವ ಬಯಕೆ ದೇವರಿಗೂ ಇದ್ದೀತು. ಅದಕ್ಕೆ ೫೦ನೇ ವರ್ಷಕ್ಕೆ ಆತನನ್ನು ಕರೆಸಿಕೊಂಡಿದ್ದಾನೆ. ದೇವರೂ ಜಾಕ್ಸನ್ ಅಭಿಮಾನಿಯೆ ?.

Sunday, June 14, 2009

ಸಿನೆಮಾ ಥೇಟರ್ ಎಂಬ ಮಾಯಾವಿ !



ಮೈಲುದ್ದ ಕ್ಯೂನಲ್ಲಿ ಕಸರತ್ತು ಮಾಡಿ ಟಿಕೇಟ್ ಪಡೆದು ಸ್ನೇಹಿತರಿಗಾಗಿ ಕುರ್ಚಿ ಹಿಡಿಯಲು ಕರ್ಚೀಫ್ ಹಾಕಿ ಬರುತ್ತಿದ್ದ ಬೆವರು ಒರೆಸಿಕೊಳ್ಳುವಷ್ಟರಲ್ಲಿ ಚಿತ್ರಮಂದಿರ ತುಂಬಿ ತುಳುಕಲು ಪ್ರಾರಂಭ. ಆಹ್ ! ಅದೆಂಥ ಲೋಕ. ಮೊದಲ ಬಾರಿಗೆ ಸಿನೆಮಾ ಥೇಟರ್ ಎಂಬ ಮಾಯಾಲೋಕದೊಳಗೆ ಪ್ರವೇಶಿಸಿದ, ತಂದೆ ತಾಯಿ ಕೈ ಹಿಡಿದು ಕಣ್ಣು ಹೊಡೆಯುವ ಬಣ್ಣ, ಬಣ್ಣದ ಲೈಟುಗಳನ್ನು ನೋಡುತ್ತ ಕಾಲಿಡುವ ಚಿಣ್ಣರು, ನಮ್ಮಂತೆ ಶಾಲೆಯ ಪಿರಿಯಡ್ ತಪ್ಪಿಸಿ ಬಂದ ಸಹಪಾಠಿಗಳು, ಪಕ್ಕದ ಹೈಸ್ಕೂಲಿನ ಬೇರೆಯವರ ಗೆಳತಿಯರು, ಕಾಲೇಜು ಮೆಟ್ಟಿಲೇರಿ ಠೀವಿಯಿಂದ ಬಂದ ಸೀನಿಯರ್‌ಗಳು, ಫೆವಿಕಾಲ್ ಅಂಟಿಸಿದಂತೆ ಕೈ, ಮೈ, ಸೋಕಿಸಿಕೊಂಡು ಸೀಟು ಹುಡುಕುವ ನವದಂಪತಿ, ಸಂಸಾರದೊಂದಿಗೆ ಚಿತ್ರ ವೀಕ್ಷಣೆಗೆ ಬಂದವರು, ಪುರಾತನ ಕಾಲದಿಂದ ಚಿತ್ರ ವೀಕ್ಷಣೆ ಹವ್ಯಾಸವಾಗಿಸಿಕೊಂಡ ಹಿರಿಯರು....ಅದು ನಿಜಕ್ಕೂ ಮಾಯಾ ಲೋಕ ಅರ್ಥಾತ್ ಚಿತ್ರಮಂದಿರ.
ಎಲ್ಲರೂ ತಮ್ಮ ಕುರ್ಚಿಗಳನ್ನು ಭದ್ರಪಡಿಸಿಕೊಂಡು ಕುಳಿತುಕೊಳ್ಳುತ್ತಿದ್ದಂತೆ ಟ್ರಿಂಗ್ ಎಂಬ ಬೆಲ್ಲು. ಮಾತಿಗೆ ವಿರಾಮ, ಲೈಟುಗಳು ಕಣ್ಣು ಮುಚ್ಚಿದೊಡನೆ ಎಲ್ಲೆಡೆ ಕತ್ತಲೆ, ಮಾತಿಗೆ ವಿರಾಮ. ಬೃಹತ್ ಪರದೆಯ ಮೇಲೆ ಫಿಲ್ಮ್ ಡಿವಿಶನ್ ನಿರ್ಮಿಸಿದ ಗಾಂ, ಚಾಚಾ ನೆಹರೂರ ಸಾಕ್ಷ್ಯ ಚಿತ್ರ, ನಂತರ ವಿಕೋ ವಜ್ರದಂತಿ, ನಿರ್ಮಾ ಜಾಹೀರಾತು. ಬಿಡುಗಡೆ ಕಾಣಲಿರುವ ಚಿತ್ರಗಳ ಟ್ರೇಲರ್‌ಗಳು. ಚಿತ್ರ ಶುರುವಾಗುವ ಹೊತ್ತಿಗೆ ಹೊಸ ಲೋಕ ಸೃಷ್ಟಿಸಿದ ಅನುಭವ.
ಚಿತ್ರ ವೀಕ್ಷಣೆಯೆನ್ನುವುದನ್ನು ಅಕ್ಷರಶ: ಆಕರ್ಷಕವಾಗಿಸಿದ್ದು ಸಿನೆಮಾ ಥೇಟರ್‌ಗಳು. ಫ್ಯಾನ್ ಗಾಳಿಗೆ ಮುಖ ಸೋಕಿಸಿ ಚಿತ್ರ ವೀಕ್ಷಿಸಲು ಪ್ರಾರಂಭಿಸಿದರೆ ಹೊರಗಿನ ಲೋಕದ ಬಗ್ಗೆ ಡೋಂಟ್ ಕೇರ್. ವಿರಾಮದ ಸಮಯದಲ್ಲಿ ಮಿರ್ಚಿ ಭಜಿ (ಆಗ ಪಾಪ್ ಕಾರ್ನ್ ಇರಲಿಲ್ಲ), ವಡಾ ಪಾವ್, ಚಿಪ್ಸ್‌ಗಳ ಭರಾಟೆ. ಮತ್ತೆ ವಾಪಸ್ ಬಂದು ಕುಳಿತರೆ ಒಂದೂವರೆ ಗಂಟೆ ಭರ್ತಿ ಮನರಂಜನೆ. ಸಿನಿಮಾ ಥೇಟರ್ ಎಂಬ ಮಾಯಾವಿ ಆಗಿನಿಂದಲೂ ಈಗಿನವರೆಗೂ ಅದೇ ಆಕರ್ಷಣೆ ಉಳಿಸಿಕೊಂಡಿದೆ ಒಂದರ್ಥದಲ್ಲಿ ಇದು ಸದಾ ಸ್ವೀಟ್ ಸಿಕ್ಸ್‌ಟೀನ್.
ಐಮ್ಯಾಕ್ಸ್, ಮಲ್ಟಿಪ್ಲೆಕ್ಸ್, ೩ ಡಿ, ೬ ಡಿ, ಡಿಟಿಎಸ್, ಸ್ಯಾಟ್‌ಲೈಟ್ ಸ್ಕ್ರೀನಿಂಗ್ ಹೀಗೆ ಹೊಸ, ಹೊಸ ಅವಶೇಷಗಳು ಸೇರ್ಪಡೆಯಾಗಿದ್ದರೂ ಸಿನಿಮಾ ಥೇಟರ್ ನೀಡುವ ಮಜ ಸಾರ್ವಕಾಲಿಕ.
ಆಗೆಲ್ಲ ಸಿನಿಮಾ ಪೋಸ್ಟರ್‌ಗಳನ್ನೇ ನಂಬಿಕೊಂಡು ಸಿನಿಮಾ ನೋಡಬೇಕು, ಪರಿಚಿತ ತಾರೆಯರಿದ್ದರೆ ಸಿನಿಮಾ ವೀಕ್ಷಣೆಗೆ ಮನಸ್ಸು ಮಾಡಬೇಕು. ಇಲ್ಲವಾದರೆ ಇದು ಉತ್ತಮ ಚಿತ್ರ ಎಂಬ ಬಗ್ಗೆ ನೆರೆ, ಹೊರೆಯವರಿಂದ ಸರ್ಟಿಫಿಕೇಟ್ ದೊರೆತ ನಂತರವೇ ಚಿತ್ರ ವೀಕ್ಷಿಸಬೇಕು. ಈಗಿನಂತೆ ಆಗ ಟಿವಿಗಳಲ್ಲಿ ಟ್ರೇಲರ್‌ಗಳೂ, ತಾರೆಯರ ಆತ್ಮವಿಶ್ವಾಸದ ನುಡಿಗಳೂ, ಪ್ರೋಮೊಗಳೂ ಇರಲಿಲ್ಲ, ಪತ್ರಿಕೆಗಳಲ್ಲಿ ಬರುವ ವಿಮರ್ಶೆ, ಹಿಂದೊಮ್ಮೆ ಚಿತ್ರ ನೋಡಲು ತೆರಳಿದಾಗ ನೋಡಿದ ಟ್ರೇಲರ್‌ಗಳೇ ಚಿತ್ರ ವೀಕ್ಷಣೆಗೆ ಪೂರಕ ಪರಿಕರ. ಅಷ್ಟಕ್ಕೂ ಚಿತ್ರ ವೀಕ್ಷಣೆ ಎನ್ನುವುದು ಹವ್ಯಾಸದ ಪಟ್ಟಿಯಲ್ಲೂ ಇರಲಿಲ್ಲ. ಚಿತ್ರದಲ್ಲೂ ಆಂಗ್ರಿ ಯಂಗ್ ಮ್ಯಾನ್, ಸುಂದರ ನಟಿ, ಒಂದು ಕ್ಯಾಬರೆ, ನಾಲ್ಕು ಫೈಟ್, ಖಳನಾಯಕನ ವಿಕಟನಗೆ ಇದ್ದರಷ್ಟೇ ಅದು ಚಿತ್ರ ಎಂಬ ಭಾವನೆ. ಈಗ ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗಾಗಿ ಬೇರೆ ಚಿತ್ರ, ಯುವಜನತೆಗಾಗಿ ಪ್ರತ್ಯೇಕ ಚಿತ್ರ, ಚಿಣ್ಣರಿಗಾಗಿ ಮತ್ತೊಂದು ಚಿತ್ರ, ಕಲಾತ್ಮಕ ಜೀವಿಗಳಿಗಾಗಿ ಮಗದೊಂದು ಚಿತ್ರ ಎನ್ನುವ ವಿಭಾಗಗಳಿವೆ. ಈಗ ಚಿತ್ರ ನೋಡಲೇಬೇಕು ಎಂದಾದರೆ ಆಯ್ಕೆಗೆ ಇಂಟರ್‌ನೆಟ್, ಟಿವಿಯಂತಹ ಹಲವಾರು ಆಯ್ಕೆಗಳಿವೆ.
ಚಿತ್ರಮಂದಿರಗಳೂ ಈಗ ಅಕ್ಷರಶ: ಮಾರ್ಕೆಟಿಂಗ್ ತಜ್ಞರ ಕನಸಿನ ಕೂಸು. ಒಮ್ಮೆ ಕಾಲಿಟ್ಟರೆ ಫರ್ನಿಚರ್, ಬೈಕ್, ಕಾರ್‌ನಿಂದ ಹಿಡಿದು ಅಂಡರ್‌ವೇರ್‌ವರೆಗೆ ಎಲ್ಲವನ್ನೂ ಖರೀದಿಸಿ ನಂತರ ಅದೇ ಸೂರಿನಲ್ಲಿ ಸಿನಿಮಾ ನೋಡಿ ಬರುವ ಪದ್ಧತಿ. ಆಗ ಚಿತ್ರಮಂದಿರವೆಂದರೆ ಕೇವಲ ಸಿನಿಮಾ ವೀಕ್ಷಣೆಗೆ ಮಾತ್ರ ಮೀಸಲು ಎಂಬ ನಿಯಮ. ಆದರೆ ಬಹುತೇಕ ಬಿ, ಸಿ ಕೇಂದ್ರಗಳಲ್ಲಿ ಈಗಲೂ ಸಿನಿಮಾ ಥೇಟರ್ ಎಂಬುದು ಕಡ್ಡಾಯವಾಗಿ ಸಿನೆಮಾ ವೀಕ್ಷಣೆಗೆ ಮಾತ್ರ ಎನ್ನುವ ಸ್ಥಿತಿಯಿದೆ.
೧೫ ರೀಲುಗಳ ಬೃಹತ್ ಸಿನಿಮಾದ ಮಧ್ಯೆ ರೀಲು ಕಟ್ ಆಗುವುದು, ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ ಹೊಡೆದು ಚಿತ್ರ ಪ್ರಾರಂಭಿಸಿ ಎಂದು ನೀಡುತ್ತಿದ್ದ ಸಂದೇಶ ಈಗಿಲ್ಲ. ಕರೆಂಟು ಹೋದೊಡನೆ ಚಿತ್ರ ಮಂದಿರಗಳ ಲೈಟುಗಳು ಕಣ್ಣು ಬಿಡುತ್ತಿದ್ದವು. ಆಪರೇಟರ್ ರಿವೈಂಡ್ ಆದ ರೀಲು ಸರಿಪಡಿಸಿ ಮೊದಲಿದ್ದ ದೃಶ್ಯ ಹೊಂದಿಸುವಷ್ಟರ ವೇಳೆಗೆ ಪ್ರೇಕ್ಷಕರಿಗೆ ಅಲ್ಪ ವಿರಾಮ. ಸಿನಿಮಾ ಪ್ರಾರಂಭಕ್ಕೂ ಮುನ್ನ ಸ್ಟಿರಿಯೋಗಳಲ್ಲಿ ಕೇಳಿ ಬರುತ್ತಿದ್ದ ದೇವರ ನಾಮ, ವಿರಾಮದಲ್ಲಿ ತೋರಿಸಲಾಗುತ್ತಿದ್ದ ನಾನಾ ಸಂಸ್ಥೆಗಳ ಜಾಹೀರಾತು ಸ್ಲೈಡ್‌ಗಳು ಈಗ ಕಂಡುಬರುವುದಿಲ್ಲ. ಇಷ್ಟೆಲ್ಲ ಇಲ್ಲಗಳ ಮಧ್ಯೆಯೂ ಥೇಟರ್‌ಗಳು ಬದಲಾವಣೆ ಕಂಡಿವೆ. ಆದರೆ ಹರಿದ ಕುರ್ಚಿ, ಸೆಕೆಯಂತಹ ಕಷ್ಟಗಳು ಇನ್ನೂ ಇವೆ. ಕಾಲಕ್ಕೆ ತಕ್ಕಂತೆ ಚಿತ್ರಮಂದಿರಗಳು ಬದಲಾವಣೆ ಕಂಡರೂ ಸಿನೆಮಾ ಥೇಟರ್ ಎಂಬ ಮಾಯಾವಿ ಇನ್ನೂ ಚಿರಂಜೀವಿಯಾಗಿದೆ. ವಯಸ್ಸಾದ ದೇವಾನಂದ್‌ನ ಮುಖದ ನಗೆಯಂತೆ, ಅಜ್ಜಿಯಾದರೂ ಮಾಸದ ಹೇಮಾ ಮಾಲಿನಿ ಕೆನ್ನೆಯ ಗುಳಿಯಂತೆ ಚಿತ್ರಮಂದಿರವೆಂಬ ಮಾಯಾ ಕನ್ಯೆ ಈಗಲೂ ಹೊಸ ಲೋಕ, ಹೊಸ ಭಾವ, ಹೊಸತನದ ಸೃಷ್ಟಿ ಮುಂದುವರಿಸಿದ್ದಾಳೆ ! ಸಿನಿಮಾ ಮಂದಿರ ಎಂಬ ಈ ಮಾಯಾಲೋಕಕ್ಕೆ ಈಗಲೂ ನಾವೆಲ್ಲ ಬೆರಗಾಗುತ್ತಿರುವುದೇ ಖುಷಿಯ ಸಂಗತಿ, ಅಲ್ಲವೇ ?

Thursday, June 11, 2009

ಅನುರಾಗ್ ಮಾತನಾಡಲಿದ್ದಾರೆ...



ಪ್ರತಿ ಶುಕ್ರವಾರ ರಾತ್ರಿ ೧೦ ಗಂಟೆಗೆ ಫಾಕ್ಸ್ ಹಿಸ್ಟರಿ ಚಾನೆಲ್ ಚಾಲನೆಗೊಳಿಸಿ. ನೈಜ, ವಾಸ್ತವವಾದಿ ಚಿತ್ರಗಳ ನಿರ್ದೇಶ ಅನುರಾಗ್ ಕಶ್ಯಪ್ ಈ ಚಾನೆಲ್‌ನಲ್ಲಿ ಸಿನಿಮಾ ಕುರಿತಾದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಉತ್ತಮ ಚಿತ್ರಗಳು, ವಿಭಿನ್ನ ಚಿತ್ರಗಳು, ಕಲಾತ್ಮಕ ಚಿತ್ರಗಳು, ಕಮರ್ಶಿಯಲ್ ಚಿತ್ರಗಳು, ಪ್ರಸಿದ್ಧ ಸಿನಿಮಾಗಳು, ಮನತಟ್ಟಿದ ದೃಶ್ಯಗಳು ಹೀಗೆ ಸಿನಿಮಾ ಕುರಿತಾದ ತಮ್ಮ ನೆಚ್ಚಿನ ಕತೆ, ಕಲಾವಿದರು ಹಾಗೂ ಜನರ ಮೆಚ್ಚುಗೆ ಪಡೆದ ಸಿನಿಮಾಗಳ ಬಗ್ಗೆ ಅನುರಾಗ್ ಮಾತು ಹಂಚಿಕೊಳ್ಳಲಿದ್ದಾರೆ. ಜಾಗತಿಕ ಸಿನಿಮಾ ಬಗ್ಗೆ ಮಾಹಿತಿ ಪಡೆಯಲು ಈ ಕಾರ್ಯಕ್ರಮ ಕುತೂಹಲದ ಕಿಟಕಿ. ಒಬ್ಬ ಖ್ಯಾತ ನಿರ್ದೇಶಕನ ಮೂಲಕ ಸಿನಿಮಾ ಬಗ್ಗೆ ತಿಳಿದುಕೊಳ್ಳುವುದೂ ಕೂತುಹಲಕಾರಿ ಅಲ್ಲವೇ ?.

Tuesday, June 9, 2009

ನನ್ನ ಲೇಖನ ಓದಿ ಸಾಂಗತ್ಯದಲ್ಲಿ..


ಕನಸು ಕಾಣಲು ಹಣ ನೀಡಬೇಕಿಲ್ಲ, ಆದರೆ ಅದು ವಾಸ್ತವವಾಗಿರಬೇಕು. ಇದು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಶ್ಯಾಂ ಬೆನಗಲ್ ಅನಿಸಿಕೆ. ಅವರು ನಡೆದಿದ್ದೂ ಹಾಗೆ, 1970 ರಲ್ಲಿ ಚಿತ್ರ ನಿರ್ದೇಶಿಸುವುದಕ್ಕಿಂತಲೂ ಹಣ ಹೊಂದಿಸುವುದು ಕಷ್ಟದ ಮಾತಾಗಿತ್ತು. ಈ ಸಂದರ್ಭದಲ್ಲಿ ಶ್ಯಾಮ್ ಐಡಿಯಾ ಮಾಡಿದರು. ಗುಜರಾತ್‌ನ ಆಣಂದ್‌ನಲ್ಲಿ ನಡೆದ ಹಾಲು ಉದ್ಯಮದ ಅಭಿವೃದ್ಧಿ ಗಾಥೆಯನ್ನು ಸಿನಿಮಾ ಮಾಡುವ ಉದ್ದೇಶ ಅವರಿಗಿತ್ತು. ಆದರೆ ಹಣವಿರಲಿಲ್ಲ, ಅದಕ್ಕಾಗಿ ರಾಜ್ಯದ 5 ಲಕ್ಷ ಹಾಲು ಉತ್ಪಾದಕರಿಂದ ತಲಾ 2 ರೂ. ಸಂಗ್ರಹಿಸಿ ಮಂಥನ್ ಸಿನಿಮಾ ನಿರ್ದೇಶಿಸಿದರು. ಹಾಲು ಉತ್ಪಾದಕರು ಹಣ ನೀಡಿದ್ದಷ್ಟೇ ಅಲ್ಲ ಟ್ರಕ್, ಟ್ರ್ಯಾಕ್ಟರ್‌ಗಳಲ್ಲಿ ಬಂದು ಸಿನಿಮಾ ನೋಡಿದರು, ಪರಿಣಾಮ ಚಿತ್ರ ಹಿಟ್ ಆಯಿತು, ಪ್ರಶಸ್ತಿಯನ್ನೂ ತಂದುಕೊಟ್ಟಿತು.
ನಮ್ಮ ಸಾಂಗತ್ಯ ಬ್ಲಾಗ್ನಲ್ಲಿ ನಾನು ಬರೆದ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ...http://saangatya.wordpress.com/

Sunday, May 24, 2009

ಬೆತ್ತಲೆ -ಕತ್ತಲೆ-ಪ್ರೇಮ =ದೇವ್ ಡಿ



ಆತನಿಗೆ ಬೆತ್ತಲಾಗುವುದೆಂದರೆ ಖುಷಿ, ಆಕೆಗೆ ಅವನ ತೃಪ್ತಿಪಡಿಸಿದರೆ ಸಂತಸ. ಬೆತ್ತಲಾಗಿ ಎಲ್ಲವನ್ನೂ ಕಳಚಿ ಸತ್ಯಶೋಧನೆಗೆ ತೆರಳಿದ್ದು ಜ್ಞಾನಿಗಳು. ಆದರೆ ಆಧುನಿಕ ದೇವದಾಸನ ವೃತ್ತಿ, ಪ್ರವೃತ್ತಿ ಎಲ್ಲವೂ ಮದ್ಯ ಹಾಗೂ ಮದಿರೆ. ವಿದೇಶದಲ್ಲಿರುವ ದೇವ್ ಹಳ್ಳಿಗಾಡಿನ ಪಾರೊಳೊಂದಿಗೆ ಕಾಮ ಹಂಚಿಕೊಳ್ಳುತ್ತಾನೆ ಮೊಬೈಲ್‌ನಲ್ಲಿ. ನನಗೆ ನಿಂದೊಂದು ಬೆತ್ತಲೆ ಫೋಟೊ ಬೇಕು ಎಂದಾಗ ಸಖನ ಆಜ್ಞಾ ಪಾಲನೆಗೆ ಪಾರೋ ಮೊಬೈಲ್ ಎದುರು ಬೆತ್ತಲಾಗಿ ಫೋಟೊ ಕ್ಲಿಕ್ಕಿಸಿ, ನಗರದ ಲ್ಯಾಬ್‌ನಲ್ಲಿ ನಗ್ನ ಚಿತ್ರ ಸಂಸ್ಕೃರಿಸಿ ಇ-ಮೇಲ್‌ನಲ್ಲಿ ದೇಶ ದಾಟಿಸುತ್ತಾಳೆ.
ಊರಿಗೆ ಬಂದಿಳಿಯುವ ದೇವ್ ಸಂಬಂಕರ ಮದುವೆ ಸಮಾರಂಭಕ್ಕೂ ಮುನ್ನ ಪಾರೋಳೊಂದಿಗೆ ಸುಖದ ಮೊದಲ ಹಂತ ಪೂರೈಸುತ್ತಾನೆ. ಚರಮ ಹಂತಕ್ಕೆ ತಲುಪುವಾಗ ಅಪ್ಪ ಬಾಗಿಲು ಬಡಿಯುತ್ತಾನೆ. ಆಮೇಲೆ ಮುಂದುವರಿಸೋಣ ಎಂದ ದೇವ್ ಹೊರಗೆ ಬರುವಷ್ಟರಲ್ಲಿ ಇನ್ನೊಬ್ಬ ಬಿಚ್ಚು ಹುಡುಗಿ ದೇವ್ ದೇಹ ತಟ್ಟುತ್ತಾಳೆ. ಮೆನೆಗೆ ಬೇಕಾದ ಸಾಮಾನುಗಳನ್ನು ತೆರಳುವ ದೇವ್‌ನದ್ದು ಆಕೆಯೊಂದಿಗೆ ರಾಸಕ್ರೀಡೆ. ಅಷ್ಟರಲ್ಲೇ ಸೈಕಲ್ ಮೇಲೆ ಹಾಸಿಗೆ ಹೇರಿಕೊಂಡು ಹೋಗುವ ಪಾರೋಳದ್ದು ದೇವ್ ಮಿಲನಕ್ಕಾಗಿ ಹೊಲದಲ್ಲಿ ಹಪಾಹಪಿ. ಆದರೆ ಅಷ್ಟರಲ್ಲಾಗಲೇ ಕೆಲಸ ಪೂರೈಸಿದ ದೇವ್‌ನಿಗೆ ಪಾರೋ ಖುಷಿ ಪಡಿಸಲು ಸಾಧ್ಯವಾಗುವುದಿಲ್ಲ. ಬೇಸತ್ತ ಪಾರೋ ಹಾಸಿಗೆ ಹೊತ್ತು ಮನೆಗೆ ವಾಪಸ್.
ದೇವ್ ಬಗ್ಗೆ ಅದೇಕೋ ಸಂಶಯಗೊಂಡ ಪಾರೋ ಬಗ್ಗೆ ಮನೆಯವರು ಮದುವೆಗೆ ತಕರಾರು ಎತ್ತುತ್ತಾರೆ. ಆಧುನಿಕ ಯುಗದ ಹುಡುಗಿಗೂ ಸಂಪ್ರದಾಯಿಕ ಮನಸ್ಥಿತಿ. ಪಾರೋ ಬೇರೊಬ್ಬನ ಪಾಲಾಗುತ್ತಾಳೆ, ಅಂದರೆ ದೇವ್‌ನ ದೇಹ ತಟ್ಟಿದ ಹೆಣ್ಣಿನ ಸಹೋದರನೊಂದಿಗೆ ಆಕೆಯ ಮದುವೆ. ಸೀಸನ್ಡ್ ಕುಡುಕನಾಗಿದ್ದ ದೇವ್ ಮತ್ತೆ ಬಾಟಲಿಗಟ್ಟಲೆ ಮದ್ಯ ಹೊಟ್ಟೆಗಿಳಿಸುತ್ತಾನೆ. ಮದುವೆ ಸಮಾರಂಭದಲ್ಲೂ ಕುಡಿತಕ್ಕೆ ತೋಬಾ ತೇರಾ ಜಲ್ವಾ, ತೋಬಾ ತೇರಾ ಪ್ಯಾರ್, ಇಮೋಶನಲ್ ಅತ್ಯಾಚಾರ ಹಾಡಿನ ಹಿಮ್ಮೇಳ.
ಪಾರೋ ದಿಲ್ಲಿಗೆ ತೆರಳುವುದರೊಂದಿಗೆ ದೇವ್ ಕೂಡ ದಿಲ್ಲಿ ಪಾಲಾಗುತ್ತಾನೆ.
ಆಕೆ ಚಂದ್ರಮುಖಿ, ವಿದೇಶದಲ್ಲಿ ಬೆಳೆದು ಭಾರತದಲ್ಲಿ ಸಖನ ಹುಡುಕುವ ಶಾಲಾ ಸುಂದರಿ. ಆಕೆಯೊಂದಿಗೆ ಮಜಾ ಮಾಡುವ ಯುವಕನೊಬ್ಬ ಬೆತ್ತಲೆ ವಿಡಿಯೋ ತೆಗೆದು ಎಲ್ಲೆಡೆ ಹಂಚುತ್ತಾನೆ. ಪರಿಣಾಮ ವಿದೇಶಕ್ಕೆ ಚಂದ್ರಮುಖಿ ಪರಿವಾರ ವಾಪಸ್, ಅಪ್ಪನ ಆತ್ಮಹತ್ಯೆ. ಭಾರತಕ್ಕೆ ವಾಪಸ್ಸಾಗುವ ಚಂದ್ರಮುಖಿ ಬೇಕೆಂತಲೆ ವೇಶ್ಯಾವಾಟಿಕೆ ಪಾಲಾಗುತ್ತಾಳೆ, ಜತೆಗೆ ವಿದ್ಯಾಭ್ಯಾಸವೂ ನಡೆಯುತ್ತದೆ. ಚಂದ್ರಮುಖಿಯ ಕದ ತಟ್ಟುವ ದೇವ್ ಆಕೆಯ ಮಟ್ಟಿಗೆ ದೇವರು. ದಿನವಿಡೀ ಕುಡಿತ, ರಾತ್ರಿಯಿಡೀ ಚಂದ್ರಮುಖಿಯೊಂದಿಗೆ ಪರಿಣಯ. ಇಂತಿಪ್ಪ ದೇವ್ ಜೀವನದಲ್ಲಿ ಮತ್ತೊಮ್ಮೆ ಪಾರೋ ಆಗಮನ, ಆತನ ಕೋಣೆಗೆ ಭೇಟಿ ನೀಡುವ ಆಕೆ ದೇವ್‌ನನ್ನು ಬದಲಾಯಿಸಲು ಯತ್ನಿಸುತ್ತಾಳೆ. ಆದರೆ ದೇವ್ ಯಥಾ ಪ್ರಕಾರ ಆಕೆಗೆ ಹಾಸಿಗೆಗೆ ಕರೆಯುತ್ತಾನೆ. ಈತನಿಂದ ಬೇಸತ್ತ ಪಾರೋ ಮತ್ತೆ ವಾಪಸ್ಸಾಗುತ್ತಾಳೆ, ಇತ್ತ ದೇವ್ ಕೊನೆಗೆ ಚಂದ್ರಮುಖಿಯತ್ತ ಮುಖ ಮಾಡುತ್ತಾನೆ.
ಅನುರಾಗ್ ಕಶ್ಯಪ್ ನಿರ್ದೇಶನದ ಆಧುನಿಕ ದೇವ್-ಡಿ ಚಿತ್ರದಲ್ಲಿ ಸೆಕ್ಸ್ ಚಾಟ್‌ನಿಂದ ಹಿಡಿದು ವಿವಾಹೇತರ ಸಂಬಂಧಗಳ ಬಗ್ಗೆ ಸಚಿತ್ರ ವಿವರವಿದೆ. ಹಳೆಯ, ಪುರಾತನ ಪ್ರೀತಿಯ ಬದಲು ಕಾಮಕ್ಕಷ್ಟೇ ಪ್ರೇಮಿಸುವ, ಪ್ರೇಮಿಸಲೆಂದೆ ಕಾಮಿಸುವ ಕತೆಯಿದೆ. ಹಳೆಯ ಎರಡು ದೇವದಾಸ್‌ಗಳಿಗಿಂತಲೂ ಈ ದೇವದಾಸ್ ವರ್ಣರಂಜಿತವಾಗಿದೆ. ಬಾರ್‌ಗಳು, ನಗರ ಪ್ರದೇಶದ ದೃಶ್ಯಗಳು, ವಸ್ತ್ರ ವಿನ್ಯಾಸ ಹಾಗೂ ಸಂಭಾಷಣೆ ಎಲ್ಲದರಲ್ಲೂ ಅಪ್‌ಡೆಟೇಡ್ ಚಿತ್ರವಿದು. ಆಧುನಿಕ ಮನಸ್ಥಿತಿಗೆ ಕನ್ನಡಿ ಹಿಡಿಯುವ ಚಿತ್ರವಾಗಿರುವುದರಿಂದ ಜಸ್ಟ್ ಎಂಜಾಯ್ ಮನೋಭಾವದವರು ವೀಕ್ಷಿಸಬೇಕಾದ ಚಿತ್ರ.

Friday, May 22, 2009

ಜೋಜೋಗೆ ಅಭಿನಂದನೆ !

ನಮ್ಮೆಲ್ಲರ ನೆಚ್ಚಿನ ವೋಡಾಫೋನ್ ಜೋಜೋ ಈಗ ಸಂಭ್ರಮದಲ್ಲಿದ್ದಾನೆ, ಕಾರಣ ಪೆಟಾ ಸಂಸ್ಥೆ ನೀಡುವ ಪ್ರಾಣಿಪ್ರಿಯ ಜಾಹೀರಾತು ಜೋಜೋ ಪಾಲಾಗಿದೆ. ವೋಡಾಫೋನ್ ನಿರ್ಮಿಸಿರುವ ಹೊಸ ಜೋಜೋ ಜಾಹೀರಾತು ಸರಣಿಗೆ ಪ್ರಸಕ್ತ ಸಾಲಿನ ಪೆಟಾ ಪ್ರಶಸ್ತಿ ದೊರೆತಿದೆ. ಪ್ರಾಣಿಗಳನ್ನು ಹಿಂಸಿಸದೆ ಹಾಗೂ ಬಳಸದೆ ನಿರ್ಮಿಸುವ ಜಾಹೀರಾತುಗಳಿಗೆ ನೀಡುವ ಪ್ರಶಸ್ತಿಯಿದು.
ಅಂದ ಹಾಗೆ ಕಳೆದ ವರ್ಷ ವೋಡಾಫೋನ್ ಸಂಸ್ಥೆ ರೂಪಿಸಿದ್ದ ಹ್ಯಾಪಿ ಟು ಹೆಲ್ಪ್ ಜಾಹೀರಾತಿನಲ್ಲಿ ನಾಯಿಗೆ ಹಿಂಸೆ ನೀಡಲಾಗಿದೆ ಎಂದು ಆಗ ಪೆಟಾ ಸಂಸ್ಥೆ ಆರೋಪಿಸಿತ್ತು.
ಈ ಬಾರಿ ಅದೇ ವೋಡಾಫೋನ್ ಸಂಸ್ಥೆ ನಿರ್ಮಿಸಿರುವ ಜಾಹೀರಾತು ಸರಣಿ ಪ್ರಶಸ್ತಿಗೆ ಪಾತ್ರವಾಗಿದೆ. ಈ ಸಾಧನೆಗಾಗಿ ಜೋಜೋ, ಆತನ ವಾರಸುದಾರ ನಿರ್ವಾಣ ಸಂಸ್ಥೆಯ ನಿರ್ದೇಶಕ ಪ್ರಕಾಶ್ ಮೆಹ್ರಾ ಹಾಗೂ ಜೋಜೋ ಜನ್ಮಕ್ಕೆ ಕಾರಣರಾದ ಪ್ಲಾಟಿಪಸ್ ಸಂಸ್ಥೆಗೆ ಅಭಿನಂದನೆಗಳು. ಜೋಜೋನ ಸಾಧನೆ ಮುಂದುವರಿಯಲಿ, ಆತನ ಹಾಗೂ ವೀಕ್ಷಕರ ಮೊಗದಲ್ಲಿ ಸದಾ ನಗುವಿರಲಿ.

Tuesday, May 19, 2009

ಜೋಜೋ ಗೆ ಜೈ ಹೋ !







ಪುಟ್ಟ ಕೈಕಾಲುಗಳು, ದೊಡ್ಡ ತಲೆ, ಅತ್ತಿಂದಿತ್ತ ಓಡಾಡುತ್ತ ಮಕ್ಕಳಂತೆ ಕಾಣುವ ವೇಷಧಾರಿಗಳು. ಐಪಿಎಲ್ ಪಂದ್ಯಾವಳಿ ಸಂದರ್ಭದಲ್ಲಿ ವೋಡಾಫೋನ್ ರೂಪಿಸಿರುವ ಜೋಜೋ ಪಾತ್ರಧಾರಿಗಳು ಈಗ ಎಲ್ಲರ ಅಚ್ಚುಮೆಚ್ಚು. ಓ ಮೊದಲು ನಾಯಿಗಳನ್ನು ಬಳಸಿ ತನ್ನ ಜಾಹೀರಾತಿನ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದ ವೋಡಾಫೊನ್ ಈಗ ಪುಟಾಣಿ ಪಾತ್ರಗಳ ಮೂಲಕ ಮಕ್ಕಳು, ಯುವಕರು ಹಾಗೂ ಹಿರಿಯರ ಮನ ಗೆದ್ದಿದೆ.
ಜೋಜೋ ಈ ಹೆಸರಿನ ಈ ಜಾಹೀರಾತು ಸರಣಿಯಲ್ಲಿ ಪುಟ್ಟ ಪಾತ್ರಧಾರಿಯ ಕಾಲು ಮುರಿದಿದ್ದು, ಕಿಟಲೆ ಮಾಡಿದ್ದು, ಮೇಲ್ ಬಾಕ್ಸ್ ಬೆನ್ನು ಹತ್ತಿರುವ, ಕಾರ್ ರೀಚಾರ್ಜ್ ಮಾಡುವ ದೃಶ್ಯಗಳು ಮತ್ತೊಮ್ಮೆ ನೋಡಬೇಕೆನಿಸುತ್ತವೆ. ಈ ಜಾಹೀರಾತುಗಳಿಗೆ ಜನ್ಮ ನೀಡಿದ್ದು ನಿರ್ವಾಣ ಸಂಸ್ಥೆ. ಕಳೆದ ವರ್ಷ ವೋಡಾಫೋನ್ನ ಹ್ಯಾಪಿ ಟು ಹೆಲ್ಪ್ ಜಾಹೀರಾತು ಸರಣಿ ರೂಪಿಸಿದ್ದ ಸಂಸ್ಥೆ ಈ ಬಾರಿ ವಿಭಿನ್ನ ಜಾಹೀರಾತು ಮಾಡಬೇಕೆಂದು ಹೊರಟಾಗ ಚಿಂತನೆ ನಡೆದಿದ್ದು ಕಾರ್ಟೂನ್ ಪಾತ್ರಧಾರಿಗಳ ಬಗ್ಗೆ. ಆದರೆ ಈಗಾಗಲೇ ಅಂತಹ ಹಲವಾರು ಜಾಹೀರಾತುಗಳು ಪ್ರದರ್ಶನಗೊಂಡಿರುವುದರಿಂದ ಮನುಷ್ಯರನ್ನೇ ಬಳಸಿ ಹೊಸ ಪಾತ್ರ ಸೃಷ್ಟಿಸುವ ಉತ್ಸಾಹ ತಂಡದಲ್ಲಿತ್ತು.
ಅದಕ್ಕಾಗಿ ಮೃದು ಉಣ್ಣೆಯ ಮನುಷ್ಯನ ಮೇಲ್ಕವಚ ನಿರ್ಮಿಸಿ, ತಲೆಯ ಭಾಗಕ್ಕೆ ಪರ್ಫೆಕ್ಸ್ ಎನ್ನುವ ವಸ್ತು ಬಳಸಲಾಯಿತು. ಮೃದು ದೇಹ, ದೊಡ್ಡ ತಲೆ, ಮಕ್ಕಳಂತೆ ನಡೆಯುವ ಪಾತ್ರಧಾರಿಗಳಿಂದಾಗಿ ಜೋಜೋ ಈಗ ಎಲ್ಲೆಡೆ ಜನಪ್ರಿಯ.
ಸಂಸ್ಥೆಯ ನಿರ್ದೇಶಕ ಪ್ರಕಾಶ್ ವರ್ಮಾ ಈ ಜಾಹೀರಾತು ರೂಪಿಸುವುದಕ್ಕಾಗಿ ಭರ್ತಿ ೩ ತಿಂಗಳು ಹೋಮ್ ವರ್ಕ್ ಮಾಡಿದ್ದಾರೆ. ಪಾತ್ರಧಾರಿಗಳಾಗಿ ಮಕ್ಕಳು, ಯುವತಿಯರು ಹಾಗೂ ಪುರುಷರು ಅಭಿನಯಿಸಿದ್ದಾರೆ. ಆದರೆ ಇಲ್ಲೊಂದು ವಿಶೇಷವಿದೆ, ಪಾತ್ರಧಾರಿಗಳು ಮಕ್ಕಳಂತೆ ಕಾಣಬೇಕು ಹಾಗೂ ಜಾಹೀರಾತು ಆಕರ್ಷಕವಾಗಿಸಬೇಕೆಂಬ ದೃಷ್ಟಿಯಿಂದ ತಕ್ಕಮಟ್ಟಿಗೆ ಆನಿಮೇಶನ್ ತಂತ್ರಜ್ಞಾನ ಬಳಸಲಾಗಿದೆ. ಹೈ ಸ್ಪೀಡ್ ಕ್ಯಾಮೆರಾದಲ್ಲಿ ಚಿತ್ರೀಕರಣ ನಡೆಸಿ ಪಾತ್ರಧಾರಿಗಳ ನಡಿಗೆಯನ್ನು ವಿಭಿನ್ನವಾಗಿ ತೋರಿಸಿದ್ದು ಜಾಹೀರಾತಿನ ಹೆಗ್ಗಳಿಕೆ.
ಪ್ರೇಕ್ಷಕರ ಮನಸ್ಸು ಬೇರೆಡೆ ಆಕರ್ಷಿತವಾಗದಂತೆ ಹಿನ್ನೆಲೆಯಾಗಿ ಬೂದಿ ಬಣ್ಣ ಬಳಸಿದ್ದರೆ, ಪಾತ್ರಧಾರಿಗಳದ್ದು ಶ್ವೇತ ವಸ್ತ್ರ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ನ ಪ್ಲಾಟಿಪಸ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಸಿದ್ದು , ಜೋಜೋ ಜನಪ್ರಿಯತೆ ಪ್ರತಿ ದಿನ ಹೆಚ್ಚಾಗುತ್ತಿದೆ. ಐಪಿಎಲ್ಗಿಂತಲೂ ಹೆಚ್ಚು ಹಾಟ್ ಫೇವರಿಟ್ ಆಗಿರುವುದು ಜೋಜೋ ಜನಪ್ರಿಯತೆಗೆ ಸಾಕ್ಷಿ.

Saturday, May 9, 2009

ಹಂ ಸಾಥ್ ಸಾಥ್ ಹೈ


ಅವ ಸುಬೋಧ್ ಕೊಲ್ಕತ್ತಾದ ಖ್ಯಾತ ಫುಟ್ಬಾಲ್ ತಂಡ ಮೋಹನ್ ಬಗಾನ್ನ ತರಬೇತುದಾರ. ಪಂದ್ಯದ ಸಂದರ್ಭದಲ್ಲಿ ಹೊಡೆದಾಟ ನಡೆದು ಕ್ರೀಡಾಂಗಣಕ್ಕೆ ಪ್ರೇಕ್ಷಕರು ಬೆಂಕಿ ಹಚ್ಚುತ್ತಾರೆ, ಆತ ಮನೆಗೆ ಮರಳುತ್ತಾನೆ. ರಾಮಾನುಜನ್ ಹಿಂದಿ ಭಾಷೆ ಪ್ರಚಾರಕ. ನೆಲೆಸಿರುವುದು ತಮಿಳುನಾಡಿನ ಚೆನ್ನೈನಲ್ಲಿ. ಹಿಂದಿ ಭಾಷೆ ಪ್ರತಿಭಟನಾಕಾರರು ಆತನ ಮನೆ ಎದುರು ಹಿಂದಿ ಭಾಷೆ ವಿರೋಸಿ ಪ್ರತಿಕೃತಿ ದಹಿಸುತ್ತಾರೆ. ಮಗನ ಕೈಲಿದ್ದ ಹಿಂದಿ ಪುಸ್ತಕ ಕಿತ್ತೆಸೆಯುವ ಆತ , ಹಿಂದಿ ಭಾಷೆಯಲ್ಲಿದ್ದ ನೇಮ್ ಪ್ಲೇಟ್ ಕೂಡ ಕಿತ್ತು ಹಾಕುತ್ತಾನೆ. ಮಹಾರಾಷ್ಟ್ರದ ರತ್ನಾಗಿರಿಯಲ್ಲಿರುವ ತುಕಾರಾಮ್ ಝಾಲಾಚಾ ಪಾಯಿಜೆ ಚಳವಳಿ ನೇತಾರ. ಬೆಳಗಾವಿ ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಹೋರಾಟದ ನೇತೃತ್ವ ಈತನದ್ದು. ಉತ್ತರ ಪ್ರದೇಶದ ಅನ್ವರ್ ಉರ್ದು ಪಂಡಿತ. ಉರ್ದು ಭಾಷೆ ವಿರೋಸಿದ ಕೆಲವರು ಆತನ ಮನೆಗೆ ಕೊಳ್ಳಿಯಿಡುತ್ತಾರೆ, ಮನೆ ಭಸ್ಮವಾಗುತ್ತದೆ.
ಪಂಜಾಬ್ನಲ್ಲಿರುವ ಉತ್ಪಲ್ ಮನೆಗೆ ಬಂದಾಗ ರೆಡಿಯೋದಲ್ಲಿ ಪಂಜಾಬ್ ವಿಭಜನೆಯ ಸುದ್ದಿ ಕೇಳುತ್ತಾನೆ, ಕ್ಷಣ ಕಾಲ ಅರನಾಗುತ್ತಾನೆ. ಬನಾರಸ್ನ ಶರ್ಮಾ ಸಂಸ್ಕೃತ ಪಂಡಿತ, ಬಿಹಾರದ ಮತ್ತೊಬ್ಬ ಯುವಕ ಕೃಷಿಕ. ಇವರೆಲ್ಲರಿಗೂ ಒಂದು ಟೆಲಿಗ್ರಾಂ ಬರುತ್ತದೆ ಗೋವಾದ ಮರಿಯಾ ಫರ್ನಾಂಡಿಸ್ಳಿಂದ...ನಾನು ಮರಣ ಶಯ್ಯೆಯಲ್ಲಿದ್ದೇನೆ, ಎಲ್ಲಿದ್ದರೂ ಬೇಗ ಬನ್ನಿ.
ನೆನಪಿನ ರೀಲು ೬ ವರ್ಷಗಳ ಹಿಂದಿನ ಫ್ಲ್ಯಾಶ್ಬ್ಯಾಕ್ಗೆ ಬಿಚ್ಚಿಕೊಳ್ಳುತ್ತದೆ....
ಅದು ಬೆಳಗಾವಿ, ಪೋರ್ಚುಗೀಸರ ವಶದಲ್ಲಿರುವ ಗೋವಾ ವಿಮೋಚನೆ ಹೋರಾಟಕ್ಕೆ ರಂಗಭೂಮಿ. ಎಲ್ಲೆಡೆಯಿಂದ ಅಲ್ಲಿ ಆಗಮಿಸುವ ಈ ಆರು ಯುವಕರು ಹೋರಾಟಕ್ಕಾಗಿ ಗೋವಾಕ್ಕೆ ತೆರಳುತ್ತಾರೆ. ಅಲ್ಲಿ ಅವರಿಗೆ ಮಾರ್ಗದರ್ಶಿ, ಸಾಥಿಯಾಗುವುದು ಮರಿಯಾ ಫರ್ನಾಂಡಿಸ್. ಪೋರ್ಚುಗೀಸರ ಕ್ರೌರ್ಯ ಮರಿಯಾಳ ತಂದೆ, ತಾಯಿ, ಸಹೋದರ ಹಾಗೂ ಆಕೆಯ ಶೀಲ ಕಿತ್ತುಕೊಂಡಿರುತ್ತದೆ. ಅದಕ್ಕಾಗಿ ಗೋವಾ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವುದು ಅವಳ ಹೆಬ್ಬಯಕೆ. ಈ ಆರು ಯುವಕರೊಂದಿಗೆ ಆಕೆಯೂ ಸೇರಿ ಮುನ್ನಡೆಯುವ ಗುಂಪಿನ ಹೆಸರು `ಸಾತ್ ಹಿಂದುಸ್ತಾನಿ`.
ಈ ತಂಡ ಮದ್ದು, ಗುಂಡಿನೊಂದಿಗೆ ಹೋರಾಟ ನಡೆಸುವುದಿಲ್ಲ. ಪೋರ್ಚುಗೀಸರ ಅಕಾರ ಕೇಂದ್ರಗಳ ಮೇಲೆ ಭಾರತ ಧ್ವಜ ಹಾರಿಸಿ ಸ್ವಾತಂತ್ರ್ಯಕ್ಕೆ ಪ್ರೇರೆಪಿಸುವುದು ತಂಡದ ಮುಖ್ಯ ಅಜೆಂಡಾ. ಹೀಗೆ ದೇಶದ ಹೆಸರಿನಲ್ಲಿ ಒಂದಾಗುವ ತಂಡ ಅಸ್ಪ್ರಶ್ಯತೆ, ಜಾತಿವಾದ, ಧರ್ಮಗಳ ನಡುವಿನ ಭಿನ್ನತೆಯನ್ನೂ ಕಾಣುತ್ತದೆ. ಅದೆಲ್ಲವನ್ನೂ ಮೆಟ್ಟಿ ನಿಂತು ಗೋವಾದ ನಾನಾ ಕಡೆ ಗುಪ್ತವಾಗಿ ಭಾರತ ಧ್ವಜ ಹಾರಿಸುತ್ತದೆ. ಈ ತಂಡದ ಜನಪ್ರಿಯತೆ ಹೆಚ್ಚಿದಂತೆ ಪೋರ್ಚುಗೀಸರು ಇವರಿಗಾಗಿ ತಡಕಾಡುತ್ತಾರೆ.
ಜೀವ ಕಳೆದುಕೊಂಡ ಊರುಗಳು, ಪೋರ್ಚುಗೀಸರ ಒದೆ ತಿಂದ ಜನರ ಮುಖಗಳು, ಅಪರಿಚಿತರು ಬಂದರೆ ಹೆದರಿ ಹೋಗುವ ಅವಸ್ಥೆ ಹೀಗೆ ಆಗಿನ ಗೋವಾದ ಚಿತ್ರಣ ಚಿತ್ರದಲ್ಲಿ ಮಧ್ಯೆ, ಮಧ್ಯೆ ಹಾಯ್ದು ಹೋಗುತ್ತದೆ. ಅದೊಂದು ದಿನ ಊಟ ತರಲು ಹೋದ ತುಕಾರಾಮ್ ಗೋವಾ ಫೆನ್ನಿ ಸವಿಯುತ್ತಾನೆ. ಅಮಲಿನಲ್ಲಿ ತನ್ನ ಚಪ್ಪಲಿ ಮರೆತು ಬರುತ್ತಾನೆ, ಪೊಲೀಸರು ಹುಡುಕಾಟ ಪ್ರಾರಂಭಿಸುತ್ತಾರೆ. ಉಳಿದವರನ್ನೆಲ್ಲ ದಡ ಸೇರಿಸುವ ಅನ್ವರ್ ಮಾತ್ರ ಬಂತನಾಗುತ್ತಾನೆ.
ಮಾರಿಯಾಳ ಜನ್ಮದಿನದಂದು ಉಡುಗೊರೆಯಾಗಿ ಪಣಜಿಯ ವೃತ್ತದಲ್ಲಿ ದೇಶ ಧ್ವಜ ಹಾರಿಸಲು ಉಳಿದ ಐವರು ಪಣ ತೊಡುತ್ತಾರೆ. ಧ್ವಜ ಹಾರಿಸುತ್ತಾರೆ, ಆದರೆ ಬಂತರಾಗುತ್ತಾರೆ. ಅಷ್ಟೂ ಜನರನ್ನು ಹಿಂಸಿಸಿ ಬಾಯಿ ಬಿಡಿಸಲು ಪೊಲೀಸರು ಹರ ಸಾಹಸ ಪಡುತ್ತಾರೆ. ಆದರೆ ದೇಶಭಕ್ತಿ ರಹಸ್ಯ ಹೊರಡಿಸುವುದಿಲ್ಲ. ಕೊನೆಗೆ ಐವರೂ ಬಿಡುಗಡೆಯಾಗುತ್ತಾರೆ, ಆಗ ಮರಿಯಾಳಿಗೆ ಜೈಲು ಶಿಕ್ಷೆಯಾದ ಬಗ್ಗೆ ಮಾಹಿತಿ ದೊರೆಯುತ್ತದೆ. ನಂತರ ತಮ್ಮ ಊರಿಗೆ ವಾಪಸ್ಸಾಗುತ್ತಾರೆ. ಕೊನೆಯ ದೃಶ್ಯದಲ್ಲಿ ಮರಿಯಾ ಭೇಟಿಗೆ ಎಲ್ಲರೂ ಹೊರಟು ಬರುತ್ತಾರೆ, ಆದರೆ ಅಷ್ಟರಲ್ಲಿ ಮರಿಯಾ ಹೊರಟು ಹೋಗುತ್ತಾಳೆ, ಶಾಶ್ವತವಾಗಿ ಜೀವನದಿಂದ.
ಖ್ವಾಜಾ ಅಹ್ಮದ್ ಅಬ್ಬಾಸ್ ಚಿತ್ರದ ನಿರ್ದೇಶಕರು, ಟಿ.ಪಿ.ಕೌಶಿಕ್ ಸಂಗೀತವಿದೆ, ಖ್ಯಾತ ಸಾಹಿತಿ ಕೈಫಿ ಆಜ್ಮಿ ಸಾಹಿತ್ಯ ರಚಿಸಿದ್ದಾರೆ. ಜಲಾಲ್ ಆಗಾ, ಎ.ಕೆ.ಹಾನಗಲ್, ಉತ್ಪಲ್ ದತ್ ರಂತಹ ಪ್ರತಿಭಾವಂತರು ನಟಿಸಿದ್ದಾರೆ. ೧೯೬೯ರಲ್ಲಿ ಬಿಡುಗಡೆಯಾದ ಈ ಚಿತ್ರ ೧೯೭೦ರಲ್ಲಿ ನರ್ಗಿಸ್ ದತ್ ಪ್ರಶಸ್ತಿ ಪಡೆದಿದೆ. ಅಮಿತಾಬ್ ಈ ಚಿತ್ರದಿಂದ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಉತ್ತಮ ನಟ ಪ್ರಶಸ್ತಿಯೂ ಅವರದ್ದಾಯಿತು. ಈ ಚಿತ್ರ ಬೆಳಗಾವಿಯಲ್ಲೂ ಚಿತ್ರೀಕರಣಗೊಂಡಿದ್ದು, ದೂದ್ ಸಾಗರ್ ಜಲಪಾತದ ಕಣಿವೆಯಲ್ಲೂ ಚಿತ್ರೀಕರಣ ನಡೆಸಿರುವುದು ವಿಶೇಷ. ಚಿತ್ರದ ಸಿಡಿ ಟಿ-ಸೀರೀಸ್ನಲ್ಲಿ ಲಭ್ಯ.

Friday, April 17, 2009

ಮಧು, ಮಧುರ ಚಿತ್ರ ಟ್ರಾಫಿಕ್ ಸಿಗ್ನಲ್



ನೋಡಿ, ನಿಲ್ಲಿ, ಹೊರಡಿ...ಇದು ಬೃಹತ್ ನಗರಗಳ ಆಯಕಟ್ಟಿನ ಸ್ಥಾನಗಳಲ್ಲಿರುವ ಸಿಗ್ನಲ್ಗಳು ನಮಗೆ ಕಲಿಸುವ ಪಾಠ. ಮಧುರ್ ಬಂಡಾರಕರ್ರ ಟ್ರಾಫಿಕ್ ಸಿಗ್ನಲ್ ಚಿತ್ರ ಕೂಡ ಈ ಚಿಂತನೆಯನ್ನು ವಿಸ್ತಾರವಾಗಿಸುತ್ತದೆ. ಕೆಂಪು, ಹಳದಿ, ಹಸಿರು ಬಣ್ಣಗಳು ಸಿಗ್ನಲ್ನ ಪ್ರತಿಬಿಂಬ. ಕೆಂಪು ಎಚ್ಚರಿಕೆಯ ಸಂಕೇತ, ಹಳದಿ ಕಾಮದ ದರ್ಶನವಾದರೆ, ಹಸಿರು ಸಮೃದ್ಧತೆ ಸಾರುತ್ತದೆ.
ಹಾಗೆ ನೋಡಿದರೆ ಮಧುರ್ ಈ ಚಿತ್ರದ ಮೂಲಕ ಮೂರು ಬಣ್ಣಗಳ, ವೈವಿಧ್ಯತೆ ಹಾಗೂ ಜೀವನ ಪ್ರೀತಿಯನ್ನು ಸಂಕೇತಗಳ ಮೂಲಕ ನಿರೂಪಿಸುತ್ತಾರೆ. ಟ್ರಾಫಿಕ್ ಸಿಗ್ನಲ್ ಹಿಂದಿರುವ ಜೀವಗಳ ವೇದನೆ, ಜೀವನ್ಮುಖಿ ಪ್ರೀತಿ ಹಾಗೂ ಸಂತೋಷವನ್ನು ಚಿತ್ರದ ಪಾತ್ರಗಳ ಮೂಲಕ ಕಟ್ಟಿ ಕೊಡುತ್ತಾರೆ.
ಮಧುರ್ ಚಿತ್ರಗಳಲ್ಲಿರುವ ವಿಶೇಷತೆ ಪಾತ್ರಧಾರಿಗಳದ್ದು. ಉಳಿದೆಲ್ಲ ಚಿತ್ರಗಳಲ್ಲಿ ಪಾತ್ರ ಪೋಷಣೆ ಕೇವಲ ೧೦ ರಿಂದ ೧೫ ಪಾತ್ರಧಾರಿಗಳಿಗೆ ಸೀಮಿತ. ಆದರೆ ಬಂಢಾರಕರ್ ಚಿತ್ರಗಳಲ್ಲಿ ಪಾತ್ರಧಾರಿಗಳ ಸಂಖ್ಯೆ ೨೦ ರಿಂದ ೨೫. ಇದಕ್ಕೆ ಕಾರಣ ಮಧುರ್ ಜೀವನವನ್ನು ನೋಡುವ ಬಗೆ. ಜೀವನದ ಬಗೆಗಿರುವ ಪ್ರೀತಿ ಕಾಣಬೇಕೆಂದರೆ ಅದು ಜನಸಾಮಾನ್ಯರಲ್ಲಿ ಮಾತ್ರ ಸಾಧ್ಯ. ಏಕೆಂದರೆ ಅವರು ಭಾರಿ ಹಣ, ಪ್ರತಿಷ್ಠೆ ಬಯಸುವವರಲ್ಲ. ಅಲ್ಪ ತೃಪ್ತರು.
ಟ್ರಾಫಿಕ್ ಸಿಗ್ನಲ್ ಚಿತ್ರದಲ್ಲೂ ಕೂಡ ಮಧುರ್ ಈ ತಂತ್ರ ಬಳಸಿದ್ದಾರೆ. ನಾಯಕ ಸಿಲ್ಸಿಲಾ (ಅವರಪ್ಪನೂ ಸಿನಿಮಾ ಪ್ರೇಮಿ, ಸಿಲ್ಸಿಲಾ ಚಿತ್ರದ ಬಿಡುಗಡೆಯಾದಾಗ ನಾಯಕ ಹುಟ್ಟಿದ್ದರಿಂದ ಆತನ ಹೆಸರು ಹೀಗಿದೆ) ಟ್ರಾಫಿಕ್ ಸಿಗ್ನಲ್ ಪ್ರದೇಶದ ನಾಯಕ. ಢೋಂಗಿ ಭಿಕ್ಷುಕ, ಚಿಂದಿ ಆಯುವ ಹುಡುಗ ಚಿಂದಿ ಚೋರ್, ರಸ್ತೆ ಬದಿಯ ವೇಶ್ಯೆ, ಟೀ ಅಂಗಡಿಯವ, ಸಿಗ್ನಲ್ಗಳಲ್ಲಿ ಪ್ರತಿ ದಿನ ಸಂಚರಿಸುವ ಮೇಲ್ಮಧ್ಯಮ ವರ್ಗದ ಅತೃಪ್ತ ಆತ್ಮಗಳು, ಬೀದಿ ಬದಿಯ ಚಿತ್ರ ಕಲಾವಿದ, ಉಗುಳುವ ಮೂಲಕ ಸ್ಟ್ರಾಬೆರಿ ಹಣ್ಣುಗಳಿಗೆ ಮಿಂಚು ಬರಿಸುವ ಮಾರಾಟಗಾರ, ಯಾರದ್ದೋ ಮಗುವನ್ನು ತಂದು ಭಿಕ್ಷೆ ಬೇಡುವವರು, ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು, ರಾಜಕಾರಣಿ, ಪೊಲೀಸರು....ಈ ಚಿತ್ರದ ತುಂಬ ಪಾತ್ರಧಾರಿಗಳದ್ದೇ ಜಾತ್ರೆ.
ಅಂದ ಹಾಗೆ ಚಿತ್ರದ ಪ್ರತಿ ಪಾತ್ರಧಾರಿಯೂ ವಿಶಿಷ್ಟ, ಪಾತ್ರಧಾರಿಗಳ ನಡವಳಿಕೆ, ಆಸೆ, ತೆವಲು, ಮರೀಚಿಕೆ, ಪ್ರೀತಿ, ಪ್ರೇಮ ಭಿನ್ನ, ಭಿನ್ನ. ಈ ಚಿತ್ರಕ್ಕಾಗಿ ಮಧುರ್ ಮುಂಬೈನ ಸ್ಟುಡಿಯೋವೊಂದರಲ್ಲಿ ಒಂದೂವರೆ ಕಿ.ಮೀ.ಉದ್ದದ ಬೃಹತ್ ನಗರದ ಸೆಟ್ ಹಾಕಿಸಿದ್ದರು. ಸತತ ಆರೂವರೆ ತಿಂಗಳವರೆಗೆ ಚಿತ್ರೀಕರಣ ನಡೆಸಿದ್ದರು. ಅದಕ್ಕೂ ಮೊದಲು ಟ್ರಾಫಿಕ್ ಸಿಗ್ನಲ್ ಸುತ್ತಲಿನ ಜಗತ್ತನ್ನು ಸ್ವತ: ಕಂಡು ಚಿತ್ರಕತೆ ಬರೆದಿದ್ದರು.
ಚಿತ್ರ ಸಿಗ್ನಲ್ ಸುತ್ತ ಕೇಂದ್ರೀಕೃತವಾಗಿದ್ದರೂ ಹಲವು ಸಮಸ್ಯೆ ಅನಾವರಣಗೊಳಿಸುತ್ತದೆ. ಇಡೀ ಟ್ರಾಫಿಕ್ ಸಿಗ್ನಲ್ ತೆಕ್ಕೆಗೆ ತೆಗೆದುಕೊಂಡಿರುವ ಮಾಫಿಯಾ, ಅಲ್ಲಿ ಓವರ್ ಬ್ರಿಜ್ ನಿರ್ಮಿಸಿ ಲಾಭ ಗಳಿಸುವ ದಂಧೆಕೋರರ ಹಪಾಹಪಿತನ, ಕಾಮದ ಮದೋನ್ಮತ್ತತೆ, ಹಸಿವು, ಅನಾಥ ಪ್ರಜ್ಞೆ ಹಾಗೂ ಪ್ರೀತಿ ಏಕಕಾಲಕ್ಕೆ ಪ್ರೇಕ್ಷಕರೆದುರು ಪ್ರತ್ಯಕ್ಷವಾಗುತ್ತವೆ. ಒಂದರ್ಥದಲ್ಲಿ ಚಿತ್ರ ಡಾಂಕ್ಯುಮೆಂಟರಿಯಾಗಬಹುದಾದ ಎಲ್ಲ ಸಾಧ್ಯತೆಯನ್ನು ತಮ್ಮ ಜೀವಂತಿಕೆ ನಿರ್ದೇಶನದಿಂದ ತಪ್ಪಿಸಿದ್ದಾರೆ ನಿರ್ದೇಶಕ.
ನಾಯಕ ಸಿಲ್ ಸಿಲಾ ಹಾಗೂ ಆತನ ಒಡನಾಡಿಗಳು ಎದುರಿಸುವ ಸಮಸ್ಯೆಗಳಿಗೆ ಚಿತ್ರದ ಕೊನೆಯಲ್ಲಿ ಪರಿಹಾರವನ್ನೂ ನೀಡುತ್ತಾರೆ. ಕಾರ್ನಲ್ಲಿ ಸಂಚರಿಸುವ ಮೇಲಮಧ್ಯಮ ವರ್ಗದ ಯುವತಿ ಇಟ್ಟುಕೊಂಡವನೊಂದಿಗೆ ಹೇಳುವ ಸಂಭಾಷಣೆ ನಿನಗೆ ಯಾವುದರಲ್ಲೂ ಸ್ಥಿರತೆಯಿಲ್ಲ. ಇದು ಕಾಮದ ಅತೃಪ್ತಿಗೆ ಕಾರಣವಾಗುತ್ತದೆ. ಪ್ರತಿ ದಿನ ಕಸ ಆರಿಸುವ ಚಿಂದಿ ಚೋರ್ ಸುನಾಮಿಯಲ್ಲಿ ಕಳೆದು ಹೋದ ತಂದೆಗಾಗಿ ಹಾಗೂ ಪರಿಹಾರಕ್ಕಾಗಿ ಕೂಡಿಟ್ಟ ಹಣದಲ್ಲಿ ಪರಿಹಾರ ಕೇಂದ್ರಕ್ಕೆ ಫೋನಾಯಿಸುವ ಅನಿವಾರ್ಯತೆ ಅಸಹಾಯಕತೆ ಬಿಂಬಿಸುತ್ತದೆ. ತಾನೊಬ್ಬ ಐಟಿ ಎಂಜಿನಿಯರ್ ಹಣ ಪಿಕ್ ಪಾಕೆಟ್ ಆಯಿತು ಎಂದು ಜನರಿಂದ ಹಣ ಪೀಕಿಸುವ ಮೋಸಗಾರ ಮೋಸಕ್ಕೊಳಗಾದವನಿಗೆ ಮತ್ತೆ ಭೇಟಿಯಾಗುವುದು ದುರಂತದ ಛಾಯೆಗೆ ಕಾರಣವಾಗುತ್ತದೆ. ಅವಕಾಶವಾದಿಗಳ ಮಧ್ಯೆ ಜೀವನಪ್ರೀತಿಯನ್ನಿಟ್ಟುಕೊಂಡ, ಆಶಾವಾದಿಗಳ ಚಿತ್ರವಿದು. ಸಿಗ್ನಲ್ ಚೌಕಟ್ಟಿನಲ್ಲಿ ಕೆಂಪು, ಹಳದಿ ಹಾಗೂ ಹಸಿರು ಬಣ್ಣಗಳನ್ನು ಗಾಢವಾಗಿ ಬಳಸಿದ್ದಾರೆ ಮಧುರ್. ಸಿಗ್ನಲ್ನಲ್ಲಿ ಎಲ್ಲರೂ ನಿಲ್ಲಲೇಬೇಕು, ಆದರೆ ಜನರಿಗೆ ಬೇಗ ಹೋಗುವ ಧಾವಂತ. ಬಹುಶ: ನಗರದ ಅಷ್ಟೂ ಜನರು ನನಗೆ ಒಂದಿಲ್ಲೊಂದು ದಿನ ಸಿಗ್ನಲ್ನಲ್ಲಿ ಕಂಡಿದ್ದಾರೆ ಎಂದು ನಾಯಕ ಚಿತ್ರದ ಮೊದಲು ಹೇಳುವ ಮಾತು ಚಿತ್ರಕ್ಕೂ ಅನ್ವಯವಾಗುತ್ತದೆ. ಇಂತಹದೊಂದು ಅದ್ಭುತ ಚಿತ್ರ ನಿರ್ಮಾಣವಾಗಿದ್ದರೂ ವಿದೇಶಿ ವಿಮರ್ಶಕರಿಗೆ, ಪ್ರಶಸ್ತಿ ನೀಡುವವರಿಗೆ ಈ ಚಿತ್ರ ಅಪ್ಯಾಯಮಾನವಾಗಿ ಕಂಡಿಲ್ಲ ಎಂಬುದು ವಿಷಾದ. ಆದರೆ ಮಧುರ್ ನಿರ್ದೇಶನ, ಸಂಗೀತ, ಚಿತ್ರಕತೆ, ಪಾತ್ರ ಪೋಷಣೆ ಮಾತ್ರ ಮಧು, ಮಧುರ.

Wednesday, March 25, 2009

ಮತ್ಸ್ಯ ಕನ್ಯೆಯ ಮಾಯಾ ಜಾಲ-ಶೀ ಕ್ರೀಚರ್



ಮತ್ಸ ಕನ್ಯೆಯ ಬಗ್ಗೆ ವಿಶ್ವದಲ್ಲಿ ಅದೇನೋ ಮೋಹ. ನಮ್ಮ ಪುರಾಣ ಕತೆಗಳಲ್ಲೂ ಮತ್ಸ್ಯ ಕನ್ಯೆಯರು ಕಾಣಿಸಿಕೊಂಡ ಉದಾಹರಣೆಗಳಿವೆ. ಅಜ್ಜ, ಅಜ್ಜಿಯರು ಹೇಳುತ್ತಿದ್ದ ಕತೆಗಳಲ್ಲೂ ಸುಂದರ ಮತ್ಸ್ಯ ಕನ್ಯೆಯರ ವರ್ಣನೆಯಿದೆ. ಆದರೆ ಮತ್ಸ್ಯ ಕನ್ಯೆಯರು ವಿಷ ಕನ್ಯೆಯರೂ ಆಗಬಲ್ಲರು, ಕೊಲೆಗಡುಕರೂ ಆಗಿರಬಹುದು ಎಂಬ ಭಾವನೆಗಳಿಗೆ ಇಂಬು ನೀಡುವ ಚಿತ್ರ ಶಿ ಕ್ರೀಚರ್.
ಎರಡು ಶತಮಾನಗಳ ಹಿಂದಿನ ಕತೆಯ ಈ ಚಿತ್ರ ನಿರ್ಮಾಣವಾಗಿದ್ದು ೨೦೦೧ರಲ್ಲಿ. ಜಾತ್ರೆಗಳಲ್ಲಿ ಮತ್ಸ್ಯಕನ್ಯೆ ತೋರಿಸುವ, ವಿಚಿತ್ರ ಅಂಗಗಳನ್ನು ಹೊಂದಿರುವ ಮಹಿಳೆಯರ ಪ್ರದರ್ಶನವನ್ನು ನಾವು ಕಂಡಿರುತ್ತೇವೆ. ಅಂತಹದ್ದೇ ಪ್ರದರ್ಶನಗಳನ್ನು ನಡೆಸುವ ಒಂದು ತಂಡದ ಸುತ್ತ ಕತೆ ಸುತ್ತುತ್ತದೆ. ಜಾಂಬಿ ಎನ್ನುವ ಆಫ್ರಿಕಾದ ದೆವ್ವ ಹಾಗೂ ಹಾಡುವ ಮತ್ಸ್ಯ ಕನ್ಯೆ ತೋರಿಸುತ್ತೇನೆ ಎನ್ನುವ ನಾಯಕ ಢೋಂಗಿ ಪ್ರದರ್ಶನ ನಡೆಸಿ ಹಣ ಗಳಿಸುತ್ತಾನೆ. ಜಾಂಬಿ ಎಂಬ ದೆವ್ವಕ್ಕೆ ಆಫ್ರಿಕಾದ ವ್ಯಕ್ತಿ ಪಾತ್ರಧಾರಿ, ಇನ್ನು ಮತ್ಸ್ಯಕನ್ಯೆಯೋ ಸಾಮಾನ್ಯ ಹುಡುಗಿ. ವೇದಿಕೆ ಹಿಂಭಾಗದಲ್ಲಿ ಗ್ರಾಮಾಫೋನ್ ನುಡಿಸಿ ಮತ್ಸ್ಯಕನ್ಯೆಯ ಗಾನ ಪ್ರದರ್ಶನ.
ಇಂತಿಪ್ಪ ಪ್ರದರ್ಶನಗಳು ನಡೆದ ನಂತರ ಒಂದು ದಿನ ವೃದ್ಧನೊಬ್ಬ ಮತ್ಸ್ಯ ಕನ್ಯೆಯನ್ನು ಕಾಣಲು ಟೆಂಟ್ಗೆ ಬರುತ್ತಾನೆ. ಮತ್ಸ್ಯ ಕನ್ಯೆ ಕಂಡು ಆತನ ಕಣ್ಣಲ್ಲಿ ಧಾರಾಕಾರ ನೀರು. ಮತ್ಸ್ಯಕನ್ಯೆ ಕಂಡು ಇವನ್ಯಾಕಪ್ಪಾ ಅಳೋದು ಎಂದುಕೊಂಡ ನಾಯಕ ಆ ವೃದ್ಧನನ್ನು ಮನೆಗೆ ಕಳಿಸಲು ತೆರಳುತ್ತಾನೆ ನಕಲಿ ಮತ್ಸ್ಯಕನ್ಯೆ ಅಂದರೆ ನಾಯಕಿಯೊಂದಿಗೆ. ಆದರೆ ಆ ವೃದ್ಧ ಇವರಿಗೆ ಅಸಲಿ ಮತ್ಸ್ಯ ಕನ್ಯೆ ತೋರಿಸಿದಾಗ ಇಬ್ಬರೂ ದಂಗು ಬಡಿಯುತ್ತಾರೆ.
ಆ ಮತ್ಸ್ಯ ಕನ್ಯೆ ಕೊಲೆಗಡುಕಿ, ಅದಕ್ಕೆ ಆಕೆಯನ್ನು ಬಂಸಿಟ್ಟಿದ್ದೇನೆ ಎಂಬ ಸಮಜಾಯಿಷಿ ವೃದ್ಧನದ್ದು. ಹೇಗಾದರೂ ಮಾಡಿ ಈ ಮತ್ಸ್ಯಕನ್ಯೆ ಹೊತ್ತೊಯ್ದರೆ ಹೇರಳ ಹಣ ಗಳಿಸಬೇಕೆಂಬುದು ನಾಯಕನ ದುರಾಸೆ. ಜಾಂಬಿ ದೆವ್ವದ ವೇಷಧಾರಿ ಹಾಗೂ ನಾಯಕ ವೃದ್ಧನಿಗೆ ಗೊತ್ತಾಗದಂತೆ ಮತ್ಸ್ಯಕನ್ಯೆಯ ಅಪಹರಣಕ್ಕೆ ಮುಂದಾಗುತ್ತಾರೆ. ಆಗ ವೃದ್ಧ ಆಕಸ್ಮಿಕವಾಗಿ ಸಾವನ್ನಪ್ಪುತ್ತಾನೆ. ಮತ್ಸ್ಯ ಕನ್ಯೆಯನ್ನು ಹಡಗಿನಲ್ಲಿ ಹೇರಿಕೊಂಡು ಹೊರಡುವಾಗ ಆಕೆಯ ಸಂಕಟ, ತಪನೆಗಳೆಲ್ಲವೂ ನಾಯಕಿ ಕಣ್ಣಿಗೆ ಎದುರಾಗುತ್ತವೆ. ಈ ಮತ್ಸ್ಯ ಕನ್ಯೆಯ ರಹಸ್ಯ ಚಿತ್ರದ ಉತ್ತರಾರ್ಧದಲ್ಲಿ ತೆರೆದುಕೊಳ್ಳುತ್ತದೆ.
ಮೆರ್ ಮೇಡ್ ಕ್ರೋನಿಕಲ್ಸ್ ಎಂಬ ಸರಣಿ ಚಿತ್ರಗಳ ಮೊದಲ ಚಿತ್ರವಿದು. ಐರ್ಲೆಂಡ್ ಪ್ರದೇಶದ ಕತೆ ಹಂದರದ ಚಿತ್ರದ ನಿರ್ದೇಶಕ ಸೆಬಾಸ್ಟಿಯನ್ ಗುಟ್ರೆಜ್. ನಾಯಕ ರಫೆಲ್ ಸೆವೆಲ್, ನಾಯಕಿ ಕಾರ್ಲಾ ಗುಗಿನೋ, ಮತ್ಸ್ಯಕನ್ಯೆಯಾಗಿದ್ದು ರಾಯಾ ಖಿಲ್ಸೆಸ್ಡ್. ಕುತೂಹಲಕಾರಿ ಚಿತ್ರಗಳ ಖ್ಯಾತ ನಿರ್ಮಾಪಕ ಸ್ಯಾಮುಯೆಲ್ ಅರ್ಕಾಫ್ಗೆ ಈ ಚಿತ್ರ ಅರ್ಪಿಸಲಾಗಿದೆ. ಮತ್ಸ್ಯಕನ್ಯೆಯ ಬಗ್ಗೆ ಆಸಕ್ತಿ ಇದ್ದವರೆಲ್ಲ ನೋಡಬಹುದು.

Friday, March 20, 2009

ಸತ್ತಾ ...



ಅಣ್ಣಾ ನಾ ಸಂಡಾಸಿಗೆ ಹೋಗ್ತೀನಿ, ಈ ಹೆಣ್ಣು ಮಗಳ ಮಾತಿನಲ್ಲಿ ದಮ್ ಇಲ್ಲ...ಹೀಗೆ ಸತ್ತಾ ಚಿತ್ರದ ಉತ್ತರಾರ್ಧದಲ್ಲಿ ಚುನಾವಣೆ ಪ್ರಚಾರದ ಭಾಷಣ ಕೇಳುವ ಮತದಾರನೊಬ್ಬ ಹೇಳುತ್ತಾನೆ. ಆತ ಹೇಳುವ ಮಾತು ಚಿತ್ರದ ನಾಯಕಿ ಅರುಂಧತಿ ಬಗ್ಗೆ. ಸಚಿವ ಅಜಯ್ ಚವ್ಹಾಣನ ಸೊಸೆ ಅರುಂಧತಿ ಆಗಷ್ಟೇ ಚುನಾವಣೆ ಪ್ರಚಾರ ಭಾಷಣ ಮಾಡುತ್ತಿದ್ದಾಳೆ. ಆಕೆಯ ಗಂಡ ವಿವೇಕ್ ಜೈಲಿನಲ್ಲಿದ್ದಾನೆ, ಕಾರಣ ಬಾರ್ನಲ್ಲಿ ಅಪರಾತ್ರಿ ಮದ್ಯ ನೀಡದಿರುವ ಕಾರಣಕ್ಕೆ ಯುವತಿಯನ್ನು ಕೊಂದಿದ್ದು.
ಮುಂದಿನ ದೃಶ್ಯದಲ್ಲಿ ಅರುಂಧತಿಯ ವಿರೋ ಅಭ್ಯರ್ಥಿಧೋತ್ರೆ ಭಾಷಣದಲ್ಲಿ ಹೇಳುತ್ತಾನೆ, ಆಕೆಯಿನ್ನೂ ಹೊಸಬಳು, ಅದಕ್ಕೂ ಹೆಚ್ಚಾಗಿ ಹೆಂಗಸು. ಮಹಿಳೆಯರಿಗೇನು ರಾಜಕೀಯ ಜ್ಞಾನವಿರುತ್ತದೆ, ನನಗೆ ಮತ ಹಾಕಿ, ಮುಂದೆ ಅಭಿವೃದ್ಧಿ ನೋಡಿ. ಅಲ್ಲೇ ಪ್ರಚಾರಕ್ಕೆ ಹೋಗುತ್ತಿದ್ದ ಅರುಂಧತಿ ಮೈಕ್ ಕಸಿದುಕೊಂಡು ಹೇಳುತ್ತಾಳೆ, ನಾನು ಸ್ತ್ರೀ ಎಂದು ಹೀಯಾಳಿಸಬೇಡಿ. ಜನರ ಸಮಸ್ಯೆಗಳ ಬಗ್ಗೆ ನಂಗೊತ್ತು, ಮಹಿಳೆಯರಿಗೆ ಮನೆಯೂ ಗೊತ್ತು, ರಾಜಕೀಯವೂ ಗೊತ್ತು. ಆಗ ಕೈಯಲ್ಲಿ ಬಕೆಟ್ ಹಿಡಿದ ಅದೇ ವ್ಯಕ್ತಿ ಹೇಳುತ್ತಾನೆ ಅಣ್ಣಾ ಈಗ ಧೋತ್ರೆ ಸಂಡಾಸಿಗೆ ಹೋಗ್ತಾನೆ.
ಖ್ಯಾತ ನಿರ್ದೇಶಕ ಮಧುರ್ ಬಂಢಾರಕರ್ ತಮ್ಮ ಚಿತ್ರದಲ್ಲಿ ಮಹಿಳೆಯರಿಗಾಗುವ ದೌರ್ಜನ್ಯ ಹಾಗೂ ಅದನ್ನು ಮಹಿಳೆ ಮೆಟ್ಟಿ ನಿಲ್ಲುವ ಬಗೆ ತೋರಿಸುವುದು ಹೀಗೆ. ಸತ್ತಾ ಅವರ ಎರಡನೇ ಚಿತ್ರ, ನಾಯಕಿ ರವೀನಾ ಟಂಡನ್. ಮೇಲ್ಮಧ್ಯಮ ವರ್ಗದ ಯುವತಿ ಹೇಗೆ ಅಕಾರ ಶಾಹಿ ರಾಜಕಾರಣಕ್ಕಿಳಿದು ಗೆಲ್ಲುತ್ತಾಳೆ ಎಂಬುದನ್ನು ಅವರು ಕಣ್ಣಿಗೆ ಕಟ್ಟುವಂತೆ ತೋರಿಸುತ್ತಾರೆ ಎನ್ನುವುದಕ್ಕೆ ಮೇಲಿನ ಎರಡು ದೃಶ್ಯಗಳು ಸಾಕ್ಷಿ. ಮಧುರ್ ಚಿತ್ರಗಳಲ್ಲಿ ಹೇರಳ ಪಾತ್ರಧಾರಿಗಳಿರುತ್ತಾರೆ, ಅದಕ್ಕೆ ಕಾರಣ ಚಿತ್ರ ಕತೆಯ ವ್ಯಾಪ್ತಿ.
ಸತ್ತಾ ಚಿತ್ರದ ನಾಯಕಿ ಅರುಂಧತಿ ರಾಜಕಾರಣಿ ವಿವೇಕ್ ಚವ್ಹಾಣ್ನನ್ನು ಪ್ರೇಮಿಸಿ ಮದುವೆಯಾಗುತ್ತಾಳೆ. ಮದುವೆಯಾದ ನಂತರ ಆತನ ಬಣ್ಣ ಬಯಲಾಗತೊಡಗುತ್ತದೆ. ಅಕಾರಕ್ಕಾಗಿ ಆತನ ಹಪಾಹಪಿ, ಬೆಲೆವೆಣ್ಣುಗಳ ಸಹವಾಸ, ಗೂಂಡಾಗಳ ಸ್ನೇಹ ಹೀಗೆ. ಮನೆಯಲ್ಲೂ ಅಷ್ಟೇ ಸೊಸೆ ತುಟಿ ಪುಟಕ್ಕೆನ್ನುವಂತಿಲ್ಲ, ಆಕೆ ಪತಿಯ ಶಯ್ಯಾ ಗೃಹದ ಕೋಣೆಗಷ್ಟೇ ಸೀಮಿತ. ಆದರೆ ಅನಿವಾರ್ಯ ಕಾರಣವೊಂದರಲ್ಲಿ ಚುನಾವಣೆಗೆ ರ್ಸ್ಪಸುವ ಅರುಂಧತಿ ಶಾಸಕಿಯಾಗುತ್ತಾಳೆ, ಆಗ ಪಕ್ಷದ ನಾಯಕ ಯಶವಂತ್ನೊಂದಿಗೆ ಪ್ರೇಮ, ಕಾಮದಾಟ ನಡೆಯುತ್ತದೆ. ಜೈಲಿನಲ್ಲಿರುವ ವಿವೇಕ್ ಹೆಂಡತಿಯಿದ್ದರೂ ಬೆಲೆವೆಣ್ಣುಗಳೊಂದಿಗೆ ಮೌಲ್ಯಯುತ ಸಂಬಂಧ ಹೊಂದಿರುತ್ತಾನೆ. ಇತ್ತ ಮಾವ ಮತ್ತೊಬ್ಬ ಹೆಂಗಸಿನ ಸಹವಾಸದಲ್ಲೂ ಇರುತ್ತಾನೆ. ಪುರುಷ ಮಾಡಿದ್ದೆಲ್ಲ ಸರಿ, ಆದರೆ ಮಹಿಳೆ ಪುರುಷನ ಥರ ಜೀವಿಸಿದರೆ ತಪ್ಪು ಎನ್ನುವ ಮನೋಭಾವನೆಯನ್ನು ಈ ಎಲ್ಲ ಪಾತ್ರಗಳ ಮೂಲಕ ಬಡಿದೆಬ್ಬಿಸುತ್ತಾರೆ ಮಧುರ್.
ಕೊನೆಗೆ ಈ ಎಲ್ಲ ಸಮಸ್ಯೆಗಳ ಮಧ್ಯೆಯೂ ಅರುಂಧತಿ ಹೇಗೆ ತನ್ನ ಅಸ್ತಿತ್ವ ನಿರ್ಮಿಸಿಕೊಳ್ಳುತ್ತಾಳೆ ಎಂಬುದು ಚಿತ್ರದ ತಿರುಳು. ಉತ್ತಮ ಸಂಗೀತ, ಸಂಭಾಷಣೆ, ಛಾಯಾಗ್ರಹಣದೊಂದಿಗೆ ಮಧುರ್ ಸ್ಪೆಷಲ್ ಎಫೆಕ್ಟ್ ಚಿತ್ರದಲ್ಲಿ ಎದ್ದು ಕಾಣುತ್ತದೆ, ಒಮ್ಮೆ ನೋಡಬಹುದಾದ ಚಿತ್ರ.


Wednesday, February 25, 2009

ಬಾದಾಮಿಯಲ್ಲಿ `ನಾನಾ'ವತಾರ



ನಾನಾ ಪಾಟೇಕರ್ ಹಿಂದಿ ಚಿತ್ರರಂಗದ ವಿಲಕ್ಷಣ, ಪ್ರತಿಭಾವಂತ ನಟ. ನಾನಾ ಮಾಧ್ಯಮಗಳಿಂದ ದೂರವಿದ್ದರೂ ಸುದ್ದಿಯಾಗುತ್ತಾರೆ. ಹೆಚ್ಚು ಮಾತನಾಡುವುದಿಲ್ಲ, ಕೆಲಸಕ್ಕಷ್ಟೇ ಮಹತ್ವ. ಅಂಕುಶ್, ಪ್ರಹಾರ್, ಯಶವಂತ್, ಅಗ್ನಿ ಸಾಕ್ಷಿಯಂತಹ ಗಂಭೀರ ಚಿತ್ರಗಳೊಂದಿಗೆ ವೆಲ್‌ಕಮ್‌ನಂತಹ ಹಾಸ್ಯ ಭರಿತ ಚಿತ್ರಗಳ ಮೂಲಕವೂ ಜನರಿಗೆ ಚಿರಪರಿಚಿತ ಈ ನಟ.
ಗಿದ್‌ನಂತಹ ಕಲಾತ್ಮಕ ಚಿತ್ರದಲ್ಲಿ ತಲೆಹಿಡುಕ, ಕ್ರಾಂತಿವೀರ್‌ನಲ್ಲಿ ಕ್ರಾಂತಿಕಾರಿ ಯುವಕ, ಯಶವಂತ್‌ನಲ್ಲಿ ಪೊಲೀಸ್ ಅಕಾರಿ ಪಾತ್ರದೊಂದಿಗೆ ಅಗ ಅಂಬಾ ಬಾಯಿ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದು ಈ ನಾನಾ. ಗಣೇಶ ಚತುರ್ಥಿಯಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸದೆ ಮನೆಯಲ್ಲಿದ್ದುಕೊಂಡು ಗಣೇಶನ ಆರಾಧನೆ ನಡೆಸುವ ಈ ನಟನಿಗೆ ಕಂಟ್ರಿ ಸಾರಾಯಿ ಅಂದ್ರೆ ಪಂಚ ಪ್ರಾಣ. ರಾಷ್ಟ್ರೀಯ ಮಟ್ಟದ ಶೂಟಿಂಗ್‌ನಲ್ಲಿ ಚಿನ್ನದ ಪದಕ ಪಡೆದ, ಹೊಸತನಕ್ಕೆ ತುಡಿಯುವ ಈ ನಟನ ಕಂಡರೆ ನನಗೇಕೋ ಭಾಳ ಪ್ರೀತಿ. ಇಂತಿಪ್ಪ ನಾನಾ ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಗೆ ಬಂದಾಗ ಸಂದರ್ಶನ ನಡೆಸಲು ಪ್ರಯತ್ನಿಸಿದ್ದೆ. ಆದರೆ ಮಾಧ್ಯಮದವರಿಂದ ಒಂದಡಿ ದೂರ ಉಳಿಯುವ ನಾನಾರಿಂದಾಗಿ ಪ್ರಯತ್ನ ವಿಫಲವಾಗಿತ್ತು.
ಆದರೆ ೨೦೦೬ರಲ್ಲಿ ನಾನಾ ಬಾದಾಮಿಯಲ್ಲಿ ರಾಣಾ ತೆಲಗು ಹಾಗೂ ತಮಿಳು ಚಿತ್ರದ ಶೂಟಿಂಗ್‌ಗೆ ಬಂದಿದ್ದರು. ಅಂತಹ ಅವಕಾಶ ಬಿಡಲು ಹೇಗೆ ಸಾಧ್ಯ ?. ಮರು ದಿನವೆ ಬಾದಾಮಿಯಲ್ಲಿದ್ದೆ, ನೆಚ್ಚಿನ ನಟನ ಸಂದರ್ಶನ ನಡೆಸಲು. ಗುಹಾಂತರ ದೇವಾಲಯದಲ್ಲಿ ನಾನಾ ನಟಿ ಕಾಜೋಲ್ ಅಗರವಾಲ್ ಜತೆ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ಬಿಡುವಿನ ಸಮಯದಲ್ಲಿ ಆಟೋಗ್ರಾಫ್ ಕೇಳಲು ಬಂದ ಇಬ್ಬರನ್ನು ದಬಾಯಿಸಿದರು. ಅಷ್ಟರಲ್ಲೇ ಯುನಿಟ್‌ನ ಹುಡುಗರು ನೀವು ಈಗ ಸಂದರ್ಶನಕ್ಕೆ ಹೋದರೆ ಅವರು ಹತ್ತಿರಕ್ಕೆ ಕರೆಯುವುದಿಲ್ಲ ಸ್ವಲ್ಪ ತಡೆಯಿರಿ, ಅವರ ಮೂಡ್ ಕೆಟ್ಟರೆ ಪ್ಯಾಕಪ್ ಮಾಡಬೇಕಾಗುತ್ತದೆ ಎಂದು ಹೆದರಿಸಿದರು.
ನಾನಾ ಸಂದರ್ಶನ ಪಡೆಯಲೇಬೇಕು ಎಂದು ಪಣ ತೊಟ್ಟಿದ್ದ ನಾನು ಅಲ್ಲಿದ್ದ ವಾತಾಪಿ ಗಣಪತಿಗೆ ಏನಾದರೂ ಮಾಡಪ್ಪಾ ದೇವಾ ಎಂದು ಬೇಡಿಕೊಂಡೆ. ಶೂಟಿಂಗ್ ಮುಗಿಸಿದ ನಾನಾ ದೇವಾಲಯದ ಮೆಟ್ಟಿಲು ಇಳಿಯತೊಡಗಿದರು. ತಕ್ಷಣ ಧಾವಿಸಿದ ನಾನು ಪರಿಚಯ ಮಾಡಿಕೊಂಡು ನಿಮ್ಮನ್ನೊಂದಿಷ್ಟು ಪ್ರಶ್ನೆ ಕೇಳಬೇಕು ಎಂದೆ. ಹೂ ಅಂದರು ನಾನಾ.
ಹೀಗೆ ಶುರುವಾದ ವಾಕ್ ಇನ್ ಟಾಕ್ ಸಂದರ್ಶನದಲ್ಲಿ ನನ್ನ ಮೊದಲ ಪ್ರಶ್ನೆ, ನೀವು ಕರ್ನಾಟಕಕ್ಕೆ ಹಲವು ಬಾರಿ ಬಂದಿದ್ದೀರಿ ಹೇಗನಿಸುತ್ತೆ ? ಕರ್ನಾಟಕ ಉತ್ತಮ ಪ್ರದೇಶ ಎಂದು ನನ್ನತ್ತ ನೋಡಿದರು ನಾನಾ. ಮೊದಲ ಪ್ರಶ್ನೆ ಪೀಠಿಕೆ ಸರಿಯಾಗಲಿಲ್ಲ ಎಂದು ಮತ್ತೊಂದು ಪ್ರಶ್ನೆ ಕೇಳುವ ಭರದಲ್ಲಿ ನೀವು ಪರಿಂದಾ ಚಿತ್ರಕ್ಕಾಗಿ ಬೆಳಗಾವಿಗೆ ಬಂದಿದ್ದೀರಿ, ಹೇಗಿತ್ತು ಅನುಭವ ? ಅದು ಪರಿಂದಾ ಅಲ್ಲ ಪ್ರಹಾರ್ ಎಂದು ಸರಿಪಡಿಸಿದರು ಅವರು.
ನೀವು ರಾಷ್ಟ್ರೀಯ ಶೂಟಿಂಗ್‌ನಲ್ಲಿ ಚಿನ್ನ ಗೆದ್ದಿದ್ದೀರಿ, ಚಿತ್ರಗಳಲ್ಲೂ ಅಭಿನಯಿಸುತ್ತೀರಿ ಎರಡನ್ನೂ ನಿಭಾಯಿಸುವುದು ಹೇಗೆ ? ನನಗೆ ಶೂಟಿಂಗ್ ಅಂದ್ರೆ ಇಷ್ಟ, ಅದು ಫಿಲ್ಮ್ ಆಗಿರಲಿ ಅಥವಾ ಗನ್ ಆಗಿರಲಿ. ಒಂದು ವರ್ಷ ಒಂದೇ ಚಿತ್ರ ಎನ್ನುವ ನಿಯಮಕ್ಕೆ ಅಂಟಿಕೊಂಡಿರುವುದರಿಂದ ನಿಭಾಯಿಸುತ್ತೇನೆ. ಟ್ಯಾಕ್ಸಿ ೯೨೧೧ ಚಿತ್ರದಲ್ಲಿ ಹಾಸ್ಯ ಪಾತ್ರ ಮಾಡಿದ್ದೀರಿ, ತೀರಾ ಸೀರಿಯಸ್ ಪಾತ್ರ ಬಯಸುವ ನೀವು ಅದನ್ನು ಹೇಗೆ ಒಪ್ಪಿಕೊಂಡಿರಿ ? ಹಾಗೆನಿಲ್ಲ ಅದು ಹಾಸ್ಯದಂತೆ ಕಂಡರೂ ಸೀರಿಯಸ್ ಪಾತ್ರವೆ. ನಟನೊಬ್ಬನ ಸಾಮರ್ಥ್ಯ ಪ್ರದರ್ಶನಕ್ಕೆ ಎಲ್ಲ ಬಗೆಯ ಪಾತ್ರಗಳು ಅವಶ್ಯ. ರಾಣಾ ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ, ನಾನು ಸಿನಿಮಾ ನಿರ್ದೇಶಕ. ಬಾಲಿವುಡ್‌ನ ಸಿನಿಮಾಕ್ಕೆ ಸಂಬಂಸಿದಂತೆ ಚಿತ್ರದ ಕಥೆಯಿದೆ ಎನ್ನುವ ಉತ್ತರ ದೊರೆಯಿತು. ಇನ್ನೆರಡು ಪ್ರಶ್ನೆ ಕೇಳುವಷ್ಟರಲ್ಲಿ ಮೆಟ್ಟಿಲು ಇಳಿದಾಗಿತ್ತು. ಹವಾನಿಯಂತ್ರಿತ ವಾಹನದತ್ತ ನಾನಾ ಪಾದ ಬೆಳೆಸಿದರು. ನಾನು ನಿಮ್ಮ ಚಿತ್ರಗಳ ಅಭಿಮಾನಿ ಎಂದಾಗ ನಾನಾ ಮೊಗದಲ್ಲಿ ನಗು, ನನಗೊಂದು ಥ್ಯಾಂಕ್ಸ್ ಕೊಟ್ಟು ಹೊರಟೇ ಬಿಟ್ಟರು. ಹೀಗೆ ವಿಲಕ್ಷಣ ನಟನೊಬ್ಬನ ಸಂದರ್ಶನ ಮಾಡಿದ ಖುಷಿ, ನೆಚ್ಚಿನ ನಟನ ಮಾತನಾಡಿಸಿದ ತೃಪ್ತಿ ದೊರೆಯಿತು. ನಮ್ಮ ಪತ್ರಿಕೆಯಲ್ಲಿ ಹಾಗೂ ಸಿನಿ ವಿಜಯದಲ್ಲಿ ಸಂದರ್ಶನವೂ ಪ್ರಕಟವಾಯಿತು. ಅಂದ ಹಾಗೆ ಇಷ್ಟೆಲ್ಲ ಹೇಳಲು ಕಾರಣವೆಂದರೆ ಬಾದಾಮಿಯಲ್ಲಿ ಚಿತ್ರೀಕರಣಗೊಂಡ ರಾಣಾ ಚಿತ್ರ ಈಗ ಬಿಡುಗಡೆಯಾಗಿದೆ.

Friday, February 6, 2009

ಪರ ಸತಿ ಪ್ರಿಯನ ಪ್ರೇಮ-ಬೆಡ್ ಆಂಡ್ ಬೋರ್ಡ್


ಪರ ಸಂಗದ ಪರಿಣಾಮಗಳ ಬಗ್ಗೆ ಎಚ್ಚರಿಸುವ ಚಿತ್ರವಿದು. ನಾಯಕ ಆಂಟೋನ್, ಪತ್ನಿ ಕ್ರಿಸ್ಟೀನ್‌ಳೊಂದಿಗೆ ಪುಟ್ಟ ಪಟ್ಟಣದ ವಾಸಿ. ಹೂವಿನ ವ್ಯಾಪಾರದ ಆಂಟೋನ್‌ಗೆ ಜೀವನದ ಬಗ್ಗೆ, ಹುಡುಗಿಯರ ಬಗ್ಗೆ ವಿಚಿತ್ರ ಆಕರ್ಷಣೆ. ಕಾಮ ಮಧುರ ಎನ್ನುವ ಖಯಾಲಿಯವ. ಇಂತಿಪ್ಪ ಆಂಟೋನ್ ಜಪಾನಿ ಹುಡುಗಿಯೊಬ್ಬಳ ಸಂಗ ಮಾಡುತ್ತಾನೆ.
ಇತ್ತ ಪತ್ನಿ ಕ್ರಿಸ್ಟೀನ್ ಗರ್ಭಿಣಿಯಾದರೆ ಅತ್ತ ಆಂಟೋನ್‌ಗೆ ಜಪಾನಿ ಭಾಷೆ ಸಾಂಗತ್ಯ. ಪುಟ್ಟ ಕಣ್ಣುಗಳ ಸುಂದರಿ ಕೊಯ್ಕೊಳೊಂದಿಗೆ ಊಟ, ಉಪಹಾರ, ನಿದ್ದೆ. ಕೊನೆಗೊಂದು ದಿನ ಕ್ರಿಸ್ಟೀನ್‌ಗೆ ಆಂಟೋನ್ ಸಂಬಂಧ ತಿಳಿಯುವ ದೃಶ್ಯ ಕುತೂಹಲಕಾರಿ. ಕೊಯ್ಕೊ ಜಪಾನಿ ಸಂಪ್ರದಾಯದಂತೆ ಹೂವುಗಳಲ್ಲಿ ಬರೆದಿಟ್ಟ ಪ್ರೇಮ ಪತ್ರ ಆಂಟೋನ್‌ಗೆ ಕಳುಹಿಸಿರುತ್ತಾಳೆ. ಆದರೆ ಹೂವಿನಲ್ಲಿ ಪ್ರೇಮ ಪತ್ರವಿರುವುದು ಆಂಟೋನ್‌ಗೆ ಗೊತ್ತಿಲ್ಲ. ಮನೆಯಲ್ಲಿ ಹೂಗುಚ್ಛದಲ್ಲಿ ತಂದಿಟ್ಟ ಹೂಗಳು ಒಂದು ದಿನ ಅರಳುತ್ತವೆ. ಆಂಟೋನ್ ಮನೆಯಲ್ಲಿರದ ಸಮಯದಲ್ಲಿ ಕುತೂಹಲದಿಂದ ಹೂವಿನೆಡೆ ಸಾಗುವ ಕ್ರಿಸ್ಟೀನ್ ಪ್ರೇಮ ಪತ್ರ ಕಾಣುತ್ತಾಳೆ.
ನಂತರ ಮನೆ ಬಿಟ್ಟು ಹೋಗುವ ಆಂಟೋನ್ ಜಪಾನಿ ಭಾಷೆಯ ಉನ್ನತಾಭ್ಯಾಸದಲ್ಲಿ ತೊಡಗುತ್ತಾನೆ. ಆದರೆ ಈ ಬದಲಾವಣೆಗಳನ್ನೆಲ್ಲ ನಿರ್ದೇಶಕ ನಾಲ್ಕು ದೃಶ್ಯಗಳಲ್ಲಿ ತೆರೆದಿಟ್ಟಿದ್ದಾರೆ. ಸೋಮವಾರದಿಂದ ಶನಿವಾರದವರೆಗೆ ಜಪಾನಿ ಸಂಪ್ರದಾಯದ ಪ್ರಕಾರ ಊಟಕ್ಕೆ ಕುಳಿತಾಗ ಫ್ರೆಂಚ್ ಸಂಪ್ರದಾಯದ ಆಂಟೋನ್ ಅನುಭವಿಸುವ ಯಾತನೆ ಜಪಾನಿ ಪ್ರೇಮದ ತಾತ್ಸಾರಕ್ಕೆ ಕಾರಣವಾಗುತ್ತದೆ. ಕೊನೆಗೆ ತನಗೆ ಜಪಾನಿ ಸಂಸ್ಕೃತಿ, ಹುಡುಗಿ ಒಪ್ಪದು ಎಂದು ನಿರ್ಧರಿಸಿದ ಆಂಟೋನ್ ಮನೆಗೆ ವಾಪಸ್ಸಾಗುತ್ತಾನೆ.
ಚಿಕ್ಕ ಕತೆಯೊಂದನ್ನು ಸಮರ್ಥವಾಗಿ ಹೇಗೆ ಬಿಂಬಿಸಬಹುದು ಎಂಬುದಕ್ಕೆ ಈ ಚಿತ್ರ ಉದಾಹರಣೆ. ಎರಡು ಸಂಸ್ಕೃತಿಗಳ ಸಮ್ಮಿಲನವೂ ಎಷ್ಟು ಕಷ್ಟಕರ ಎಂಬುದು ಕೂಡ ಇಲ್ಲಿ ಬಿಂಬಿತವಾಗುತ್ತದೆ. ನಿರ್ದೇಶಕ ಕಟ್ಟಿ ಕೊಡುವ ಕೆಲ ದೃಶ್ಯಗಳಲ್ಲಿ ಪರ ಸಂಗದ ಪರಿಣಾಮ, ಶುಭ್ರ ಪ್ರೀತಿಯ ಅನುಭವ ನಮ್ಮದಾಗುತ್ತದೆ. ಅಂದ ಹಾಗೆ ಫ್ರೆಂಚ್ ಭಾಷೆಯಲ್ಲಿ ಡೊಮಿಸೈಲ್ ಕೊಂಜುಗಲ್ ಹೆಸರಿನ ಈ ಚಿತ್ರ ಇಂಗ್ಲೀಷ್ ಅವತರಣಿಕೆಯಲ್ಲಿ ಬೆಡ್ ಆಂಡ್ ಬೋರ್ಡ್ ಆಗಿದೆ. ನಿರ್ದೇಶಕ ಫ್ರಾನ್ಸಿಸ್ ಟ್ರಾಫ್ಯಾಟ್. ಜೀನ್ ಪಿಯರ್, ಕ್ಲೌಡಾ ಜೇಡ್ ಮುಖ್ಯ ಪಾತ್ರಧಾರಿಗಳು. ಚಿತ್ರ ಬಿಡುಗಡಗೊಂಡ ವರ್ಷ ೧೯೭೦.

Monday, February 2, 2009

ಚಂದ್ರಯಾನ ಬಿಡುಗಡೆ




ಸ್ನೇಹಿತ, ಪತ್ರಕರ್ತ ಶಿವಪ್ರಸಾದ್ ಬರೆದ ಚಂದ್ರಯಾನ ಪುಸ್ತಕ ಇತ್ತೀಚೆಗೆ ಬಿಡುಗಡೆಗೊಂಡಿತು. ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದು ಯುವಜನರ ಆರಾಧಕ, ಖ್ಯಾತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ. ಪುಸ್ತಕ ಬಿಡುಗಡೆ ಸಮಾರಂಭದ ವಿವರ ಇಲ್ಲಿದೆ...

ನವದೆಹಲಿ, ಜ. 27: ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು 1860 ರಷ್ಟು ಹಿಂದೆಯೇ ಕಾನ್ಸ್ಟಾಂಟಿನ್ ಟಿಶೆಲ್ಸ್ ಎಂಬ ವ್ಯಕ್ತಿ ನಿಖರವಾಗಿ ಊಹಿಸಿ ಹೇಳಿದ್ದ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಇಂದು ಇಲ್ಲಿ ಹೇಳಿದರು.
ಅವರು, ಪತ್ರಕರ್ತ ಶಿವಪ್ರಸಾದ್ ಬರೆದಿರುವ ಚಂದ್ರಯಾನ ಪುಸ್ತಕವನ್ನು ಮಂಗಳವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ಕಾನ್ಸ್ಟಾಂಟಿನ್ ಕಿವುಡನಾಗಿದ್ದ. ಆದರೆ ಅಧ್ಯಯನದಲ್ಲಿ ಅತೀವ ಆಸಕ್ತಿ ಹೊಂದಿದ್ದ. ತನ್ನ ಅಧ್ಯಯನದಿಂದ ವಿವಿಧ ಸಮೀಕರಣಗಳನ್ನು ರಚಿಸಿದ್ದ. ಆ ಮೂಲಕ ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು ತಿಳಿಸಿದ್ದ. ಇಂದು ಆತನ ಊಹೆ ನಿಜವಾಗಿದೆ. ನಾವು ಚಂದ್ರನ ಮೇಲೆ ಹೊಗಿ ಬಂದಿದ್ದೇವೆ. ಹೀಗಾಗಿ ಚಂದ್ರಯಾನದ ಕಲ್ಪನೆಯ ಜನಕ ಕನ್ಸ್ಟಾಂಟಿನ್ ಎಂದರು.
ಪುಸ್ತಕ ಬಿಡುಗಡೆ ಮಾಡಿದ ನಂತರ ಪ್ರಥಮ ಪ್ರತಿಯನ್ನು ದಿ ವೀಕ್ ನ ಸ್ಥಾನಿಕ ಸಂಪಾದಕರಾದ ಕೆ.ಎಸ್. ಸಚ್ಚಿದಾನಂದ ಮೂರ್ತಿ ಅವರಿಗೆ ನೀಡಿದರು. ನಂತರ ಪುಸ್ತಕದಲ್ಲಿನ ವಿವಿಧ ಅಧ್ಯಾಯಗಳ ಬಗ್ಗೆ ಮಾಹಿತಿ ಪಡೆದರು.
ಚಂದ್ರಯಾನ ಉಡ್ಡಯನದ ನಂತರ ಅಮೇರಿಕಾದ ನಾಸಾ, ಒಬಾಮಾ ನೀಡಿದ್ದ ಪ್ರತಿಕ್ರಿಯೆ ಹಾಗೂ ಆ ಬಗ್ಗೆ ಮಾಧವನ್ ನಾಯರ್ ನೀಡಿದ್ದ ವಿವರಣೆ ಇರುವ ಅಧ್ಯಾಯವನ್ನು ಲೇಖಕ ಶಿವಪ್ರಸಾದ್ ಅವರಿಂದ ಓದಿಸಿ, ವಿವರಣೆ ಪಡೆದರು.
ನಂತರ ಮತ್ತೋರ್ವ ಪತ್ರಕರ್ತ ವಿನಾಯಕ್ ಭಟ್ ಬರೆದಿದ್ದ ದಿ ಗ್ರೇಟ್ ಮೂನ್ ಹೋಕ್ಸ್-1835 ಅಧ್ಯಾಯದ ಬಗ್ಗೆಯೂ ವಿವರಣೆ ಪಡೆದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿನಾಯಕ್ ಭಟ್ ಅವರಿಗೆ ಅವರ ಲೇಖನದಲ್ಲಿದ್ದ ಫೋಟೋ ತೋರಿಸಿ, ಈ ಬಗ್ಗೆ ವಿವರಣೆ ಕೇಳಿ ಆನಂದಿಸಿದರು.
'ಚಂದ್ರಯಾನ ಪುಸ್ತಕ ಬರೆಯಲು ಒಂದು ವರ್ಷ ತೆಗೆದುಕೊಂಡಿದ್ದೀರಿ. ಐತಿಹಾಸಿಕ ಯೋಜನೆಯಾದ ಚಂದ್ರಯಾನ ಕುರಿತ ಸಮಗ್ರ ವಿವರ ಇರುವ ಪುಸ್ತಕವನ್ನು ಹೊರ ತಂದಿರುವುದು ಉತ್ತಮ ಪ್ರಯತ್ನ' ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ 'ಪ್ರಜಾವಾಣಿ' ವಿಶೇಷ ಪ್ರತಿನಿಧಿ ದಿನೇಶ್ ಅಮಿನ್ ಮಟ್ಟು, 'ಡೆಕ್ಕನ್ ಹೆರಾಲ್ಡ್' ಸ್ಥಾನಿಕ ಸಂಪಾದಕ ಬಿ.ಎಸ್. ಅರುಣ್, 'ವಿಜಯ ಕರ್ನಾಟಕ' ದೆಹಲಿ ಪ್ರತಿನಿಧಿ ವಿನಾಯಕ್ ಭಟ್, ಕರ್ನಾಟಕ ವಾರ್ತಾ ಕೇಂದ್ರದ ಸಹಾಯಕ ನಿರ್ದೆಶಕ ವೀರಣ್ಣ ಕಮ್ಮಾರ, ಸುವರ್ಣ ಚಾನೆಲ್ ವರದಿಗಾರ ಪ್ರಶಾಂತ್ ನಾತೂ ಉಪಸ್ಥಿತರಿದ್ದರು.

Tuesday, January 27, 2009

ಐಡ್ಯಾ ಮಾಡ್ಯಾರ


ಐಡ್ಯಾ ಮಾಡ್ಯಾರ ಯಶವಂತ ಸರದೇಶಪಾಂಡೆಯವರ ಚೊಚ್ಚಲ ಚಿತ್ರ. ಶುದ್ಧ ಹಾಸ್ಯದ, ನವಿರು ಸಂಭಾಷಣೆಯ ಈ ಚಿತ್ರದ ಬಗ್ಗೆ ಹೊಸ ಬ್ಲಾಗ್ ಸಿದ್ಧವಾಗಿದೆ. ಚಿತ್ರದ ಬಗ್ಗೆ ತಿಳಿಯಲು ಇಲ್ಲಿ ಭೇಟಿ ನೀಡಿ...http://idyamadyar.blogspot.com

Friday, January 16, 2009

ಸ್ಲಮ್ ಡಾಗ್ ಗೆ ಪ್ರಶಸ್ತಿ , ಪ್ರಶ್ನೆ ?



ಕೊಳಕು ಭಾರತ, ನಾರುವ ಸ್ಲಂ, ಭಿಕ್ಷೆ ಬೇಡುವ ಮಕ್ಕಳು ಪಾಶ್ಚಾತ್ಯ ಸಿನಿಮಾ ನಿರ್ದೇಶಕರ ಕಣ್ಣಲ್ಲಿ ಭಾರತ ಕಾಣುವುದು ಹೀಗೆ. ಅಲ್ಲೇನಿದ್ದರೂ ವಿದೇಶದಲ್ಲಿ ಕುಳಿತ ಪ್ರೇಕ್ಷಕರು, ವಿಮರ್ಶಕರು ಭಾರತದ ಕೊಳಚೆ ಗುಂಡಿ ನೋಡಿ ಪಾಪ ಅನ್ನಬೇಕು, ಇದು ಸಾಕ್ಷಾತ್ ಭಾರತದ ದರ್ಶನ ಎಂದುಕೊಂಡು ಪ್ರಶಸ್ತಿ ಕೊಡಬೇಕು. ನಮ್ಮವರು ಐವತ್ತು ವರ್ಷಕ್ಕೊಮ್ಮೆ ದೊರಕುವ ಪ್ರಶಸ್ತಿ ನೋಡಿ ಖುಷಿ ಪಡೆಬೇಕು, ಭಾರತೀಯ ಚಿತ್ರರಂಗ ಅದ್ಭುತ ಎಂದು ಉದ್ಗರಿಸಬೇಕು.
ಇಸ್ಮಾಯಿಲ್ ಮರ್ಚಂಟ್ ಇಂಗ್ಲೀಷ್‌ನಲ್ಲಿ ಹಲವಾರು ಚಿತ್ರ ನಿರ್ಮಿಸಿದ್ದಾರೆ, ಅವರು ಭಾರತೀಯ ಮೂಲದವರು. ನಮ್ಮವರೆ ಆದ ನಾಸಿರುದ್ದೀನ್ ಶಾ, ಶಬಾನಾ ಆಜ್ಮಿ, ಶಶಿ ಕಪೂರ, ಐಶ್ವರ್ಯಾ ರೈ ಕೂಡ ಹಲವು ಇಂಗ್ಲೀಷ್ ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ವದೇಶ್, ಲಗಾನ್, ಜೋಧಾ ಅಕ್ಬರ್‌ನಂತಹ ಚಿತ್ರಗಳಿಗೆ ಅಷ್ಟೇ ಏಕೆ ಮೌಲಿನ್ ರೋಜ್ ಎಂಬ ಇಂಗ್ಲೀಷ್ ಓಪೆರಾಗೂ ರೆಹಮಾನ್ ಸಂಗೀತ ನೀಡಿದ್ದಾರೆ. ನಮ್ಮಶೇಖರ ಕಪೂರ್ ಎಲಿಜಾಬೆತ್ ಚಿತ್ರ ನಿರ್ದೇಶಿಸಿದ್ದಾರೆ. ಅಮೀರ್ ಖಾನ್ ತಾರೆ ಜಮೀನ್ ಪರ್, ಶಾರುಖ್ ಚಕ್ ದೆ ಇಂಡಿಯಾ ಮಾಡಿದ್ದಾರೆ. ಮರಾಠಿ, ಬೆಂಗಾಲಿಗಳಲ್ಲಿ ಅತ್ಯುತ್ತಮ, ವಿಶ್ವದರ್ಜೆಯ ಚಿತ್ರಗಳು ಬಂದಿವೆ, ಆದರೆ ಅವಕ್ಕೆಲ್ಲ ಆಸ್ಕರ್ ಆಗಲಿ, ಗೋಲ್ಡನ್ ಗ್ಲೋಬ್ ಆಗಲಿ ದೊರಕಿಲ್ಲ. ಯಾಕೆ ? ಏಕೆಂದರೆ ಅವೆಲ್ಲ ಭಾರತೀಯರ ಚಿತ್ರಗಳು, ಆದರೆ ಸ್ಲಂ ಡಾಗ್ ವಿದೇಶಿಯರು ನಿರ್ಮಿಸಿ, ನಿರ್ದೇಶಿಸಿದ ಚಿತ್ರ.
fread full artical at http://saangatya.wordpress.com

Thursday, January 15, 2009

ಅಂಧ ಹುಡುಗನ ಮೌನ ರಾಗ


ಆತ ನೋಡುವುದಿಲ್ಲ, ಕೇಳುತ್ತಾನೆ, ಆತನಿಗೆ ಬಾಯಿ ಇದೆ, ಆದರೆ ಮಾತು ಕಡಿಮೆ. ಆತ ಸಂಗೀತದ ಪಂಡಿತನಲ್ಲ ಆದರೆ ಸಂಗೀತ ಟ್ಯೂನ್ ಮಾಡುವುದು ಗೊತ್ತು. ಆತನ ಒಳಗಣ್ಣು ಸದಾ ಜಾಗೃತ, ಆದರೆ ಹೊರಗಿನ ಕಣ್ಣಿಲ್ಲ.
ಕೆಂಪು ಬಣ್ಣದ ಚಂದದ ಹುಡುಗ ಖುರ್ಷಿದ್ ಕೈ ಮುಂದೆ ಹಿಡಿದು ಸಂಗೀತದತ್ತ ಕಿವಿಕೊಡುತ್ತಾನೆ. ಸೂಫಿ ಸಂಗೀತ, ನಾಯಿಯ ಬೊಗಳುವಿಕೆ, ಮನೆ ಮಾಲೀಕ ಬಾಗಿಲು ಬಡಿಯುವ ಸದ್ದು, ಪಾತ್ರೆ ತಯಾರಿಸುವಾಗ ಸುತ್ತಿಗೆಯಿಂದ ಬಡಿಯುವ ಶಬ್ದ...ಎಲ್ಲವೂ ಆತನಿಗೆ ಅಪ್ಯಾಯಮಾನ. ಪ್ರತಿ ಬಾರಿಯೂ ಹೊಸ ಥರ, ನವ ಬಗೆ. ಇಂತಹ ಖುರ್ಷಿದ್‌ನಿಗೆ ಸಂಗೀತಪ್ರೇಮಿ ಗೆಳತಿಯೂ ಉಂಟು.
ಖುರ್ಷಿದ್ ಎಡವಿದಾಗ ಕೈ ಹಿಡಿಯುವ, ಸಂಗೀತ ಉಪಕರಣಗಳ ತಯಾರಿಕೆ ಅಂಗಡಿಯಲ್ಲಿ ಈತನ ಟ್ಯೂನ್‌ಗಳಿಗೆ ನರ್ತಿಸುವವಳೂ ಇವಳೆ. ಇಂತಿಪ್ಪ ಖುರ್ಷಿದ್‌ನ ಜೀವನದ ಮನ ಮುಟ್ಟುವ ದೃಶ್ಯಗಳು ಹೀಗಿವೆ. ಕಿವಿ ಕಣ್ಣಾದಾಗ
ಅದೊಂದು ದಿನ ಖುರ್ಷಿದ್ ಅವರಮ್ಮ ಮಾರ್ಕೆಟ್‌ನಲ್ಲಿ ಬ್ರೆಡ್ ತರಲು ಹೊರಟಿದ್ದಾರೆ. ಸಾಲುಗಟ್ಟಿ ನಿಂತಿರುವ ಹತ್ತಕ್ಕೂ ಹೆಚ್ಚು ಬಾಲಕಿಯರು ಬ್ರೆಡ್ ಮಾರಾಟಗಾರರು. ನನ್ನ ಬ್ರೆಡ್ ಚೆನ್ನಾಗಿದೆ, ನನ್ನ ಬ್ರೆಡ್ ಮೃದು, ನನ್ನದು ತಾಜಾ, ಎಲ್ಲಕ್ಕಿಂತ ನನ್ನದು ಒಳ್ಳೆಯದು. ಬಣ್ಣ ಬಣ್ಣದ ಇರಾನಿ ಪೋಷಾಕು ಹೊದ್ದ ಸುಕೊಮಲೆಯರ ಕೈಯಲ್ಲಿ ಮೃದುವಾದ ಬ್ರೆಡ್. ಹೇಗೆ ಆಯ್ಕೆ ಮಾಡುವುದು ? ಈ ಜವಾಬ್ದಾರಿ ಖುರ್ಷಿದ್‌ನದ್ದು. ಆದರೆ ಖುರ್ಷಿದ್ ಮನಸ್ಸು ಧ್ವನಿಯ ಮಾಧುರ್ಯಕ್ಕೆ ಮಾರು ಹೋಗುವುದು. ಹಾಗಾಗಿ ಎಲ್ಲ ಹುಡುಗಿಯರ ಕೈಲಿದ್ದ ಬ್ರೆಡ್ ಮೃದುವಾಗಿದ್ದರೂ ಧ್ವನಿ ಮಧುರವಾಗಿರುವ ಬಾಲಕಿ ಬ್ರೆಡ್ ಖರೀದಿಗೆ ಖುರ್ಷಿದ್ ಕ್ವಾಲಿಟಿ ಕಂಟ್ರೋಲ್ ಟೆಸ್ಟ್ ಮಾಡುತ್ತಾನೆ, ಈ ಬ್ರೆಡ್ ಮೃದುವಾಗಿಲ್ಲ ಎಂಬ ಅಮ್ಮನ ಆಕ್ಷೇಪಕ್ಕೆ ಹೌದು ಬ್ರೆಡ್ ಮೃದುವಾಗಿಲ್ಲ, ಆಧರೆ ಧ್ವನಿ ಮಧುರ, ಮಧುರ ಎನ್ನುತ್ತಾನೆ ಖುರ್ಷಿದ್.
ಈ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ http://saangatya.wordpress.com

Wednesday, January 7, 2009

ಭಾವನೆಗಳ ಸಂಘರ್ಷ ಮಿಕ್ಸೆಡ್ ಡಬಲ್ಸ್



»A¢ avÀægÀAUÀzÀ°è ªÉÄîäzsÀåªÀÄ ªÀUÀðzÀ ¨sÁªÀ£ÉUÀ¼À£ÀÄß §UÉ¢qÀĪÀ ¸ÁªÀÄxÀåðzÀ gÀdvï PÀ¥ÀÆgïgÀ «©ü£Àß avÀæ «ÄPÀìqï qÀ§¯ïì. ªÉÊ¥sï ¸Áé¦AUï JA§ ¥Á±ÁÑvÀå zÉñÀUÀ¼À «PÀÈvÀ ¥ÀgÀA¥ÀgÉ £ÀªÀÄä zÉñÀzÀ®Æè §AzÀgÉ ¹Üw ºÉÃVgÀ§ºÀÄzÀÄ JA§ §UÉÎ ªÀÄÆqÀĪÀ ¥Àæ±ÉßUÀ½UÉ avÀæ GvÀÛgÀªÁVzÉ.

PÀ®à£Á, «£ÉÆÃzï, ¸ÀĤïï, ªÀiÁ®w zÀA¥ÀwUÀ¼À ªÀÄÆ®PÀ ¥ÀwßAiÀÄgÀ ¥ÀgÀ¸ÀAUÀ vÉgÉzÀÄPÉƼÀÄîvÀÛzÉ. fêÀ£ÀzÀ°è ¨ÉøÀvÀÛ ¸ÀĤïïUÉ ºÉƸÀvÉãÁzÀgÀÆ ªÀiÁqÀĪÀ §AiÀÄPÉ. CzÀPÉÌ DvÀ DAiÀÄÄÝPÉƼÀÄîªÀÅzÀÄ ¥Àwß ªÀiÁ®wAiÀÄ£ÀÄß ¥ÀgÀ¸ÀAUÀQ̽¹ vÁ£ÀÆ ªÀÄvÉÆÛ§âgÀ ¥ÀwßAiÉÆA¢UÉ ¸ÀgÀ¸ÀªÁqÀĪÀ vÀAvÀæ.

EAlgï£Émï£À°è PÉÆ£ÉUÀÆ MAzÀÄ eÉÆÃrAiÀÄ£ÀÄß ºÀÄqÀÄQ ºÉƸÀ C£ÀĨsÀªÀPÉÌ ªÀÄÄAzÁUÀÄvÁÛ£É ¸ÀĤïï. EªÀgÀ JzÀÄgÁUÀĪÀÅzÀÄ «£ÉÆÃzï ªÀiÁ®w zÀA¥Àw, CzÉÆAzÀÄ ¢£À ¸ÀgÀ¸ÀzÀ gÁwæUÉ J®ègÀÆ ¹zÀÞgÁUÀÄvÁÛgÉ. DzÀgÉ ¨sÁgÀwÃAiÀÄ ¹ÜgÀªÁVlÄÖ £ÁlPÀzÀ ªÉâPÉAiÀÄAvÉ ¥ÁvÀæzsÁjUÀ¼ÀÄ PÁåªÉÄgÁ ªÀÄÄAzÉ §AzÀÄ C©ü£À¬Ä¸ÀĪÀ PÉÆ£ÉAiÀÄ zÀȱÀå avÀæzÀ ºÉʯÉÊmï. SÁåvÀ ¤zÉÃð±ÀPÀ gÀdvï PÀ¥ÀÆgï, gÀt«Ãgï ±ÉÆÃgÉ, PÉÆAPÀ£Á ¸Éãï, PÉÆAiÀÄ¯ï ¥ÀÄj vÁgÁUÀtzÀ°èzÁÝgÉ.


ಸಾಂಗತ್ಯದ ಖುಷಿ ಪ್ರೀತಿ



PÀÄ¥Àà½îAiÀÄ ¸ÀÄAzÀgÀ ¥Àj¸ÀgÀzÀ°è £ÀqÉzÀ ¸ÁAUÀvÀåzÀ JgÀqÀÄ ¢£ÀUÀ¼À avÉÆæÃvÀìªÀ £À£Àß ¥Á°UÉ ºÉƸÀ C£ÀĨsÀªÀ ºÁUÀÆ ºÉƸÀvÀ£À ºÀÄqÀÄQzÀ RĶ. ¹Ã«ÄvÀ ªÀ®AiÀÄzÀ°è ¹¤ªÀiÁ «ÃPÀëuÉ ºÁUÀÆ ZÀZÉðAiÀÄ°è vÉÆqÀV¹PÉÆArzÀÝ £À£ÀUÉ ¸ÁAUÀvÀåzÀ ¸ÉßúÀ ¹¤ªÀiÁªÀ£ÀÄß ªÀÄvÀÛµÀÄÖ ¦æÃw¸À®Ä PÀ°¹vÀÄ.

£ÁªÀqÀ ¸Àgï, ¥ÀgÀªÉÄñÀégÀ ¸Àgï, ªÁ¢gÁeï ¸Àgï, ¢Ã¥Á »gÉÃUÀÄwÛ, nãÁ ±À²zsÀgï, ¸ÀÄ¢üÃgï PÀĪÀiÁgï £ÉÃvÀÈvÀézÀ°è £ÀqÉzÀ GvÀìªÀ ªÀÄ£À¹ì£À°è ¸ÀA¨sÀæªÀÄ, ºÉƸÀ GvÁìºÀ ªÀÄÆr¹zÀÝAvÀÆ RgÉ.

ºÀÈwéPï WÀlPï, CQgÉÆ QgÁ¸ÉƪÁ, Væ¦üvïgÀAvÀºÀ ªÀĺÁ£ï ¤zÉÃð±ÀPÀgÀ avÀæUÀ¼À£ÀÄß £ÉÆÃqÀĪÀ CªÀPÁ±À ¤dPÀÆÌ §AiÉÆøÉÆÌÃ¥ï£À°è ¹¤ªÀiÁ mÉæîgï £ÉÆÃrzÀ C£ÀĨsÀªÀ.

JgÀqÀÄ ¢£ÀUÀ¼À°è £ÁªÀÅ dÄQÛ l¥ÉÆà Ogï UÀ¥ÉÆà, ¥Éƹ֣ÉÆÃ, ¥ÉÆøïÖªÀÄ£ï E£ï ¢ ªÀiËAmÉãï, ZÉ¸ï ¦üêÀgï ¸ÉÃjzÀAvÉ 8 CvÀÄå£ÀßvÀ avÀæUÀ½UÉ ¸ÁQëAiÀiÁzɪÀÅ. PÀÄ¥Àà½îAiÀÄ ¸ÀÄÖrAiÉÆÃzÀ°è ¥Àæw ¢£À ¨É¼ÀUÉάÄAzÀ gÁwæAiÀĪÀgÉUÉ ¹¤ªÀiÁ, ¹¤ªÀiÁ, ¹¤ªÀiÁ. ¥Àæw avÀæzÀ £ÀAvÀgÀªÀÇ ZÀZÉð, «ZÁgÀ «¤ªÀÄAiÀÄ. ¹¤ªÀiÁ £ÉÆÃqÀĪÀ §UÉ, ¸ÀAPÉÃvÀUÀ¼À£ÀÄß ¥Àj¨sÁ«¸ÀĪÀ jÃw, vÁAwæPÀvÉ, avÀæPÀvÉ ¸ÉÃjzÀAvÉ J®è «¨sÁUÀUÀ¼À°è ¸ÀªÀÄUÀæ ªÀiÁ»w.

CAzÀ ºÁUÉ FUÀ £Á£ÀÆ ¸ÁAUÀvÀåzÀ ¸ÀzÀ¸Àå. £ÁªÀÅ £ÉÆÃrzÀ avÀæUÀ¼À §UÉÎ, £ÉÆÃqÀ§ºÀÄzÁzÀ GvÀÛªÀÄ avÀæUÀ¼À §UÉÎ http://www.saangatya.wordpress.com/ £À°è §gÉAiÀÄ°zÉÝêÉ. EzÀÄ PÀ£ÀßqÀzÀ ¨ÁèUï ¯ÉÆÃPÀzÀ°è ¹¤ªÀiÁPÁÌV «ÄøÀ¯ÁUÀĪÀ «±ÉõÀ ¨ÁèUï. ¤ÃªÀÅ E°è ¨sÉÃn PÉÆr, GvÀÛªÀÄ avÀæUÀ¼À §UÉÎ ªÀiÁvÁqÉÆÃt, w½AiÉÆÃt.CAzÀ ºÁUÉ EAvÀºÀ CªÀPÁ±À PÀ°à¹zÀ £ÁªÀqÀ ¸Àgï ºÁUÀÆ vÀAqÀPÉÌ £À£Àß ¹¤ªÀiÁ £ÀªÀÄ£ÀUÀ¼ÀÄ.