Tuesday, May 19, 2009

ಜೋಜೋ ಗೆ ಜೈ ಹೋ !







ಪುಟ್ಟ ಕೈಕಾಲುಗಳು, ದೊಡ್ಡ ತಲೆ, ಅತ್ತಿಂದಿತ್ತ ಓಡಾಡುತ್ತ ಮಕ್ಕಳಂತೆ ಕಾಣುವ ವೇಷಧಾರಿಗಳು. ಐಪಿಎಲ್ ಪಂದ್ಯಾವಳಿ ಸಂದರ್ಭದಲ್ಲಿ ವೋಡಾಫೋನ್ ರೂಪಿಸಿರುವ ಜೋಜೋ ಪಾತ್ರಧಾರಿಗಳು ಈಗ ಎಲ್ಲರ ಅಚ್ಚುಮೆಚ್ಚು. ಓ ಮೊದಲು ನಾಯಿಗಳನ್ನು ಬಳಸಿ ತನ್ನ ಜಾಹೀರಾತಿನ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದ ವೋಡಾಫೊನ್ ಈಗ ಪುಟಾಣಿ ಪಾತ್ರಗಳ ಮೂಲಕ ಮಕ್ಕಳು, ಯುವಕರು ಹಾಗೂ ಹಿರಿಯರ ಮನ ಗೆದ್ದಿದೆ.
ಜೋಜೋ ಈ ಹೆಸರಿನ ಈ ಜಾಹೀರಾತು ಸರಣಿಯಲ್ಲಿ ಪುಟ್ಟ ಪಾತ್ರಧಾರಿಯ ಕಾಲು ಮುರಿದಿದ್ದು, ಕಿಟಲೆ ಮಾಡಿದ್ದು, ಮೇಲ್ ಬಾಕ್ಸ್ ಬೆನ್ನು ಹತ್ತಿರುವ, ಕಾರ್ ರೀಚಾರ್ಜ್ ಮಾಡುವ ದೃಶ್ಯಗಳು ಮತ್ತೊಮ್ಮೆ ನೋಡಬೇಕೆನಿಸುತ್ತವೆ. ಈ ಜಾಹೀರಾತುಗಳಿಗೆ ಜನ್ಮ ನೀಡಿದ್ದು ನಿರ್ವಾಣ ಸಂಸ್ಥೆ. ಕಳೆದ ವರ್ಷ ವೋಡಾಫೋನ್ನ ಹ್ಯಾಪಿ ಟು ಹೆಲ್ಪ್ ಜಾಹೀರಾತು ಸರಣಿ ರೂಪಿಸಿದ್ದ ಸಂಸ್ಥೆ ಈ ಬಾರಿ ವಿಭಿನ್ನ ಜಾಹೀರಾತು ಮಾಡಬೇಕೆಂದು ಹೊರಟಾಗ ಚಿಂತನೆ ನಡೆದಿದ್ದು ಕಾರ್ಟೂನ್ ಪಾತ್ರಧಾರಿಗಳ ಬಗ್ಗೆ. ಆದರೆ ಈಗಾಗಲೇ ಅಂತಹ ಹಲವಾರು ಜಾಹೀರಾತುಗಳು ಪ್ರದರ್ಶನಗೊಂಡಿರುವುದರಿಂದ ಮನುಷ್ಯರನ್ನೇ ಬಳಸಿ ಹೊಸ ಪಾತ್ರ ಸೃಷ್ಟಿಸುವ ಉತ್ಸಾಹ ತಂಡದಲ್ಲಿತ್ತು.
ಅದಕ್ಕಾಗಿ ಮೃದು ಉಣ್ಣೆಯ ಮನುಷ್ಯನ ಮೇಲ್ಕವಚ ನಿರ್ಮಿಸಿ, ತಲೆಯ ಭಾಗಕ್ಕೆ ಪರ್ಫೆಕ್ಸ್ ಎನ್ನುವ ವಸ್ತು ಬಳಸಲಾಯಿತು. ಮೃದು ದೇಹ, ದೊಡ್ಡ ತಲೆ, ಮಕ್ಕಳಂತೆ ನಡೆಯುವ ಪಾತ್ರಧಾರಿಗಳಿಂದಾಗಿ ಜೋಜೋ ಈಗ ಎಲ್ಲೆಡೆ ಜನಪ್ರಿಯ.
ಸಂಸ್ಥೆಯ ನಿರ್ದೇಶಕ ಪ್ರಕಾಶ್ ವರ್ಮಾ ಈ ಜಾಹೀರಾತು ರೂಪಿಸುವುದಕ್ಕಾಗಿ ಭರ್ತಿ ೩ ತಿಂಗಳು ಹೋಮ್ ವರ್ಕ್ ಮಾಡಿದ್ದಾರೆ. ಪಾತ್ರಧಾರಿಗಳಾಗಿ ಮಕ್ಕಳು, ಯುವತಿಯರು ಹಾಗೂ ಪುರುಷರು ಅಭಿನಯಿಸಿದ್ದಾರೆ. ಆದರೆ ಇಲ್ಲೊಂದು ವಿಶೇಷವಿದೆ, ಪಾತ್ರಧಾರಿಗಳು ಮಕ್ಕಳಂತೆ ಕಾಣಬೇಕು ಹಾಗೂ ಜಾಹೀರಾತು ಆಕರ್ಷಕವಾಗಿಸಬೇಕೆಂಬ ದೃಷ್ಟಿಯಿಂದ ತಕ್ಕಮಟ್ಟಿಗೆ ಆನಿಮೇಶನ್ ತಂತ್ರಜ್ಞಾನ ಬಳಸಲಾಗಿದೆ. ಹೈ ಸ್ಪೀಡ್ ಕ್ಯಾಮೆರಾದಲ್ಲಿ ಚಿತ್ರೀಕರಣ ನಡೆಸಿ ಪಾತ್ರಧಾರಿಗಳ ನಡಿಗೆಯನ್ನು ವಿಭಿನ್ನವಾಗಿ ತೋರಿಸಿದ್ದು ಜಾಹೀರಾತಿನ ಹೆಗ್ಗಳಿಕೆ.
ಪ್ರೇಕ್ಷಕರ ಮನಸ್ಸು ಬೇರೆಡೆ ಆಕರ್ಷಿತವಾಗದಂತೆ ಹಿನ್ನೆಲೆಯಾಗಿ ಬೂದಿ ಬಣ್ಣ ಬಳಸಿದ್ದರೆ, ಪಾತ್ರಧಾರಿಗಳದ್ದು ಶ್ವೇತ ವಸ್ತ್ರ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ನ ಪ್ಲಾಟಿಪಸ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಸಿದ್ದು , ಜೋಜೋ ಜನಪ್ರಿಯತೆ ಪ್ರತಿ ದಿನ ಹೆಚ್ಚಾಗುತ್ತಿದೆ. ಐಪಿಎಲ್ಗಿಂತಲೂ ಹೆಚ್ಚು ಹಾಟ್ ಫೇವರಿಟ್ ಆಗಿರುವುದು ಜೋಜೋ ಜನಪ್ರಿಯತೆಗೆ ಸಾಕ್ಷಿ.

Saturday, May 9, 2009

ಹಂ ಸಾಥ್ ಸಾಥ್ ಹೈ


ಅವ ಸುಬೋಧ್ ಕೊಲ್ಕತ್ತಾದ ಖ್ಯಾತ ಫುಟ್ಬಾಲ್ ತಂಡ ಮೋಹನ್ ಬಗಾನ್ನ ತರಬೇತುದಾರ. ಪಂದ್ಯದ ಸಂದರ್ಭದಲ್ಲಿ ಹೊಡೆದಾಟ ನಡೆದು ಕ್ರೀಡಾಂಗಣಕ್ಕೆ ಪ್ರೇಕ್ಷಕರು ಬೆಂಕಿ ಹಚ್ಚುತ್ತಾರೆ, ಆತ ಮನೆಗೆ ಮರಳುತ್ತಾನೆ. ರಾಮಾನುಜನ್ ಹಿಂದಿ ಭಾಷೆ ಪ್ರಚಾರಕ. ನೆಲೆಸಿರುವುದು ತಮಿಳುನಾಡಿನ ಚೆನ್ನೈನಲ್ಲಿ. ಹಿಂದಿ ಭಾಷೆ ಪ್ರತಿಭಟನಾಕಾರರು ಆತನ ಮನೆ ಎದುರು ಹಿಂದಿ ಭಾಷೆ ವಿರೋಸಿ ಪ್ರತಿಕೃತಿ ದಹಿಸುತ್ತಾರೆ. ಮಗನ ಕೈಲಿದ್ದ ಹಿಂದಿ ಪುಸ್ತಕ ಕಿತ್ತೆಸೆಯುವ ಆತ , ಹಿಂದಿ ಭಾಷೆಯಲ್ಲಿದ್ದ ನೇಮ್ ಪ್ಲೇಟ್ ಕೂಡ ಕಿತ್ತು ಹಾಕುತ್ತಾನೆ. ಮಹಾರಾಷ್ಟ್ರದ ರತ್ನಾಗಿರಿಯಲ್ಲಿರುವ ತುಕಾರಾಮ್ ಝಾಲಾಚಾ ಪಾಯಿಜೆ ಚಳವಳಿ ನೇತಾರ. ಬೆಳಗಾವಿ ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಹೋರಾಟದ ನೇತೃತ್ವ ಈತನದ್ದು. ಉತ್ತರ ಪ್ರದೇಶದ ಅನ್ವರ್ ಉರ್ದು ಪಂಡಿತ. ಉರ್ದು ಭಾಷೆ ವಿರೋಸಿದ ಕೆಲವರು ಆತನ ಮನೆಗೆ ಕೊಳ್ಳಿಯಿಡುತ್ತಾರೆ, ಮನೆ ಭಸ್ಮವಾಗುತ್ತದೆ.
ಪಂಜಾಬ್ನಲ್ಲಿರುವ ಉತ್ಪಲ್ ಮನೆಗೆ ಬಂದಾಗ ರೆಡಿಯೋದಲ್ಲಿ ಪಂಜಾಬ್ ವಿಭಜನೆಯ ಸುದ್ದಿ ಕೇಳುತ್ತಾನೆ, ಕ್ಷಣ ಕಾಲ ಅರನಾಗುತ್ತಾನೆ. ಬನಾರಸ್ನ ಶರ್ಮಾ ಸಂಸ್ಕೃತ ಪಂಡಿತ, ಬಿಹಾರದ ಮತ್ತೊಬ್ಬ ಯುವಕ ಕೃಷಿಕ. ಇವರೆಲ್ಲರಿಗೂ ಒಂದು ಟೆಲಿಗ್ರಾಂ ಬರುತ್ತದೆ ಗೋವಾದ ಮರಿಯಾ ಫರ್ನಾಂಡಿಸ್ಳಿಂದ...ನಾನು ಮರಣ ಶಯ್ಯೆಯಲ್ಲಿದ್ದೇನೆ, ಎಲ್ಲಿದ್ದರೂ ಬೇಗ ಬನ್ನಿ.
ನೆನಪಿನ ರೀಲು ೬ ವರ್ಷಗಳ ಹಿಂದಿನ ಫ್ಲ್ಯಾಶ್ಬ್ಯಾಕ್ಗೆ ಬಿಚ್ಚಿಕೊಳ್ಳುತ್ತದೆ....
ಅದು ಬೆಳಗಾವಿ, ಪೋರ್ಚುಗೀಸರ ವಶದಲ್ಲಿರುವ ಗೋವಾ ವಿಮೋಚನೆ ಹೋರಾಟಕ್ಕೆ ರಂಗಭೂಮಿ. ಎಲ್ಲೆಡೆಯಿಂದ ಅಲ್ಲಿ ಆಗಮಿಸುವ ಈ ಆರು ಯುವಕರು ಹೋರಾಟಕ್ಕಾಗಿ ಗೋವಾಕ್ಕೆ ತೆರಳುತ್ತಾರೆ. ಅಲ್ಲಿ ಅವರಿಗೆ ಮಾರ್ಗದರ್ಶಿ, ಸಾಥಿಯಾಗುವುದು ಮರಿಯಾ ಫರ್ನಾಂಡಿಸ್. ಪೋರ್ಚುಗೀಸರ ಕ್ರೌರ್ಯ ಮರಿಯಾಳ ತಂದೆ, ತಾಯಿ, ಸಹೋದರ ಹಾಗೂ ಆಕೆಯ ಶೀಲ ಕಿತ್ತುಕೊಂಡಿರುತ್ತದೆ. ಅದಕ್ಕಾಗಿ ಗೋವಾ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವುದು ಅವಳ ಹೆಬ್ಬಯಕೆ. ಈ ಆರು ಯುವಕರೊಂದಿಗೆ ಆಕೆಯೂ ಸೇರಿ ಮುನ್ನಡೆಯುವ ಗುಂಪಿನ ಹೆಸರು `ಸಾತ್ ಹಿಂದುಸ್ತಾನಿ`.
ಈ ತಂಡ ಮದ್ದು, ಗುಂಡಿನೊಂದಿಗೆ ಹೋರಾಟ ನಡೆಸುವುದಿಲ್ಲ. ಪೋರ್ಚುಗೀಸರ ಅಕಾರ ಕೇಂದ್ರಗಳ ಮೇಲೆ ಭಾರತ ಧ್ವಜ ಹಾರಿಸಿ ಸ್ವಾತಂತ್ರ್ಯಕ್ಕೆ ಪ್ರೇರೆಪಿಸುವುದು ತಂಡದ ಮುಖ್ಯ ಅಜೆಂಡಾ. ಹೀಗೆ ದೇಶದ ಹೆಸರಿನಲ್ಲಿ ಒಂದಾಗುವ ತಂಡ ಅಸ್ಪ್ರಶ್ಯತೆ, ಜಾತಿವಾದ, ಧರ್ಮಗಳ ನಡುವಿನ ಭಿನ್ನತೆಯನ್ನೂ ಕಾಣುತ್ತದೆ. ಅದೆಲ್ಲವನ್ನೂ ಮೆಟ್ಟಿ ನಿಂತು ಗೋವಾದ ನಾನಾ ಕಡೆ ಗುಪ್ತವಾಗಿ ಭಾರತ ಧ್ವಜ ಹಾರಿಸುತ್ತದೆ. ಈ ತಂಡದ ಜನಪ್ರಿಯತೆ ಹೆಚ್ಚಿದಂತೆ ಪೋರ್ಚುಗೀಸರು ಇವರಿಗಾಗಿ ತಡಕಾಡುತ್ತಾರೆ.
ಜೀವ ಕಳೆದುಕೊಂಡ ಊರುಗಳು, ಪೋರ್ಚುಗೀಸರ ಒದೆ ತಿಂದ ಜನರ ಮುಖಗಳು, ಅಪರಿಚಿತರು ಬಂದರೆ ಹೆದರಿ ಹೋಗುವ ಅವಸ್ಥೆ ಹೀಗೆ ಆಗಿನ ಗೋವಾದ ಚಿತ್ರಣ ಚಿತ್ರದಲ್ಲಿ ಮಧ್ಯೆ, ಮಧ್ಯೆ ಹಾಯ್ದು ಹೋಗುತ್ತದೆ. ಅದೊಂದು ದಿನ ಊಟ ತರಲು ಹೋದ ತುಕಾರಾಮ್ ಗೋವಾ ಫೆನ್ನಿ ಸವಿಯುತ್ತಾನೆ. ಅಮಲಿನಲ್ಲಿ ತನ್ನ ಚಪ್ಪಲಿ ಮರೆತು ಬರುತ್ತಾನೆ, ಪೊಲೀಸರು ಹುಡುಕಾಟ ಪ್ರಾರಂಭಿಸುತ್ತಾರೆ. ಉಳಿದವರನ್ನೆಲ್ಲ ದಡ ಸೇರಿಸುವ ಅನ್ವರ್ ಮಾತ್ರ ಬಂತನಾಗುತ್ತಾನೆ.
ಮಾರಿಯಾಳ ಜನ್ಮದಿನದಂದು ಉಡುಗೊರೆಯಾಗಿ ಪಣಜಿಯ ವೃತ್ತದಲ್ಲಿ ದೇಶ ಧ್ವಜ ಹಾರಿಸಲು ಉಳಿದ ಐವರು ಪಣ ತೊಡುತ್ತಾರೆ. ಧ್ವಜ ಹಾರಿಸುತ್ತಾರೆ, ಆದರೆ ಬಂತರಾಗುತ್ತಾರೆ. ಅಷ್ಟೂ ಜನರನ್ನು ಹಿಂಸಿಸಿ ಬಾಯಿ ಬಿಡಿಸಲು ಪೊಲೀಸರು ಹರ ಸಾಹಸ ಪಡುತ್ತಾರೆ. ಆದರೆ ದೇಶಭಕ್ತಿ ರಹಸ್ಯ ಹೊರಡಿಸುವುದಿಲ್ಲ. ಕೊನೆಗೆ ಐವರೂ ಬಿಡುಗಡೆಯಾಗುತ್ತಾರೆ, ಆಗ ಮರಿಯಾಳಿಗೆ ಜೈಲು ಶಿಕ್ಷೆಯಾದ ಬಗ್ಗೆ ಮಾಹಿತಿ ದೊರೆಯುತ್ತದೆ. ನಂತರ ತಮ್ಮ ಊರಿಗೆ ವಾಪಸ್ಸಾಗುತ್ತಾರೆ. ಕೊನೆಯ ದೃಶ್ಯದಲ್ಲಿ ಮರಿಯಾ ಭೇಟಿಗೆ ಎಲ್ಲರೂ ಹೊರಟು ಬರುತ್ತಾರೆ, ಆದರೆ ಅಷ್ಟರಲ್ಲಿ ಮರಿಯಾ ಹೊರಟು ಹೋಗುತ್ತಾಳೆ, ಶಾಶ್ವತವಾಗಿ ಜೀವನದಿಂದ.
ಖ್ವಾಜಾ ಅಹ್ಮದ್ ಅಬ್ಬಾಸ್ ಚಿತ್ರದ ನಿರ್ದೇಶಕರು, ಟಿ.ಪಿ.ಕೌಶಿಕ್ ಸಂಗೀತವಿದೆ, ಖ್ಯಾತ ಸಾಹಿತಿ ಕೈಫಿ ಆಜ್ಮಿ ಸಾಹಿತ್ಯ ರಚಿಸಿದ್ದಾರೆ. ಜಲಾಲ್ ಆಗಾ, ಎ.ಕೆ.ಹಾನಗಲ್, ಉತ್ಪಲ್ ದತ್ ರಂತಹ ಪ್ರತಿಭಾವಂತರು ನಟಿಸಿದ್ದಾರೆ. ೧೯೬೯ರಲ್ಲಿ ಬಿಡುಗಡೆಯಾದ ಈ ಚಿತ್ರ ೧೯೭೦ರಲ್ಲಿ ನರ್ಗಿಸ್ ದತ್ ಪ್ರಶಸ್ತಿ ಪಡೆದಿದೆ. ಅಮಿತಾಬ್ ಈ ಚಿತ್ರದಿಂದ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಉತ್ತಮ ನಟ ಪ್ರಶಸ್ತಿಯೂ ಅವರದ್ದಾಯಿತು. ಈ ಚಿತ್ರ ಬೆಳಗಾವಿಯಲ್ಲೂ ಚಿತ್ರೀಕರಣಗೊಂಡಿದ್ದು, ದೂದ್ ಸಾಗರ್ ಜಲಪಾತದ ಕಣಿವೆಯಲ್ಲೂ ಚಿತ್ರೀಕರಣ ನಡೆಸಿರುವುದು ವಿಶೇಷ. ಚಿತ್ರದ ಸಿಡಿ ಟಿ-ಸೀರೀಸ್ನಲ್ಲಿ ಲಭ್ಯ.

Friday, April 17, 2009

ಮಧು, ಮಧುರ ಚಿತ್ರ ಟ್ರಾಫಿಕ್ ಸಿಗ್ನಲ್



ನೋಡಿ, ನಿಲ್ಲಿ, ಹೊರಡಿ...ಇದು ಬೃಹತ್ ನಗರಗಳ ಆಯಕಟ್ಟಿನ ಸ್ಥಾನಗಳಲ್ಲಿರುವ ಸಿಗ್ನಲ್ಗಳು ನಮಗೆ ಕಲಿಸುವ ಪಾಠ. ಮಧುರ್ ಬಂಡಾರಕರ್ರ ಟ್ರಾಫಿಕ್ ಸಿಗ್ನಲ್ ಚಿತ್ರ ಕೂಡ ಈ ಚಿಂತನೆಯನ್ನು ವಿಸ್ತಾರವಾಗಿಸುತ್ತದೆ. ಕೆಂಪು, ಹಳದಿ, ಹಸಿರು ಬಣ್ಣಗಳು ಸಿಗ್ನಲ್ನ ಪ್ರತಿಬಿಂಬ. ಕೆಂಪು ಎಚ್ಚರಿಕೆಯ ಸಂಕೇತ, ಹಳದಿ ಕಾಮದ ದರ್ಶನವಾದರೆ, ಹಸಿರು ಸಮೃದ್ಧತೆ ಸಾರುತ್ತದೆ.
ಹಾಗೆ ನೋಡಿದರೆ ಮಧುರ್ ಈ ಚಿತ್ರದ ಮೂಲಕ ಮೂರು ಬಣ್ಣಗಳ, ವೈವಿಧ್ಯತೆ ಹಾಗೂ ಜೀವನ ಪ್ರೀತಿಯನ್ನು ಸಂಕೇತಗಳ ಮೂಲಕ ನಿರೂಪಿಸುತ್ತಾರೆ. ಟ್ರಾಫಿಕ್ ಸಿಗ್ನಲ್ ಹಿಂದಿರುವ ಜೀವಗಳ ವೇದನೆ, ಜೀವನ್ಮುಖಿ ಪ್ರೀತಿ ಹಾಗೂ ಸಂತೋಷವನ್ನು ಚಿತ್ರದ ಪಾತ್ರಗಳ ಮೂಲಕ ಕಟ್ಟಿ ಕೊಡುತ್ತಾರೆ.
ಮಧುರ್ ಚಿತ್ರಗಳಲ್ಲಿರುವ ವಿಶೇಷತೆ ಪಾತ್ರಧಾರಿಗಳದ್ದು. ಉಳಿದೆಲ್ಲ ಚಿತ್ರಗಳಲ್ಲಿ ಪಾತ್ರ ಪೋಷಣೆ ಕೇವಲ ೧೦ ರಿಂದ ೧೫ ಪಾತ್ರಧಾರಿಗಳಿಗೆ ಸೀಮಿತ. ಆದರೆ ಬಂಢಾರಕರ್ ಚಿತ್ರಗಳಲ್ಲಿ ಪಾತ್ರಧಾರಿಗಳ ಸಂಖ್ಯೆ ೨೦ ರಿಂದ ೨೫. ಇದಕ್ಕೆ ಕಾರಣ ಮಧುರ್ ಜೀವನವನ್ನು ನೋಡುವ ಬಗೆ. ಜೀವನದ ಬಗೆಗಿರುವ ಪ್ರೀತಿ ಕಾಣಬೇಕೆಂದರೆ ಅದು ಜನಸಾಮಾನ್ಯರಲ್ಲಿ ಮಾತ್ರ ಸಾಧ್ಯ. ಏಕೆಂದರೆ ಅವರು ಭಾರಿ ಹಣ, ಪ್ರತಿಷ್ಠೆ ಬಯಸುವವರಲ್ಲ. ಅಲ್ಪ ತೃಪ್ತರು.
ಟ್ರಾಫಿಕ್ ಸಿಗ್ನಲ್ ಚಿತ್ರದಲ್ಲೂ ಕೂಡ ಮಧುರ್ ಈ ತಂತ್ರ ಬಳಸಿದ್ದಾರೆ. ನಾಯಕ ಸಿಲ್ಸಿಲಾ (ಅವರಪ್ಪನೂ ಸಿನಿಮಾ ಪ್ರೇಮಿ, ಸಿಲ್ಸಿಲಾ ಚಿತ್ರದ ಬಿಡುಗಡೆಯಾದಾಗ ನಾಯಕ ಹುಟ್ಟಿದ್ದರಿಂದ ಆತನ ಹೆಸರು ಹೀಗಿದೆ) ಟ್ರಾಫಿಕ್ ಸಿಗ್ನಲ್ ಪ್ರದೇಶದ ನಾಯಕ. ಢೋಂಗಿ ಭಿಕ್ಷುಕ, ಚಿಂದಿ ಆಯುವ ಹುಡುಗ ಚಿಂದಿ ಚೋರ್, ರಸ್ತೆ ಬದಿಯ ವೇಶ್ಯೆ, ಟೀ ಅಂಗಡಿಯವ, ಸಿಗ್ನಲ್ಗಳಲ್ಲಿ ಪ್ರತಿ ದಿನ ಸಂಚರಿಸುವ ಮೇಲ್ಮಧ್ಯಮ ವರ್ಗದ ಅತೃಪ್ತ ಆತ್ಮಗಳು, ಬೀದಿ ಬದಿಯ ಚಿತ್ರ ಕಲಾವಿದ, ಉಗುಳುವ ಮೂಲಕ ಸ್ಟ್ರಾಬೆರಿ ಹಣ್ಣುಗಳಿಗೆ ಮಿಂಚು ಬರಿಸುವ ಮಾರಾಟಗಾರ, ಯಾರದ್ದೋ ಮಗುವನ್ನು ತಂದು ಭಿಕ್ಷೆ ಬೇಡುವವರು, ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು, ರಾಜಕಾರಣಿ, ಪೊಲೀಸರು....ಈ ಚಿತ್ರದ ತುಂಬ ಪಾತ್ರಧಾರಿಗಳದ್ದೇ ಜಾತ್ರೆ.
ಅಂದ ಹಾಗೆ ಚಿತ್ರದ ಪ್ರತಿ ಪಾತ್ರಧಾರಿಯೂ ವಿಶಿಷ್ಟ, ಪಾತ್ರಧಾರಿಗಳ ನಡವಳಿಕೆ, ಆಸೆ, ತೆವಲು, ಮರೀಚಿಕೆ, ಪ್ರೀತಿ, ಪ್ರೇಮ ಭಿನ್ನ, ಭಿನ್ನ. ಈ ಚಿತ್ರಕ್ಕಾಗಿ ಮಧುರ್ ಮುಂಬೈನ ಸ್ಟುಡಿಯೋವೊಂದರಲ್ಲಿ ಒಂದೂವರೆ ಕಿ.ಮೀ.ಉದ್ದದ ಬೃಹತ್ ನಗರದ ಸೆಟ್ ಹಾಕಿಸಿದ್ದರು. ಸತತ ಆರೂವರೆ ತಿಂಗಳವರೆಗೆ ಚಿತ್ರೀಕರಣ ನಡೆಸಿದ್ದರು. ಅದಕ್ಕೂ ಮೊದಲು ಟ್ರಾಫಿಕ್ ಸಿಗ್ನಲ್ ಸುತ್ತಲಿನ ಜಗತ್ತನ್ನು ಸ್ವತ: ಕಂಡು ಚಿತ್ರಕತೆ ಬರೆದಿದ್ದರು.
ಚಿತ್ರ ಸಿಗ್ನಲ್ ಸುತ್ತ ಕೇಂದ್ರೀಕೃತವಾಗಿದ್ದರೂ ಹಲವು ಸಮಸ್ಯೆ ಅನಾವರಣಗೊಳಿಸುತ್ತದೆ. ಇಡೀ ಟ್ರಾಫಿಕ್ ಸಿಗ್ನಲ್ ತೆಕ್ಕೆಗೆ ತೆಗೆದುಕೊಂಡಿರುವ ಮಾಫಿಯಾ, ಅಲ್ಲಿ ಓವರ್ ಬ್ರಿಜ್ ನಿರ್ಮಿಸಿ ಲಾಭ ಗಳಿಸುವ ದಂಧೆಕೋರರ ಹಪಾಹಪಿತನ, ಕಾಮದ ಮದೋನ್ಮತ್ತತೆ, ಹಸಿವು, ಅನಾಥ ಪ್ರಜ್ಞೆ ಹಾಗೂ ಪ್ರೀತಿ ಏಕಕಾಲಕ್ಕೆ ಪ್ರೇಕ್ಷಕರೆದುರು ಪ್ರತ್ಯಕ್ಷವಾಗುತ್ತವೆ. ಒಂದರ್ಥದಲ್ಲಿ ಚಿತ್ರ ಡಾಂಕ್ಯುಮೆಂಟರಿಯಾಗಬಹುದಾದ ಎಲ್ಲ ಸಾಧ್ಯತೆಯನ್ನು ತಮ್ಮ ಜೀವಂತಿಕೆ ನಿರ್ದೇಶನದಿಂದ ತಪ್ಪಿಸಿದ್ದಾರೆ ನಿರ್ದೇಶಕ.
ನಾಯಕ ಸಿಲ್ ಸಿಲಾ ಹಾಗೂ ಆತನ ಒಡನಾಡಿಗಳು ಎದುರಿಸುವ ಸಮಸ್ಯೆಗಳಿಗೆ ಚಿತ್ರದ ಕೊನೆಯಲ್ಲಿ ಪರಿಹಾರವನ್ನೂ ನೀಡುತ್ತಾರೆ. ಕಾರ್ನಲ್ಲಿ ಸಂಚರಿಸುವ ಮೇಲಮಧ್ಯಮ ವರ್ಗದ ಯುವತಿ ಇಟ್ಟುಕೊಂಡವನೊಂದಿಗೆ ಹೇಳುವ ಸಂಭಾಷಣೆ ನಿನಗೆ ಯಾವುದರಲ್ಲೂ ಸ್ಥಿರತೆಯಿಲ್ಲ. ಇದು ಕಾಮದ ಅತೃಪ್ತಿಗೆ ಕಾರಣವಾಗುತ್ತದೆ. ಪ್ರತಿ ದಿನ ಕಸ ಆರಿಸುವ ಚಿಂದಿ ಚೋರ್ ಸುನಾಮಿಯಲ್ಲಿ ಕಳೆದು ಹೋದ ತಂದೆಗಾಗಿ ಹಾಗೂ ಪರಿಹಾರಕ್ಕಾಗಿ ಕೂಡಿಟ್ಟ ಹಣದಲ್ಲಿ ಪರಿಹಾರ ಕೇಂದ್ರಕ್ಕೆ ಫೋನಾಯಿಸುವ ಅನಿವಾರ್ಯತೆ ಅಸಹಾಯಕತೆ ಬಿಂಬಿಸುತ್ತದೆ. ತಾನೊಬ್ಬ ಐಟಿ ಎಂಜಿನಿಯರ್ ಹಣ ಪಿಕ್ ಪಾಕೆಟ್ ಆಯಿತು ಎಂದು ಜನರಿಂದ ಹಣ ಪೀಕಿಸುವ ಮೋಸಗಾರ ಮೋಸಕ್ಕೊಳಗಾದವನಿಗೆ ಮತ್ತೆ ಭೇಟಿಯಾಗುವುದು ದುರಂತದ ಛಾಯೆಗೆ ಕಾರಣವಾಗುತ್ತದೆ. ಅವಕಾಶವಾದಿಗಳ ಮಧ್ಯೆ ಜೀವನಪ್ರೀತಿಯನ್ನಿಟ್ಟುಕೊಂಡ, ಆಶಾವಾದಿಗಳ ಚಿತ್ರವಿದು. ಸಿಗ್ನಲ್ ಚೌಕಟ್ಟಿನಲ್ಲಿ ಕೆಂಪು, ಹಳದಿ ಹಾಗೂ ಹಸಿರು ಬಣ್ಣಗಳನ್ನು ಗಾಢವಾಗಿ ಬಳಸಿದ್ದಾರೆ ಮಧುರ್. ಸಿಗ್ನಲ್ನಲ್ಲಿ ಎಲ್ಲರೂ ನಿಲ್ಲಲೇಬೇಕು, ಆದರೆ ಜನರಿಗೆ ಬೇಗ ಹೋಗುವ ಧಾವಂತ. ಬಹುಶ: ನಗರದ ಅಷ್ಟೂ ಜನರು ನನಗೆ ಒಂದಿಲ್ಲೊಂದು ದಿನ ಸಿಗ್ನಲ್ನಲ್ಲಿ ಕಂಡಿದ್ದಾರೆ ಎಂದು ನಾಯಕ ಚಿತ್ರದ ಮೊದಲು ಹೇಳುವ ಮಾತು ಚಿತ್ರಕ್ಕೂ ಅನ್ವಯವಾಗುತ್ತದೆ. ಇಂತಹದೊಂದು ಅದ್ಭುತ ಚಿತ್ರ ನಿರ್ಮಾಣವಾಗಿದ್ದರೂ ವಿದೇಶಿ ವಿಮರ್ಶಕರಿಗೆ, ಪ್ರಶಸ್ತಿ ನೀಡುವವರಿಗೆ ಈ ಚಿತ್ರ ಅಪ್ಯಾಯಮಾನವಾಗಿ ಕಂಡಿಲ್ಲ ಎಂಬುದು ವಿಷಾದ. ಆದರೆ ಮಧುರ್ ನಿರ್ದೇಶನ, ಸಂಗೀತ, ಚಿತ್ರಕತೆ, ಪಾತ್ರ ಪೋಷಣೆ ಮಾತ್ರ ಮಧು, ಮಧುರ.

Wednesday, March 25, 2009

ಮತ್ಸ್ಯ ಕನ್ಯೆಯ ಮಾಯಾ ಜಾಲ-ಶೀ ಕ್ರೀಚರ್



ಮತ್ಸ ಕನ್ಯೆಯ ಬಗ್ಗೆ ವಿಶ್ವದಲ್ಲಿ ಅದೇನೋ ಮೋಹ. ನಮ್ಮ ಪುರಾಣ ಕತೆಗಳಲ್ಲೂ ಮತ್ಸ್ಯ ಕನ್ಯೆಯರು ಕಾಣಿಸಿಕೊಂಡ ಉದಾಹರಣೆಗಳಿವೆ. ಅಜ್ಜ, ಅಜ್ಜಿಯರು ಹೇಳುತ್ತಿದ್ದ ಕತೆಗಳಲ್ಲೂ ಸುಂದರ ಮತ್ಸ್ಯ ಕನ್ಯೆಯರ ವರ್ಣನೆಯಿದೆ. ಆದರೆ ಮತ್ಸ್ಯ ಕನ್ಯೆಯರು ವಿಷ ಕನ್ಯೆಯರೂ ಆಗಬಲ್ಲರು, ಕೊಲೆಗಡುಕರೂ ಆಗಿರಬಹುದು ಎಂಬ ಭಾವನೆಗಳಿಗೆ ಇಂಬು ನೀಡುವ ಚಿತ್ರ ಶಿ ಕ್ರೀಚರ್.
ಎರಡು ಶತಮಾನಗಳ ಹಿಂದಿನ ಕತೆಯ ಈ ಚಿತ್ರ ನಿರ್ಮಾಣವಾಗಿದ್ದು ೨೦೦೧ರಲ್ಲಿ. ಜಾತ್ರೆಗಳಲ್ಲಿ ಮತ್ಸ್ಯಕನ್ಯೆ ತೋರಿಸುವ, ವಿಚಿತ್ರ ಅಂಗಗಳನ್ನು ಹೊಂದಿರುವ ಮಹಿಳೆಯರ ಪ್ರದರ್ಶನವನ್ನು ನಾವು ಕಂಡಿರುತ್ತೇವೆ. ಅಂತಹದ್ದೇ ಪ್ರದರ್ಶನಗಳನ್ನು ನಡೆಸುವ ಒಂದು ತಂಡದ ಸುತ್ತ ಕತೆ ಸುತ್ತುತ್ತದೆ. ಜಾಂಬಿ ಎನ್ನುವ ಆಫ್ರಿಕಾದ ದೆವ್ವ ಹಾಗೂ ಹಾಡುವ ಮತ್ಸ್ಯ ಕನ್ಯೆ ತೋರಿಸುತ್ತೇನೆ ಎನ್ನುವ ನಾಯಕ ಢೋಂಗಿ ಪ್ರದರ್ಶನ ನಡೆಸಿ ಹಣ ಗಳಿಸುತ್ತಾನೆ. ಜಾಂಬಿ ಎಂಬ ದೆವ್ವಕ್ಕೆ ಆಫ್ರಿಕಾದ ವ್ಯಕ್ತಿ ಪಾತ್ರಧಾರಿ, ಇನ್ನು ಮತ್ಸ್ಯಕನ್ಯೆಯೋ ಸಾಮಾನ್ಯ ಹುಡುಗಿ. ವೇದಿಕೆ ಹಿಂಭಾಗದಲ್ಲಿ ಗ್ರಾಮಾಫೋನ್ ನುಡಿಸಿ ಮತ್ಸ್ಯಕನ್ಯೆಯ ಗಾನ ಪ್ರದರ್ಶನ.
ಇಂತಿಪ್ಪ ಪ್ರದರ್ಶನಗಳು ನಡೆದ ನಂತರ ಒಂದು ದಿನ ವೃದ್ಧನೊಬ್ಬ ಮತ್ಸ್ಯ ಕನ್ಯೆಯನ್ನು ಕಾಣಲು ಟೆಂಟ್ಗೆ ಬರುತ್ತಾನೆ. ಮತ್ಸ್ಯ ಕನ್ಯೆ ಕಂಡು ಆತನ ಕಣ್ಣಲ್ಲಿ ಧಾರಾಕಾರ ನೀರು. ಮತ್ಸ್ಯಕನ್ಯೆ ಕಂಡು ಇವನ್ಯಾಕಪ್ಪಾ ಅಳೋದು ಎಂದುಕೊಂಡ ನಾಯಕ ಆ ವೃದ್ಧನನ್ನು ಮನೆಗೆ ಕಳಿಸಲು ತೆರಳುತ್ತಾನೆ ನಕಲಿ ಮತ್ಸ್ಯಕನ್ಯೆ ಅಂದರೆ ನಾಯಕಿಯೊಂದಿಗೆ. ಆದರೆ ಆ ವೃದ್ಧ ಇವರಿಗೆ ಅಸಲಿ ಮತ್ಸ್ಯ ಕನ್ಯೆ ತೋರಿಸಿದಾಗ ಇಬ್ಬರೂ ದಂಗು ಬಡಿಯುತ್ತಾರೆ.
ಆ ಮತ್ಸ್ಯ ಕನ್ಯೆ ಕೊಲೆಗಡುಕಿ, ಅದಕ್ಕೆ ಆಕೆಯನ್ನು ಬಂಸಿಟ್ಟಿದ್ದೇನೆ ಎಂಬ ಸಮಜಾಯಿಷಿ ವೃದ್ಧನದ್ದು. ಹೇಗಾದರೂ ಮಾಡಿ ಈ ಮತ್ಸ್ಯಕನ್ಯೆ ಹೊತ್ತೊಯ್ದರೆ ಹೇರಳ ಹಣ ಗಳಿಸಬೇಕೆಂಬುದು ನಾಯಕನ ದುರಾಸೆ. ಜಾಂಬಿ ದೆವ್ವದ ವೇಷಧಾರಿ ಹಾಗೂ ನಾಯಕ ವೃದ್ಧನಿಗೆ ಗೊತ್ತಾಗದಂತೆ ಮತ್ಸ್ಯಕನ್ಯೆಯ ಅಪಹರಣಕ್ಕೆ ಮುಂದಾಗುತ್ತಾರೆ. ಆಗ ವೃದ್ಧ ಆಕಸ್ಮಿಕವಾಗಿ ಸಾವನ್ನಪ್ಪುತ್ತಾನೆ. ಮತ್ಸ್ಯ ಕನ್ಯೆಯನ್ನು ಹಡಗಿನಲ್ಲಿ ಹೇರಿಕೊಂಡು ಹೊರಡುವಾಗ ಆಕೆಯ ಸಂಕಟ, ತಪನೆಗಳೆಲ್ಲವೂ ನಾಯಕಿ ಕಣ್ಣಿಗೆ ಎದುರಾಗುತ್ತವೆ. ಈ ಮತ್ಸ್ಯ ಕನ್ಯೆಯ ರಹಸ್ಯ ಚಿತ್ರದ ಉತ್ತರಾರ್ಧದಲ್ಲಿ ತೆರೆದುಕೊಳ್ಳುತ್ತದೆ.
ಮೆರ್ ಮೇಡ್ ಕ್ರೋನಿಕಲ್ಸ್ ಎಂಬ ಸರಣಿ ಚಿತ್ರಗಳ ಮೊದಲ ಚಿತ್ರವಿದು. ಐರ್ಲೆಂಡ್ ಪ್ರದೇಶದ ಕತೆ ಹಂದರದ ಚಿತ್ರದ ನಿರ್ದೇಶಕ ಸೆಬಾಸ್ಟಿಯನ್ ಗುಟ್ರೆಜ್. ನಾಯಕ ರಫೆಲ್ ಸೆವೆಲ್, ನಾಯಕಿ ಕಾರ್ಲಾ ಗುಗಿನೋ, ಮತ್ಸ್ಯಕನ್ಯೆಯಾಗಿದ್ದು ರಾಯಾ ಖಿಲ್ಸೆಸ್ಡ್. ಕುತೂಹಲಕಾರಿ ಚಿತ್ರಗಳ ಖ್ಯಾತ ನಿರ್ಮಾಪಕ ಸ್ಯಾಮುಯೆಲ್ ಅರ್ಕಾಫ್ಗೆ ಈ ಚಿತ್ರ ಅರ್ಪಿಸಲಾಗಿದೆ. ಮತ್ಸ್ಯಕನ್ಯೆಯ ಬಗ್ಗೆ ಆಸಕ್ತಿ ಇದ್ದವರೆಲ್ಲ ನೋಡಬಹುದು.

Friday, March 20, 2009

ಸತ್ತಾ ...



ಅಣ್ಣಾ ನಾ ಸಂಡಾಸಿಗೆ ಹೋಗ್ತೀನಿ, ಈ ಹೆಣ್ಣು ಮಗಳ ಮಾತಿನಲ್ಲಿ ದಮ್ ಇಲ್ಲ...ಹೀಗೆ ಸತ್ತಾ ಚಿತ್ರದ ಉತ್ತರಾರ್ಧದಲ್ಲಿ ಚುನಾವಣೆ ಪ್ರಚಾರದ ಭಾಷಣ ಕೇಳುವ ಮತದಾರನೊಬ್ಬ ಹೇಳುತ್ತಾನೆ. ಆತ ಹೇಳುವ ಮಾತು ಚಿತ್ರದ ನಾಯಕಿ ಅರುಂಧತಿ ಬಗ್ಗೆ. ಸಚಿವ ಅಜಯ್ ಚವ್ಹಾಣನ ಸೊಸೆ ಅರುಂಧತಿ ಆಗಷ್ಟೇ ಚುನಾವಣೆ ಪ್ರಚಾರ ಭಾಷಣ ಮಾಡುತ್ತಿದ್ದಾಳೆ. ಆಕೆಯ ಗಂಡ ವಿವೇಕ್ ಜೈಲಿನಲ್ಲಿದ್ದಾನೆ, ಕಾರಣ ಬಾರ್ನಲ್ಲಿ ಅಪರಾತ್ರಿ ಮದ್ಯ ನೀಡದಿರುವ ಕಾರಣಕ್ಕೆ ಯುವತಿಯನ್ನು ಕೊಂದಿದ್ದು.
ಮುಂದಿನ ದೃಶ್ಯದಲ್ಲಿ ಅರುಂಧತಿಯ ವಿರೋ ಅಭ್ಯರ್ಥಿಧೋತ್ರೆ ಭಾಷಣದಲ್ಲಿ ಹೇಳುತ್ತಾನೆ, ಆಕೆಯಿನ್ನೂ ಹೊಸಬಳು, ಅದಕ್ಕೂ ಹೆಚ್ಚಾಗಿ ಹೆಂಗಸು. ಮಹಿಳೆಯರಿಗೇನು ರಾಜಕೀಯ ಜ್ಞಾನವಿರುತ್ತದೆ, ನನಗೆ ಮತ ಹಾಕಿ, ಮುಂದೆ ಅಭಿವೃದ್ಧಿ ನೋಡಿ. ಅಲ್ಲೇ ಪ್ರಚಾರಕ್ಕೆ ಹೋಗುತ್ತಿದ್ದ ಅರುಂಧತಿ ಮೈಕ್ ಕಸಿದುಕೊಂಡು ಹೇಳುತ್ತಾಳೆ, ನಾನು ಸ್ತ್ರೀ ಎಂದು ಹೀಯಾಳಿಸಬೇಡಿ. ಜನರ ಸಮಸ್ಯೆಗಳ ಬಗ್ಗೆ ನಂಗೊತ್ತು, ಮಹಿಳೆಯರಿಗೆ ಮನೆಯೂ ಗೊತ್ತು, ರಾಜಕೀಯವೂ ಗೊತ್ತು. ಆಗ ಕೈಯಲ್ಲಿ ಬಕೆಟ್ ಹಿಡಿದ ಅದೇ ವ್ಯಕ್ತಿ ಹೇಳುತ್ತಾನೆ ಅಣ್ಣಾ ಈಗ ಧೋತ್ರೆ ಸಂಡಾಸಿಗೆ ಹೋಗ್ತಾನೆ.
ಖ್ಯಾತ ನಿರ್ದೇಶಕ ಮಧುರ್ ಬಂಢಾರಕರ್ ತಮ್ಮ ಚಿತ್ರದಲ್ಲಿ ಮಹಿಳೆಯರಿಗಾಗುವ ದೌರ್ಜನ್ಯ ಹಾಗೂ ಅದನ್ನು ಮಹಿಳೆ ಮೆಟ್ಟಿ ನಿಲ್ಲುವ ಬಗೆ ತೋರಿಸುವುದು ಹೀಗೆ. ಸತ್ತಾ ಅವರ ಎರಡನೇ ಚಿತ್ರ, ನಾಯಕಿ ರವೀನಾ ಟಂಡನ್. ಮೇಲ್ಮಧ್ಯಮ ವರ್ಗದ ಯುವತಿ ಹೇಗೆ ಅಕಾರ ಶಾಹಿ ರಾಜಕಾರಣಕ್ಕಿಳಿದು ಗೆಲ್ಲುತ್ತಾಳೆ ಎಂಬುದನ್ನು ಅವರು ಕಣ್ಣಿಗೆ ಕಟ್ಟುವಂತೆ ತೋರಿಸುತ್ತಾರೆ ಎನ್ನುವುದಕ್ಕೆ ಮೇಲಿನ ಎರಡು ದೃಶ್ಯಗಳು ಸಾಕ್ಷಿ. ಮಧುರ್ ಚಿತ್ರಗಳಲ್ಲಿ ಹೇರಳ ಪಾತ್ರಧಾರಿಗಳಿರುತ್ತಾರೆ, ಅದಕ್ಕೆ ಕಾರಣ ಚಿತ್ರ ಕತೆಯ ವ್ಯಾಪ್ತಿ.
ಸತ್ತಾ ಚಿತ್ರದ ನಾಯಕಿ ಅರುಂಧತಿ ರಾಜಕಾರಣಿ ವಿವೇಕ್ ಚವ್ಹಾಣ್ನನ್ನು ಪ್ರೇಮಿಸಿ ಮದುವೆಯಾಗುತ್ತಾಳೆ. ಮದುವೆಯಾದ ನಂತರ ಆತನ ಬಣ್ಣ ಬಯಲಾಗತೊಡಗುತ್ತದೆ. ಅಕಾರಕ್ಕಾಗಿ ಆತನ ಹಪಾಹಪಿ, ಬೆಲೆವೆಣ್ಣುಗಳ ಸಹವಾಸ, ಗೂಂಡಾಗಳ ಸ್ನೇಹ ಹೀಗೆ. ಮನೆಯಲ್ಲೂ ಅಷ್ಟೇ ಸೊಸೆ ತುಟಿ ಪುಟಕ್ಕೆನ್ನುವಂತಿಲ್ಲ, ಆಕೆ ಪತಿಯ ಶಯ್ಯಾ ಗೃಹದ ಕೋಣೆಗಷ್ಟೇ ಸೀಮಿತ. ಆದರೆ ಅನಿವಾರ್ಯ ಕಾರಣವೊಂದರಲ್ಲಿ ಚುನಾವಣೆಗೆ ರ್ಸ್ಪಸುವ ಅರುಂಧತಿ ಶಾಸಕಿಯಾಗುತ್ತಾಳೆ, ಆಗ ಪಕ್ಷದ ನಾಯಕ ಯಶವಂತ್ನೊಂದಿಗೆ ಪ್ರೇಮ, ಕಾಮದಾಟ ನಡೆಯುತ್ತದೆ. ಜೈಲಿನಲ್ಲಿರುವ ವಿವೇಕ್ ಹೆಂಡತಿಯಿದ್ದರೂ ಬೆಲೆವೆಣ್ಣುಗಳೊಂದಿಗೆ ಮೌಲ್ಯಯುತ ಸಂಬಂಧ ಹೊಂದಿರುತ್ತಾನೆ. ಇತ್ತ ಮಾವ ಮತ್ತೊಬ್ಬ ಹೆಂಗಸಿನ ಸಹವಾಸದಲ್ಲೂ ಇರುತ್ತಾನೆ. ಪುರುಷ ಮಾಡಿದ್ದೆಲ್ಲ ಸರಿ, ಆದರೆ ಮಹಿಳೆ ಪುರುಷನ ಥರ ಜೀವಿಸಿದರೆ ತಪ್ಪು ಎನ್ನುವ ಮನೋಭಾವನೆಯನ್ನು ಈ ಎಲ್ಲ ಪಾತ್ರಗಳ ಮೂಲಕ ಬಡಿದೆಬ್ಬಿಸುತ್ತಾರೆ ಮಧುರ್.
ಕೊನೆಗೆ ಈ ಎಲ್ಲ ಸಮಸ್ಯೆಗಳ ಮಧ್ಯೆಯೂ ಅರುಂಧತಿ ಹೇಗೆ ತನ್ನ ಅಸ್ತಿತ್ವ ನಿರ್ಮಿಸಿಕೊಳ್ಳುತ್ತಾಳೆ ಎಂಬುದು ಚಿತ್ರದ ತಿರುಳು. ಉತ್ತಮ ಸಂಗೀತ, ಸಂಭಾಷಣೆ, ಛಾಯಾಗ್ರಹಣದೊಂದಿಗೆ ಮಧುರ್ ಸ್ಪೆಷಲ್ ಎಫೆಕ್ಟ್ ಚಿತ್ರದಲ್ಲಿ ಎದ್ದು ಕಾಣುತ್ತದೆ, ಒಮ್ಮೆ ನೋಡಬಹುದಾದ ಚಿತ್ರ.


Wednesday, February 25, 2009

ಬಾದಾಮಿಯಲ್ಲಿ `ನಾನಾ'ವತಾರ



ನಾನಾ ಪಾಟೇಕರ್ ಹಿಂದಿ ಚಿತ್ರರಂಗದ ವಿಲಕ್ಷಣ, ಪ್ರತಿಭಾವಂತ ನಟ. ನಾನಾ ಮಾಧ್ಯಮಗಳಿಂದ ದೂರವಿದ್ದರೂ ಸುದ್ದಿಯಾಗುತ್ತಾರೆ. ಹೆಚ್ಚು ಮಾತನಾಡುವುದಿಲ್ಲ, ಕೆಲಸಕ್ಕಷ್ಟೇ ಮಹತ್ವ. ಅಂಕುಶ್, ಪ್ರಹಾರ್, ಯಶವಂತ್, ಅಗ್ನಿ ಸಾಕ್ಷಿಯಂತಹ ಗಂಭೀರ ಚಿತ್ರಗಳೊಂದಿಗೆ ವೆಲ್‌ಕಮ್‌ನಂತಹ ಹಾಸ್ಯ ಭರಿತ ಚಿತ್ರಗಳ ಮೂಲಕವೂ ಜನರಿಗೆ ಚಿರಪರಿಚಿತ ಈ ನಟ.
ಗಿದ್‌ನಂತಹ ಕಲಾತ್ಮಕ ಚಿತ್ರದಲ್ಲಿ ತಲೆಹಿಡುಕ, ಕ್ರಾಂತಿವೀರ್‌ನಲ್ಲಿ ಕ್ರಾಂತಿಕಾರಿ ಯುವಕ, ಯಶವಂತ್‌ನಲ್ಲಿ ಪೊಲೀಸ್ ಅಕಾರಿ ಪಾತ್ರದೊಂದಿಗೆ ಅಗ ಅಂಬಾ ಬಾಯಿ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದು ಈ ನಾನಾ. ಗಣೇಶ ಚತುರ್ಥಿಯಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸದೆ ಮನೆಯಲ್ಲಿದ್ದುಕೊಂಡು ಗಣೇಶನ ಆರಾಧನೆ ನಡೆಸುವ ಈ ನಟನಿಗೆ ಕಂಟ್ರಿ ಸಾರಾಯಿ ಅಂದ್ರೆ ಪಂಚ ಪ್ರಾಣ. ರಾಷ್ಟ್ರೀಯ ಮಟ್ಟದ ಶೂಟಿಂಗ್‌ನಲ್ಲಿ ಚಿನ್ನದ ಪದಕ ಪಡೆದ, ಹೊಸತನಕ್ಕೆ ತುಡಿಯುವ ಈ ನಟನ ಕಂಡರೆ ನನಗೇಕೋ ಭಾಳ ಪ್ರೀತಿ. ಇಂತಿಪ್ಪ ನಾನಾ ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಗೆ ಬಂದಾಗ ಸಂದರ್ಶನ ನಡೆಸಲು ಪ್ರಯತ್ನಿಸಿದ್ದೆ. ಆದರೆ ಮಾಧ್ಯಮದವರಿಂದ ಒಂದಡಿ ದೂರ ಉಳಿಯುವ ನಾನಾರಿಂದಾಗಿ ಪ್ರಯತ್ನ ವಿಫಲವಾಗಿತ್ತು.
ಆದರೆ ೨೦೦೬ರಲ್ಲಿ ನಾನಾ ಬಾದಾಮಿಯಲ್ಲಿ ರಾಣಾ ತೆಲಗು ಹಾಗೂ ತಮಿಳು ಚಿತ್ರದ ಶೂಟಿಂಗ್‌ಗೆ ಬಂದಿದ್ದರು. ಅಂತಹ ಅವಕಾಶ ಬಿಡಲು ಹೇಗೆ ಸಾಧ್ಯ ?. ಮರು ದಿನವೆ ಬಾದಾಮಿಯಲ್ಲಿದ್ದೆ, ನೆಚ್ಚಿನ ನಟನ ಸಂದರ್ಶನ ನಡೆಸಲು. ಗುಹಾಂತರ ದೇವಾಲಯದಲ್ಲಿ ನಾನಾ ನಟಿ ಕಾಜೋಲ್ ಅಗರವಾಲ್ ಜತೆ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ಬಿಡುವಿನ ಸಮಯದಲ್ಲಿ ಆಟೋಗ್ರಾಫ್ ಕೇಳಲು ಬಂದ ಇಬ್ಬರನ್ನು ದಬಾಯಿಸಿದರು. ಅಷ್ಟರಲ್ಲೇ ಯುನಿಟ್‌ನ ಹುಡುಗರು ನೀವು ಈಗ ಸಂದರ್ಶನಕ್ಕೆ ಹೋದರೆ ಅವರು ಹತ್ತಿರಕ್ಕೆ ಕರೆಯುವುದಿಲ್ಲ ಸ್ವಲ್ಪ ತಡೆಯಿರಿ, ಅವರ ಮೂಡ್ ಕೆಟ್ಟರೆ ಪ್ಯಾಕಪ್ ಮಾಡಬೇಕಾಗುತ್ತದೆ ಎಂದು ಹೆದರಿಸಿದರು.
ನಾನಾ ಸಂದರ್ಶನ ಪಡೆಯಲೇಬೇಕು ಎಂದು ಪಣ ತೊಟ್ಟಿದ್ದ ನಾನು ಅಲ್ಲಿದ್ದ ವಾತಾಪಿ ಗಣಪತಿಗೆ ಏನಾದರೂ ಮಾಡಪ್ಪಾ ದೇವಾ ಎಂದು ಬೇಡಿಕೊಂಡೆ. ಶೂಟಿಂಗ್ ಮುಗಿಸಿದ ನಾನಾ ದೇವಾಲಯದ ಮೆಟ್ಟಿಲು ಇಳಿಯತೊಡಗಿದರು. ತಕ್ಷಣ ಧಾವಿಸಿದ ನಾನು ಪರಿಚಯ ಮಾಡಿಕೊಂಡು ನಿಮ್ಮನ್ನೊಂದಿಷ್ಟು ಪ್ರಶ್ನೆ ಕೇಳಬೇಕು ಎಂದೆ. ಹೂ ಅಂದರು ನಾನಾ.
ಹೀಗೆ ಶುರುವಾದ ವಾಕ್ ಇನ್ ಟಾಕ್ ಸಂದರ್ಶನದಲ್ಲಿ ನನ್ನ ಮೊದಲ ಪ್ರಶ್ನೆ, ನೀವು ಕರ್ನಾಟಕಕ್ಕೆ ಹಲವು ಬಾರಿ ಬಂದಿದ್ದೀರಿ ಹೇಗನಿಸುತ್ತೆ ? ಕರ್ನಾಟಕ ಉತ್ತಮ ಪ್ರದೇಶ ಎಂದು ನನ್ನತ್ತ ನೋಡಿದರು ನಾನಾ. ಮೊದಲ ಪ್ರಶ್ನೆ ಪೀಠಿಕೆ ಸರಿಯಾಗಲಿಲ್ಲ ಎಂದು ಮತ್ತೊಂದು ಪ್ರಶ್ನೆ ಕೇಳುವ ಭರದಲ್ಲಿ ನೀವು ಪರಿಂದಾ ಚಿತ್ರಕ್ಕಾಗಿ ಬೆಳಗಾವಿಗೆ ಬಂದಿದ್ದೀರಿ, ಹೇಗಿತ್ತು ಅನುಭವ ? ಅದು ಪರಿಂದಾ ಅಲ್ಲ ಪ್ರಹಾರ್ ಎಂದು ಸರಿಪಡಿಸಿದರು ಅವರು.
ನೀವು ರಾಷ್ಟ್ರೀಯ ಶೂಟಿಂಗ್‌ನಲ್ಲಿ ಚಿನ್ನ ಗೆದ್ದಿದ್ದೀರಿ, ಚಿತ್ರಗಳಲ್ಲೂ ಅಭಿನಯಿಸುತ್ತೀರಿ ಎರಡನ್ನೂ ನಿಭಾಯಿಸುವುದು ಹೇಗೆ ? ನನಗೆ ಶೂಟಿಂಗ್ ಅಂದ್ರೆ ಇಷ್ಟ, ಅದು ಫಿಲ್ಮ್ ಆಗಿರಲಿ ಅಥವಾ ಗನ್ ಆಗಿರಲಿ. ಒಂದು ವರ್ಷ ಒಂದೇ ಚಿತ್ರ ಎನ್ನುವ ನಿಯಮಕ್ಕೆ ಅಂಟಿಕೊಂಡಿರುವುದರಿಂದ ನಿಭಾಯಿಸುತ್ತೇನೆ. ಟ್ಯಾಕ್ಸಿ ೯೨೧೧ ಚಿತ್ರದಲ್ಲಿ ಹಾಸ್ಯ ಪಾತ್ರ ಮಾಡಿದ್ದೀರಿ, ತೀರಾ ಸೀರಿಯಸ್ ಪಾತ್ರ ಬಯಸುವ ನೀವು ಅದನ್ನು ಹೇಗೆ ಒಪ್ಪಿಕೊಂಡಿರಿ ? ಹಾಗೆನಿಲ್ಲ ಅದು ಹಾಸ್ಯದಂತೆ ಕಂಡರೂ ಸೀರಿಯಸ್ ಪಾತ್ರವೆ. ನಟನೊಬ್ಬನ ಸಾಮರ್ಥ್ಯ ಪ್ರದರ್ಶನಕ್ಕೆ ಎಲ್ಲ ಬಗೆಯ ಪಾತ್ರಗಳು ಅವಶ್ಯ. ರಾಣಾ ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ, ನಾನು ಸಿನಿಮಾ ನಿರ್ದೇಶಕ. ಬಾಲಿವುಡ್‌ನ ಸಿನಿಮಾಕ್ಕೆ ಸಂಬಂಸಿದಂತೆ ಚಿತ್ರದ ಕಥೆಯಿದೆ ಎನ್ನುವ ಉತ್ತರ ದೊರೆಯಿತು. ಇನ್ನೆರಡು ಪ್ರಶ್ನೆ ಕೇಳುವಷ್ಟರಲ್ಲಿ ಮೆಟ್ಟಿಲು ಇಳಿದಾಗಿತ್ತು. ಹವಾನಿಯಂತ್ರಿತ ವಾಹನದತ್ತ ನಾನಾ ಪಾದ ಬೆಳೆಸಿದರು. ನಾನು ನಿಮ್ಮ ಚಿತ್ರಗಳ ಅಭಿಮಾನಿ ಎಂದಾಗ ನಾನಾ ಮೊಗದಲ್ಲಿ ನಗು, ನನಗೊಂದು ಥ್ಯಾಂಕ್ಸ್ ಕೊಟ್ಟು ಹೊರಟೇ ಬಿಟ್ಟರು. ಹೀಗೆ ವಿಲಕ್ಷಣ ನಟನೊಬ್ಬನ ಸಂದರ್ಶನ ಮಾಡಿದ ಖುಷಿ, ನೆಚ್ಚಿನ ನಟನ ಮಾತನಾಡಿಸಿದ ತೃಪ್ತಿ ದೊರೆಯಿತು. ನಮ್ಮ ಪತ್ರಿಕೆಯಲ್ಲಿ ಹಾಗೂ ಸಿನಿ ವಿಜಯದಲ್ಲಿ ಸಂದರ್ಶನವೂ ಪ್ರಕಟವಾಯಿತು. ಅಂದ ಹಾಗೆ ಇಷ್ಟೆಲ್ಲ ಹೇಳಲು ಕಾರಣವೆಂದರೆ ಬಾದಾಮಿಯಲ್ಲಿ ಚಿತ್ರೀಕರಣಗೊಂಡ ರಾಣಾ ಚಿತ್ರ ಈಗ ಬಿಡುಗಡೆಯಾಗಿದೆ.

Friday, February 6, 2009

ಪರ ಸತಿ ಪ್ರಿಯನ ಪ್ರೇಮ-ಬೆಡ್ ಆಂಡ್ ಬೋರ್ಡ್


ಪರ ಸಂಗದ ಪರಿಣಾಮಗಳ ಬಗ್ಗೆ ಎಚ್ಚರಿಸುವ ಚಿತ್ರವಿದು. ನಾಯಕ ಆಂಟೋನ್, ಪತ್ನಿ ಕ್ರಿಸ್ಟೀನ್‌ಳೊಂದಿಗೆ ಪುಟ್ಟ ಪಟ್ಟಣದ ವಾಸಿ. ಹೂವಿನ ವ್ಯಾಪಾರದ ಆಂಟೋನ್‌ಗೆ ಜೀವನದ ಬಗ್ಗೆ, ಹುಡುಗಿಯರ ಬಗ್ಗೆ ವಿಚಿತ್ರ ಆಕರ್ಷಣೆ. ಕಾಮ ಮಧುರ ಎನ್ನುವ ಖಯಾಲಿಯವ. ಇಂತಿಪ್ಪ ಆಂಟೋನ್ ಜಪಾನಿ ಹುಡುಗಿಯೊಬ್ಬಳ ಸಂಗ ಮಾಡುತ್ತಾನೆ.
ಇತ್ತ ಪತ್ನಿ ಕ್ರಿಸ್ಟೀನ್ ಗರ್ಭಿಣಿಯಾದರೆ ಅತ್ತ ಆಂಟೋನ್‌ಗೆ ಜಪಾನಿ ಭಾಷೆ ಸಾಂಗತ್ಯ. ಪುಟ್ಟ ಕಣ್ಣುಗಳ ಸುಂದರಿ ಕೊಯ್ಕೊಳೊಂದಿಗೆ ಊಟ, ಉಪಹಾರ, ನಿದ್ದೆ. ಕೊನೆಗೊಂದು ದಿನ ಕ್ರಿಸ್ಟೀನ್‌ಗೆ ಆಂಟೋನ್ ಸಂಬಂಧ ತಿಳಿಯುವ ದೃಶ್ಯ ಕುತೂಹಲಕಾರಿ. ಕೊಯ್ಕೊ ಜಪಾನಿ ಸಂಪ್ರದಾಯದಂತೆ ಹೂವುಗಳಲ್ಲಿ ಬರೆದಿಟ್ಟ ಪ್ರೇಮ ಪತ್ರ ಆಂಟೋನ್‌ಗೆ ಕಳುಹಿಸಿರುತ್ತಾಳೆ. ಆದರೆ ಹೂವಿನಲ್ಲಿ ಪ್ರೇಮ ಪತ್ರವಿರುವುದು ಆಂಟೋನ್‌ಗೆ ಗೊತ್ತಿಲ್ಲ. ಮನೆಯಲ್ಲಿ ಹೂಗುಚ್ಛದಲ್ಲಿ ತಂದಿಟ್ಟ ಹೂಗಳು ಒಂದು ದಿನ ಅರಳುತ್ತವೆ. ಆಂಟೋನ್ ಮನೆಯಲ್ಲಿರದ ಸಮಯದಲ್ಲಿ ಕುತೂಹಲದಿಂದ ಹೂವಿನೆಡೆ ಸಾಗುವ ಕ್ರಿಸ್ಟೀನ್ ಪ್ರೇಮ ಪತ್ರ ಕಾಣುತ್ತಾಳೆ.
ನಂತರ ಮನೆ ಬಿಟ್ಟು ಹೋಗುವ ಆಂಟೋನ್ ಜಪಾನಿ ಭಾಷೆಯ ಉನ್ನತಾಭ್ಯಾಸದಲ್ಲಿ ತೊಡಗುತ್ತಾನೆ. ಆದರೆ ಈ ಬದಲಾವಣೆಗಳನ್ನೆಲ್ಲ ನಿರ್ದೇಶಕ ನಾಲ್ಕು ದೃಶ್ಯಗಳಲ್ಲಿ ತೆರೆದಿಟ್ಟಿದ್ದಾರೆ. ಸೋಮವಾರದಿಂದ ಶನಿವಾರದವರೆಗೆ ಜಪಾನಿ ಸಂಪ್ರದಾಯದ ಪ್ರಕಾರ ಊಟಕ್ಕೆ ಕುಳಿತಾಗ ಫ್ರೆಂಚ್ ಸಂಪ್ರದಾಯದ ಆಂಟೋನ್ ಅನುಭವಿಸುವ ಯಾತನೆ ಜಪಾನಿ ಪ್ರೇಮದ ತಾತ್ಸಾರಕ್ಕೆ ಕಾರಣವಾಗುತ್ತದೆ. ಕೊನೆಗೆ ತನಗೆ ಜಪಾನಿ ಸಂಸ್ಕೃತಿ, ಹುಡುಗಿ ಒಪ್ಪದು ಎಂದು ನಿರ್ಧರಿಸಿದ ಆಂಟೋನ್ ಮನೆಗೆ ವಾಪಸ್ಸಾಗುತ್ತಾನೆ.
ಚಿಕ್ಕ ಕತೆಯೊಂದನ್ನು ಸಮರ್ಥವಾಗಿ ಹೇಗೆ ಬಿಂಬಿಸಬಹುದು ಎಂಬುದಕ್ಕೆ ಈ ಚಿತ್ರ ಉದಾಹರಣೆ. ಎರಡು ಸಂಸ್ಕೃತಿಗಳ ಸಮ್ಮಿಲನವೂ ಎಷ್ಟು ಕಷ್ಟಕರ ಎಂಬುದು ಕೂಡ ಇಲ್ಲಿ ಬಿಂಬಿತವಾಗುತ್ತದೆ. ನಿರ್ದೇಶಕ ಕಟ್ಟಿ ಕೊಡುವ ಕೆಲ ದೃಶ್ಯಗಳಲ್ಲಿ ಪರ ಸಂಗದ ಪರಿಣಾಮ, ಶುಭ್ರ ಪ್ರೀತಿಯ ಅನುಭವ ನಮ್ಮದಾಗುತ್ತದೆ. ಅಂದ ಹಾಗೆ ಫ್ರೆಂಚ್ ಭಾಷೆಯಲ್ಲಿ ಡೊಮಿಸೈಲ್ ಕೊಂಜುಗಲ್ ಹೆಸರಿನ ಈ ಚಿತ್ರ ಇಂಗ್ಲೀಷ್ ಅವತರಣಿಕೆಯಲ್ಲಿ ಬೆಡ್ ಆಂಡ್ ಬೋರ್ಡ್ ಆಗಿದೆ. ನಿರ್ದೇಶಕ ಫ್ರಾನ್ಸಿಸ್ ಟ್ರಾಫ್ಯಾಟ್. ಜೀನ್ ಪಿಯರ್, ಕ್ಲೌಡಾ ಜೇಡ್ ಮುಖ್ಯ ಪಾತ್ರಧಾರಿಗಳು. ಚಿತ್ರ ಬಿಡುಗಡಗೊಂಡ ವರ್ಷ ೧೯೭೦.