Thursday, December 31, 2009

ಶ್ರೀ ಕೃಷ್ಣದೇವರಾಯ ಬಿಡುಗಡೆಗೆ ಸಿದ್ಧ



ಸ್ನೇಹಿತ, ಟಿವಿ೯ ನಿರೂಪಕ ಶಿವಪ್ರಸಾದ್ ಹೊಸ ಪುಸ್ತಕವೊಂದನ್ನು ಬರೆದಿದ್ದಾನೆ. ಪ್ರತಿ ವರ್ಷ ಹೊಸ ಸಾಹಸವೊಂದನ್ನು ಮಾಡು ಎಂಬ ಮಾತು ಆತನ ಡೈರಿಯಲ್ಲಿ ದಾಖಲಾಗಿರುತ್ತದೆ. ಈ ಸಂಪ್ರದಾಯದ ಪ್ರಕಾರ ಈ ವರ್ಷವೂ ಮತ್ತೊಂದು ಸಾಹಸದ ಚಾರಣ ಮುಗಿದಿದೆ. ಹೆಗಲಿಗೆ ಕ್ಯಾಮೆರಾ, ಕೈಯಲ್ಲೊಂದು ಪುಸ್ತಕ, ಲ್ಯಾಪ್‌ಟಾಪ್ ಇದ್ದರೆ ಶಿವಾ ಹೊಸ ಸಾಹಸಕ್ಕೆ ಹೊರಟಿದ್ದಾನೆ ಎಂದರ್ಥ. ಹಿಮದಿಂದಾವೃತವಾದ ಅಮರ್‌ನಾಥ್, ಸೈನಿಕರ ಛಳಿಯನ್ನೂ ಬಿಡಿಸುವ ಕಾರ್ಗಿಲ್, ವೇಶ್ಯೆಯರ ದುರ್ಭರ ಬದುಕಿನ ಕಾಮಾಟಿಪುರ, ಮಹಾಭಾರತ ಯುದ್ಧ ನಡೆದ ಕುರುಕ್ಷೇತ್ರ, ಮುಂಬೈನಲ್ಲಿ ಉಗ್ರರ ಗುಂಡಿಗೆ ಎದೆಯೊಡ್ಡಿ ವರದಿಗಳನ್ನು ಹೆಕ್ಕಿ ತಂದವನೀತ.
ಸುಭಾಷ್ ಸಾವಿನ ಸುತ್ತ, ಚಂದ್ರಯಾನ, ಜಲಿಯನ್‌ವಾಲಾಬಾಗ್ ಎಂಬ ಮೂರು ಪುಸ್ತಕಗಳನ್ನು ಈಗಾಗಲೇ ಬರೆದಿದ್ದಾನೆ. ಕರ್ನಾಟಕದ ಖ್ಯಾತ ಅರಸ ಶ್ರೀ ಕೃಷ್ಣದೇವರಾಯನ ಬಗ್ಗೆ ಹೊಸ ಪುಸ್ತಕವನ್ನು ಬಿಡುಗಡೆಗೆ ಅಣಿಗೊಳಿಸಿದ್ದಾನೆ ಶಿವ. ತಾಳಿಕೋಟೆ, ಹಂಪಿ ಸೇರಿದಂತೆ ಕೃಷ್ಣದೇವರಾಯನ ಇತಿಹಾಸವಿರುವ ಎಲ್ಲ ಸ್ಥಳಗಳಲ್ಲೂ ಓಡಾಡಿದ್ದಾನೆ. ನಾನಾ ಗ್ರಂಥಗಳು, ಪ್ರವಾಸಿಗರ ಡೈರಿಗಳನ್ನೂ ಅಭ್ಯಸಿಸಿ ಈ ಹೊಸ ಪುಸ್ತಕ ಅಣಿಗೊಳಿಸಿದ್ದಾನೆ. ಕೃಷ್ಣದೇವರಾಯನ ಬಗ್ಗೆ ಗೊತ್ತಿರದ ಕೆಲ ಸಂಗತಿಗಳನ್ನೂ ಇಲ್ಲಿ ಉಲ್ಲೇಖಿಸಿರುವುದು ವಿಶೇಷ. ಅಂದ ಹಾಗೆ ಜ.೪ ರಂದು ಬೆಂಗಳೂರಿನಲ್ಲಿ ಶಿವಪ್ರಸಾದನ ಹೊಸ ಪುಸ್ತಕ ಬಿಡುಗಡೆಗೊಳ್ಳಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಎಂ.ಪಿ.ಪ್ರಕಾಶ್ ಭಾಗವಹಿಸಲಿದ್ದಾರೆ. ಈ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ತಮಗೆ ಹಾರ್ದಿಕ ಸ್ವಾಗತ, ಸಮಾರಂಭದ ಆಹ್ವಾನ ಪತ್ರಿಕೆ ಇಲ್ಲಿದೆ ಬನ್ನಿ, ಭಾಗವಹಿಸಿ, ಪುಸ್ತಕ ಸಂಸ್ಕೃತಿ ಬೆಳೆಸಿ.

ಡಾ.ವಿಷ್ಣು ಪ್ರೀತಿ... ಶೇಂಗಾ ಉಂಡೆ !


ಬಾದಾಮಿಯಲ್ಲಿ ನಡೆದ ಹಿಮಪಾತ ಚಿತ್ರದ ಚಿತ್ರೀಕರಣದಲ್ಲಿ ಅಭಿಮಾನಿಯೊಂದಿಗೆ ವಿಷ್ಣು.



ಆರೋಗ್ಯದ ಬಗ್ಗೆ ಅತೀವ ಕಾಳಜಿ ಹೊಂದಿದ್ದ ನಟ ಡಾ.ವಿಷ್ಣುವರ್ಧನ್ ಬಾದಾಮಿಯಲ್ಲಿ ಆಯಿಲ್ ಪುಲ್ಲಿಂಗ್ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದಿದ್ದರು !.
ಅದು ೧೯೯೭, ಹಿಮಪಾತ ಚಿತ್ರದ ಚಿತ್ರೀಕರಣಕ್ಕಾಗಿ ಸುಹಾಸಿನಿಯವರೊಂದಿಗೆ ವಿಷ್ಣು ಬಾದಾಮಿಯಲ್ಲಿದ್ದರು. ಉದ್ಯಮಿ ಮಹಾಂತೇಶ ಮಮದಾಪುರ ಅವರ ಆಯಿಲ್ ಮಿಲ್‌ನಲ್ಲಿ ಎರಡು ದಿನ ಶೂಟಿಂಗ್ ನಡೆದಿತ್ತು.
ವಿರಾಮದ ವೇಳೆ ವಿಷ್ಣು ಹಾಗೂ ಮಹಾಂತೇಶ ಉಭಯ ಕುಶಲೋಪರಿ ವಿಚಾರಕ್ಕೆ ಕುಳಿತರು. ಬಾಯಿಯ ಸ್ವಚ್ಛತೆಗೆ ಎಣ್ಣೆ ಬಳಸುವ ಆಯಿಲ್ ಪುಲ್ಲಿಂಗ್ ಚಿಕಿತ್ಸೆ ಆಗಷ್ಟೇ ಖ್ಯಾತಿ ಪಡೆದಿತ್ತು. ಆಯಿಲ್ ಪುಲ್ಲಿಂಗ್‌ನಿಂದ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ವಿವರಿಸಿದ ವಿಷ್ಣು ಈ ಹೊಸ ಚಿಕಿತ್ಸೆ ಬಂದ ಬಗೆ, ಅದರ ವಿಧಾನ ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ವಿವರವಾಗಿ ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಶುದ್ಧ ಎಣ್ಣೆ ದೊರಕುವುದಿಲ್ಲ, ನಿಮ್ಮ ಮಿಲ್‌ನ ಸೂರ್ಯಕಾಂತಿ ಎಣ್ಣೆ ಕೊಡಿ ಎಂದರು. ತಾವು ತೆರಳುವಾಗ ಸೂರ್ಯಕಾಂತಿ ಎಣ್ಣೆಯ ಡಬ್ಬಿ ಒಯ್ದರು ಎಂದು ಮಹಾಂತೇಶ ನೆನಪಿಸಿಕೊಳ್ಳುತ್ತಾರೆ.
ಉತ್ತರ ಕರ್ನಾಟಕದ ಖಾದ್ಯಗಳೆಂದರೆ ವಿಷ್ಣು ಕಣ್ಣರಳಿಸುತ್ತಿದ್ದರು. ಮಹಾಂತೇಶರ ಮನೆಯಲ್ಲಿ ಉಪಹಾರಕ್ಕೆ ಬಂದಾಗ ವಿಷ್ಣು ಗಮನ ಹರಿದಿದ್ದು ಶೇಂಗಾ ಉಂಡಿಯೆಡೆಗೆ. ಆಹಾ ಇದು ಚೆನ್ನಾಗಿದೆ ಎಂದ ಸಾಹಸಸಿಂಹ ಉಂಡಿಯನ್ನೇ ಉಪಹಾರವಾಗಿಸಿಕೊಂಡರು. ನಂತರ ಸುಹಾಸಿನಿ, ವಿಷ್ಣು ವಾಪಸ್ಸಾಗುವಾಗ ಶೇಂಗಾ ಉಂಡಿ ಹಾಗೂ ಉತ್ತರ ಕರ್ನಾಟಕದ ನೆನಪು ಜತೆಗಿತ್ತು.
ಹಿಮಪಾತ ಚಿತ್ರೀಕರಣ ಬಾದಾಮಿಯ ಮೇಣಬಸದಿ, ಪಟ್ಟದಕಲ್ಲ, ಐಹೊಳೆ, ವಿಜಾಪುರದ ಗೋಳಗುಮ್ಮಟ, ಬಾರಾಕಮಾನ್‌ಗಳಲ್ಲಿ ನಡೆದಿತ್ತು. ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನೂ ಸೂಕ್ಷ್ಮವಾಗಿ ಅವಲೋಕಿಸಿದ ವಿಷ್ಣು ವಿವರವಾಗಿ ಮಾಹಿತಿ ಪಡೆದಿದ್ದರು. ವಿಜಾಪುರದಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಹೊರತುಪಡಿಸಿದರೆ ಅವಳಿ ಜಿಲ್ಲೆಗೆ ಮತ್ತೊಮ್ಮೆ ಭೇಟಿ ನೀಡಲು ಸಾಹಸಸಿಂಹನಿಗೆ ಸಾಧ್ಯವಾಗಲಿಲ್ಲ.

ಆಪ್ತ ಮಿತ್ರನ ನೆರವು...




ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ

ಸಿಂಹನ ಕಲಾ ಪ್ರೀತಿ



ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ